ವಿಧಾನಸಭೆಗೂ ಕಾಲಿಟ್ಟ ಕೊಡಗಿನ ಮೊಟ್ಟೆ ದಾಳಿ ವಿಚಾರ, ಮೊಟ್ಟೆ ಹೊಡೆಯುವುದು ನಮಗೂ ಗೊತ್ತಿದೆ, ನಾವು ಹಿಂದೆ ಇದೇ ಮಾಡಿರೋರು: ಸಿದ್ದರಾಮಯ್ಯ

ವಿಧಾನಸಭೆ(ಸೆ.14): ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಸಂಭವಿಸಿದ ಅನಾಹುತ ಕುರಿತು ಪರಿಶೀಲನೆ ನಡೆಸಲು ಕೊಡಗಿಗೆ ಭೇಟಿ ನೀಡಿದ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಹೊಡೆದ ಪ್ರಕರಣವು ಸದನದಲ್ಲಿ ಪ್ರತಿಧ್ವನಿಸಿ ಮಾತಿನ ಚಕಮಕಿ ನಡೆದ ಪ್ರಸಂಗ ನಡೆಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅತಿವೃಷ್ಟಿ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ ಕೊಡಗಿಗೆ ಹೋಗಿದ್ದ ವೇಳೆ ನನಗೆ ಕಪ್ಪು ಬಾವುಟ ತೋರಿಸಿ, ಕಾರ್‌ಗೆ ಮೊಟ್ಟೆಹೊಡೆದ ವಿಚಾರವನ್ನು ಪ್ರಸ್ತಾಪಿಸಿದರು. ಆಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶಿಸಿ, ಅದು ಬೇರೆ ಯಾವುದೋ ಕಾರಣಕ್ಕೆ ಎಂದು ಮಾಧ್ಯಮದಲ್ಲಿ ಬರುತ್ತಿತ್ತು ಎಂದರು. ಆಗ ಸಿದ್ದರಾಮಯ್ಯ, ನಿಮಗೆ ಗೊತ್ತಾ ಎಂದು ಮರು ಪ್ರಶ್ನಿಸಿದರು. ಮಾಧ್ಯಮದಲ್ಲಿ ಬರುತ್ತಿತ್ತು ಎಂದು ಸಭಾಧ್ಯಕ್ಷರು ಸಮಜಾಯಿಷಿ ನೀಡಿದರು.

ಅಧಿವೇಶನದಲ್ಲಿ ಸ್ವಾರಸ್ಯಕರ ಚರ್ಚೆ: ಸಿದ್ದರಾಮಯ್ಯ ಕಿಚಾಯಿಸಿದ ಸಿಎಂ ಬೊಮ್ಮಾಯಿ

ಬಿಜೆಪಿ ಸದಸ್ಯ ಕೆ.ಜಿ.ಬೋಪಯ್ಯ ಮಾತನಾಡಿ, ಸಾರ್ವಕರ್‌ ಮತ್ತು ಟಿಪ್ಪು ಸುಲ್ತಾನ್‌ ಕುರಿತು ನೀವು ನಡೆದುಕೊಂಡ ಪರಿಗೆ ಕೊಡಗಿನ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು ಎಂದರು. ಇದಕ್ಕೆ ಶಾಸಕ ಅಪ್ಪಚ್ಚು ರಂಜನ್‌ ಸಹ ಸಾಥ್‌ ನೀಡಿದರು. ಈ ವೇಳೆ ಕಾಂಗ್ರೆಸ್‌ನ ಸದಸ್ಯರು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ಒಂದು ಹಂತಕ್ಕೆ ಆಕ್ರೋಶಗೊಂಡ ಸಿದ್ದರಾಮಯ್ಯ, ಕಪ್ಪು ಬಾವುಟ, ಮೊಟ್ಟೆಹೊಡೆಯುವುದು ನಮಗೂ ಗೊತ್ತಿದೆ. ನಾವು ಹಿಂದೆ ಇದೇ ಮಾಡಿರುವುದು, ಇದಕ್ಕೆಲ್ಲಾ ಹೆದರುವುದಿಲ್ಲ. ಮೊಟ್ಟೆಎಸೆದರೆ ನೀವೇನು ವೀರರಾ, ಶೂರರಾ? ಈ ರೀತಿ ರಾಜ್ಯಾದ್ಯಂತ ನಾನು ಮಾಡಿಸಬಲ್ಲೆ. ಆದರೆ ಅಂತಹ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

ಈ ವೇಳೆ ಮೊಟ್ಟೆ ಎಸೆದಿದ್ದು ಕಾಂಗ್ರೆಸ್‌ ಕಾರ್ಯಕರ್ತ ಎಂದು ಮತ್ತೊಬ್ಬ ಬಿಜೆಪಿ ಸದಸ್ಯ ಅಪ್ಪಚ್ಚು ರಂಜನ್‌ ಹೇಳಿದರು. ಇದಕ್ಕೆ ಕಿಡಿಕಾರಿದ ಸಿದ್ದರಾಮಯ್ಯ, ಹಾಗಾದರೆ ಬಿಡಿಸಿಕೊಂಡು ಬರಲು ಏಕೆ ಹೋಗಿದ್ದೀರಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಕೊಡಗಿನಲ್ಲಿ ನಡೆದ ಘಟನೆಗೆ ಆ ಭಾಗದ ಬಿಜೆಪಿ ಶಾಸಕರೇ ಕಾರಣ. ಕೊಡಗಿನ ಜನತೆ ಒಳ್ಳೆಯವರು. ಆದರೆ, ಈ ಇಬ್ಬರ ಕುಮ್ಮಕ್ಕಿನಿಂದ ಕೊಡಗು ಹಾಳಾಗಿದೆ. ಇವರಿಂದಲೇ ಕೊಡಗು ಅಭಿವೃದ್ಧಿ ನಾಶವಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ 40% ಕಮೀಷನ್‌ ವಿರುದ್ಧ ಕಾಂಗ್ರೆಸ್‌ ಅಭಿಯಾನ; ಹಾಡು, ನೋಟು ಬಿಡುಗಡೆ

ಕೆ.ಜಿ.ಬೋಪ್ಪಯ್ಯ ಮತ್ತು ಅಪ್ಪಚ್ಚು ರಂಜನ್‌ ಇಬ್ಬರೇ ತಮ್ಮನ್ನು ಸಮರ್ಥಸಿಕೊಳ್ಳುತ್ತಿದ್ದರು, ಆಡಳಿತ ಪಕ್ಷದ ಯಾವೊಬ್ಬ ಸದಸ್ಯರು ಬೆಂಬಲಕ್ಕೆ ನಿಲ್ಲಲಿಲ್ಲ. ಆದರೆ, ಕಾಂಗ್ರೆಸ್‌ ಸದಸ್ಯರು ಸಿದ್ದರಾಮಯ್ಯ ಬೆಂಬಲಕ್ಕೆ ನಿಂತು ಟೀಕಾಪ್ರಹಾರ ನಡೆಸಿದರು.

ಈ ಮೊದಲು ಟಿಪ್ಪು ಪೇಟ ಹಾಕಿಕೊಂಡು ಖಡ್ಗ ಹಿಡಿದಿದ್ದರಲ್ಲ ನಿಮ್ಮ ನಾಯಕರು ಆಗ ನಾಚಿಕೆಯಾಗಲಿಲ್ಲವೇ? ಕೊಡಗಿನಲ್ಲಿ ಒಂದು ರೂ. ಅಭಿವೃದ್ಧಿಯಾಗಿಲ್ಲ. ಪೊಲೀಸರು ಘಟನೆ ನಡೆದಾಗ ನಿಷ್ಕ್ರೀರಾಗಿದ್ದರು ಎಂದು ಸಿದ್ದರಾಮಯ್ಯ ಆರೋಪಿಸಿದರು. ಆಗ ಮಧ್ಯಪ್ರವೇಶಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಪೊಲಿಸರು ನಿಷ್ಕಿ್ರಯವಾಗಿರಲಿಲ್ಲ. ಸೂಕ್ತ ಬಂದೋಬಸ್ತ್‌ ಮತ್ತು ರಕ್ಷಣೆಗೆ ನಿಂತಿದ್ದರು ಎಂದು ಸಮರ್ಥಿಸಿಕೊಂಡರು.