ಕಾಂಗ್ರೆಸ್‌ಗೆ ಕರ್ನಾಟಕದ ಮೇಲೆ ಕಣ್ಣಿದೆ. ಲೋಕಸಭೆಗೆ ಕಾಂಗ್ರೆಸ್‌ಗೆ ಇಲ್ಲಿನ ಎಟಿಎಂ ಬೇಕು.‌ ಇಲ್ಲಿ ಹತ್ತು ಸಾವಿರ ಕೋಟಿ ಲೂಟಿ ಮಾಡುವ ಎಟಿಎಂ ಅವರಿಗೆ ಬೇಕು. ಮುಂದಿನ ಲೋಕಸಭೆ ಚುನಾವಣೆ ಎದುರಿಸಲು ಅವರಿಗೆ ಕರ್ನಾಟಕ ಗೆಲ್ಲಬೇಕಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಗಂಭೀರ ಆರೋಪ‌ ಮಾಡಿದ್ದಾರೆ.

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು (ಜ.27): ಕಾಂಗ್ರೆಸ್‌ಗೆ ಕರ್ನಾಟಕದ ಮೇಲೆ ಕಣ್ಣಿದೆ. ಲೋಕಸಭೆಗೆ ಕಾಂಗ್ರೆಸ್‌ಗೆ ಇಲ್ಲಿನ ಎಟಿಎಂ ಬೇಕು.‌ ಇಲ್ಲಿ ಹತ್ತು ಸಾವಿರ ಕೋಟಿ ಲೂಟಿ ಮಾಡುವ ಎಟಿಎಂ ಅವರಿಗೆ ಬೇಕು. ಮುಂದಿನ ಲೋಕಸಭೆ ಚುನಾವಣೆ ಎದುರಿಸಲು ಅವರಿಗೆ ಕರ್ನಾಟಕ ಗೆಲ್ಲಬೇಕಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಗಂಭೀರ ಆರೋಪ‌ ಮಾಡಿದ್ದಾರೆ. ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯಕ್‌ರ ಗ್ರಾಮವಿಕಾಸ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಏನು ಬೇಕಾದ್ರೂ ಸುಳ್ಳು ಹೇಳಿ ಅವರಿಗೆ ದೊಡ್ಡ ರಾಜ್ಯ ಕರ್ನಾಟಕ ಗೆಲ್ಲಬೇಕು‌. ಈ ಮೂಲಕ ಲೋಕಸಭೆಗೆ ಅವರಿಗೆ ಕರ್ನಾಟಕ ಈಗ ಗೆಲ್ಲಬೇಕಿದೆ. 

ಹಾಗಾಗಿ ರಾಜ್ಯದ ಜನರನ್ನ ನಾನು ಎಚ್ಚರಿಸ್ತಾ ಇದೇನೆ, ಅವರಿಗೆ ಬರಲು ಬಿಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಭಾರತದಲ್ಲೇ ಬಿಜೆಪಿಗೆ ಅತೀ ಪ್ರಮುಖ ಜಾಗ. ಬಂಟ್ವಾಳ ಒಂದು ವಿಚಿತ್ರ ಕ್ಷೇತ್ರ‌, ಇಲ್ಲಿಗೆ ಎರಡು ಇತಿಹಾಸ ಇದೆ.‌ ಮೊದಲ ಇತಿಹಾಸದಲ್ಲಿ ಬಂಟ್ವಾಳವನ್ನ ಕೋಮುಗಲಭೆ ಜಾಸ್ತಿ ಇರೋ ಜಾಗ ಅಂತಾರೆ. ಒಂದು ಕೊಲೆಗೆ 48 ಗಂಟೆಯಲ್ಲಿ ರಿವೆಂಜ್ ಮರ್ಡರ್ ಆಗುತ್ತೆ.‌ ಪೊಲೀಸರು ಬರ್ತಾರೆ, ಪೊಲಿಟಿಷಿಯನ್ ಬಂದು ಭಾಷಣ ಮಾಡಿ ಮತ್ತೆ ತುಪ್ಪ ಸುರೀತಾರೆ. ಇದರ ಮಧ್ಯೆ ಆಟೋ ಚಾಲಕರು, ವ್ಯಾಪಾರಿಗಳು ಸೇರಿ ಹಲವರು ಕೋಮು ಗಲಭೆಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ‌. ಆದರೆ ಇನ್ನೊಂದು ಇತಿಹಾಸ ಬಂಟ್ವಾಳದಲ್ಲಿ ಈ ಐದು ವರ್ಷದಲ್ಲಿ ಸೃಷ್ಟಿಯಾಗಿದೆ. 

ಸಿ.ಟಿ.ರವಿಗೆ ಜೆಡಿಎಸ್ ಟಿಕೆಟ್ ಆಫರ್ ಕೊಟ್ಟ ಬಂಡೆಪ್ಪ ಖಾಶೆಂಪೂರ್

ಈಗ ಕೋಮುಗಲಭೆ, ಹತ್ಯೆ ಎಲ್ಲವೂ ಸಂಪೂರ್ಣ ನಿಂತು ನವ ಬಂಟ್ವಾಳ ಸೃಷ್ಟಿಯಾಗಿದೆ‌. ಬಂಟ್ವಾಳ ಶಾಸಕರು ವೇದಿಕೆ ಮೇಲೆ ನಿಂತು ರಿಪೋರ್ಟ್ ಕಾರ್ಡ್ ಕೊಡ್ತಾ ಇದಾರೆ. ಬಂಟ್ವಾಳದಲ್ಲಿ ಡಬಲ್ ಇಂಜಿನ್‌ಗೆ ನಾಲ್ಕು ಕೋಚ್ ಹೆಚ್ಚಿದೆ. ಎಂಪಿ, ಶಾಸಕ, ಜಿ.ಪಂ ಸದಸ್ಯರು ಹಾಗೂ ಗ್ರಾ.ಪಂ ಸದಸ್ಯರು ನಾಲ್ಕು ಕೋಚ್. ಇಲ್ಲಿ ಭ್ರಷ್ಟಾಚಾರವೇ ಇಲ್ಲದೇ ಜನರಿಗೆ ಕೊಡುಗೆಗಳು ತಲುಪ್ತಾ ಇದೆ. ಇಡೀ ಕರ್ನಾಟಕ್ಕೆ ದ.ಕ ಮಾಡೆಲ್ ನೀವು ತೋರಿಸಿಕೊಟ್ಟಿದ್ದೀರ‌. ರಾಷ್ಟ್ರೀಯತೆಯ ಮತ್ತು ಭಾವನಾತ್ಮಕತೆಯ ಜನರು ಇಲ್ಲಿ ಜಾಸ್ತಿ ಇದಾರೆ. ಇಲ್ಲಿ 2023ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಬಗ್ಗೆ ಯಾರಿಗೂ ಅನುಮಾನ ‌ಇಲ್ಲ‌. 

ಇರೋದು ಎಷ್ಟು ಸಾವಿರ ಮಾರ್ಜಿನ್ ಹೆಚ್ಚಿಸಿ ಗೆಲ್ಲೋದು ಅಂತ. ಕರ್ನಾಟಕದಲ್ಲೂ ಮತ್ತೆ ಬಿಜೆಪಿ ಸರ್ಕಾರ ಬರುತ್ತೆ, ಬಿಜೆಪಿ ಸಿಎಂ ಬರ್ತಾರೆ. ತಮಿಳುನಾಡಿನಲ್ಲಿ ಡಿಎಂಕೆ, ಕಾಂಗ್ರೆಸ್ ಹೇಳಿದ ಸುಳ್ಳುಗಳನ್ನೇ ಇಲ್ಲಿ ಕಾಂಗ್ರೆಸ್ ಹೇಳ್ತಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ ಹೆಣ್ಮಗಳಿಗೆ ಒಂದು ಸಾವಿರ ಕೊಡ್ತೇವೆ ಅಂತ ಹೇಳಿತ್ತು. ಆದರೆ 21 ತಿಂಗಳಾದರೂ ಒಬ್ಬಳೇ ಹೆಣ್ಮಗಳಿಗೆ ಹಣ ಬಂದಿಲ್ಲ. ಅದೇ ಭರವಸೆಯನ್ನ ಪ್ರಿಯಾಂಕ್ ಗಾಂಧಿ, ಕಾಂಗ್ರೆಸ್ ಇಲ್ಲಿ ಹೆಣ್ಮಗಳಿಗೆ ಎರಡು ಸಾವಿರ ಕೊಡ್ತೀವಿ ಅಂತಿದಾರೆ. ತಮಿಳುನಾಡಿನಲ್ಲಿ ಸಾವಿರಾರು ಕೋಟಿ ಸಾಲದ ಬಜೆಟ್ ಮಂಡಿಸಲಾಗಿದೆ. ಕರ್ನಾಟಕದ ‌ಜನಗಳಿಗೂ ನಾನು ಈ ವಿಚಾರದಲ್ಲಿ ಎಚ್ಚರಿಸ್ತಾ ಇದೀನಿ‌. ಎರಡು ಸಾವಿರ ಹಣ ಕೊಡಲು ಸಾಧ್ಯವೇ ಇಲ್ಲ‌. ಮಾತನಾಡೋದು, ಘೋಷಣೆ ಮಾಡೋದು ದೊಡ್ಡ ವಿಷಯವೇ ಅಲ್ಲ. 

ನಾವು ಕರಾವಳಿಯನ್ನು ಹಿಂದುತ್ವದ ಪ್ರಯೋಗಶಾಲೆ ಮಾಡುತ್ತಿಲ್ಲ: ಸಿಎಂ ಬೊಮ್ಮಾಯಿ

ಆದರೆ ಅದನ್ನ ಜಾರಿಗೆ ತರೋದು ಅಷ್ಟು ಸುಲಭದ ಮಾತಲ್ಲ. ತಮಿಳುನಾಡಿನಲ್ಲಿ ಅವರ ಸುಳ್ಳಿಗೆ 2024ರ ಲೋಕಸಭೆ ಚುನಾವಣೆಗೆ ಜನ ಉತ್ತರಿಸ್ತಾರೆ. ಶರತ್ ಮಡಿವಾಳ ಹತ್ಯೆಯಾದಾಗ ನಾನು ಬಂಟ್ವಾಳಕ್ಕೆ ಪೊಲೀಸ್ ಆಗಿ ಬಂದಿದ್ದೆ. ಮೃತದೇಹದ ಮೆರವಣಿಗೆ ವೇಳೆ ಜನರ ಆತಂಕ ನೋಡಿದ್ದೆ. ಮುಂದೆ ಯಾರ ಹೆಣ ಬೀಳುತ್ತೆ ಅಂತ ಜನ ಆತಂಕದಲ್ಲಿ ಇದ್ರು. ಇವತ್ತು ಅದೇ ಬಂಟ್ವಾಳಲ್ಲಿ ನನಗೆ ಅದ್ಭುತ ಸ್ವಾಗತ ಸಿಕ್ಕಿತು. ಮುಸಲ್ಮಾನ ಸಹೋದರರು ಕೂಡ ನಮಗೆ ಕೈ ತೋರಿಸಿದ್ರು. ಕಾಂಗ್ರೆಸ್‌ನವರು ಕೋಮು ಗಲಭೆ ಅನ್ನೋ ಅಸ್ತ್ರದ ಮೂಲಕ ಬರ್ತಾರೆ. ಆದರೆ ಈಗ ದ.ಕ ಜಿಲ್ಲೆಯಲ್ಲಿ ಅದರ ಆತಂಕ ಇಲ್ಲ, ವಿಕಾಸ ಆಗಿದೆ‌. ಮುಂದಿನ ಎರಡು ಮೂರು ತಿಂಗಳು ನಾನು ನಿಮ್ಮ ಜೊತೆ ಇರ್ತೇನೆ. ಮನೆ ಮನೆಗೆ ಹೋಗಿ ಬಿಜೆಪಿ ‌ಗೆಲ್ಲಿಸಲು‌ ಕೆಲಸ ಮಾಡ್ತೀನಿ ಎಂದಿದ್ದಾರೆ.