'ಬಿಎಸ್ ವೈ ನಾಲಿಗೆ ಇಲ್ಲದ ನಾಯಕ ಎನ್ನುತ್ತಿರುವ ವಲಸಿಗ ಬಿಜೆಪಿಗರು'
ಮೊದಲು ಮಾತು ತಪ್ಪದ ಮಗ ಎನ್ನುತ್ತಿದ್ದ ವಲಸಿಗ ಬಿಜೆಪಿಗರು ಇದೀಗ ಯಡಿಯೂರಪ್ಪರನ್ನು ನಾಲಿಗೆ ಇಲ್ಲದ ನಾಯಕ ಎನ್ನಲು ಶುರು ಮಾಡಿದ್ದಾರೆ. ಬೀದಿಯಲ್ಲಿ ಮನ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ.
ಬೆಂಗಳೂರು (ಜ.24): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ‘ಮಾತು ತಪ್ಪದ ಮಗ’ ಎನ್ನುತ್ತಿದ್ದ ಕಾಂಗ್ರೆಸ್- ಜೆಡಿಎಸ್ನಿಂದ ಬಿಜೆಪಿಗೆ ವಲಸೆ ಹೋದವರು ಇದೀಗ ‘ನಾಲಿಗೆ ಇಲ್ಲದ ನಾಯಕ’ ಎನ್ನುತ್ತಿದ್ದಾರೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಶನಿವಾರ ಬೆಂಗಳೂರಿನ ತಮ್ಮ ಅಧಿಕೃತ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ವಲಸೆ ಹೋದವರಿಗೆ ಇದೀಗ ಅತೃಪ್ತಿ ಕಾಡುತ್ತಿದೆ. ವಲಸೆ ಹೋದವರು ಮೊದಲು ಯಡಿಯೂರಪ್ಪ ಅವರನ್ನು ಮಾತು ತಪ್ಪದ ಮಗ ಎಂದು ಹಾಡಿ ಹೊಗಳುತ್ತಿದ್ದರು. ಇದೀಗ ಅದೇ ನಾಯಕರು ನಾಲಿಗೆ ಇಲ್ಲದ ನಾಯಕ ಎಂದು ಹಾದಿ ಬೀದಿಯಲ್ಲಿ ಟೀಕಿಸುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ನಿವಾಸದ ಎದುರು ಗಲಾಟೆ: ರಸ್ತೆಯಲ್ಲಿ ಬಿದ್ದು ಒದ್ದಾಡಿದ ಮಹಿಳೆ ..
ಇನ್ನು ಕಾಂಗ್ರೆಸ್ನಿಂದ ಬಿಜೆಪಿಗೆ ವಲಸೆ ಹೋಗಿರುವ ನಾಯಕರ ಬಗ್ಗೆ ಮಾತನಾಡಿದ ಅವರು, ಪ್ರಳಯವಾದರೂ ಸರಿ ವಲಸಿಗರನ್ನು ಮತ್ತೆ ಕಾಂಗ್ರೆಸ್ಗೆ ಸೇರಿಸುವುದಿಲ್ಲ ಎಂದು ಹೇಳಿದ್ದೆ. ಈಗಲೂ ಅದೇ ಮಾತಿಗೆ ಬದ್ಧನಾಗಿದ್ದೇನೆ ಎಂದರು.
ಜ.28ಕ್ಕೆ ಶಾಸಕಾಂಗ ಪಕ್ಷದ ಸಭೆ:
ವಿಧಾನಮಂಡಲ ಜಂಟಿ ಅಧಿವೇಶನ ಕುರಿತು ಮಾತನಾಡಿದ ಅವರು, ಜನವರಿ 28ರಂದು ಬೆಳಗ್ಗೆ 9 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ವಿಧಾನ ಪರಿಷತ್ ಉಪ ಸಭಾಪತಿ ಚುನಾವಣೆಗೆ ಅಭ್ಯರ್ಥಿ ಕಣಕ್ಕಿಳಿಸುವ ಕುರಿತು ಅಂದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಿವಮೊಗ್ಗ ಸ್ಪೋಟ: ಯಡಿಯೂರಪ್ಪ, ಈಶ್ವರಪ್ಪ ವಿರುದ್ಧ ಗಂಭೀರ ಆರೋಪ..! .
ಹಂಪನಾ ವಿಚಾರಣೆಗೆ ಖಂಡನೆ: ಸಾಹಿತಿ ಹಂ.ಪ. ನಾಗರಾಜಯ್ಯ ಅವರ ವಿಚಾರಣೆ ನಡೆಸಿದ ಪೊಲೀಸರ ಧೋರಣೆಯನ್ನು ಉಗ್ರವಾಗಿ ಖಂಡಿಸಿದ ಸಿದ್ದರಾಮಯ್ಯ ಅವರು ಹಂಪನಾ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಯಾರೋ ದೂರು ಕೊಟ್ಟರು ಎಂಬ ಕಾರಣಕ್ಕೆ ಹಿರಿಯ ಸಾಹಿತಿಯನ್ನು ಠಾಣೆಗೆ ಕರೆಯಿಸಿಕೊಂಡು ವಿಚಾರಣೆ ನಡೆಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನ. ಪ್ರಜಾಪ್ರಭುತ್ವದ ಬಗ್ಗೆ ಗೌರವ ಇದ್ದರೆ ಯಡಿಯೂರಪ್ಪ ಅವರು ಸಂಬಂಧಪಟ್ಟಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.