ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹರಸಾಹಸ ಮಾಡುತ್ತಿದ್ದಾರೆ. ಅವರಿಗೆ ರಾಜ್ಯದ ಜನರ ಅಭಿವೃದ್ಧಿಯಾಗಲಿ ಅಥವಾ ಸಮಸ್ಯೆಗೆ ಪರಿಹಾರ ಮಾಡಲು ಇವರು ಪ್ರಯತ್ನ ಮಾಡುತ್ತಿಲ್ಲ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಗದಗ (ಜು.12): ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹರಸಾಹಸ ಮಾಡುತ್ತಿದ್ದಾರೆ. ಅವರಿಗೆ ರಾಜ್ಯದ ಜನರ ಅಭಿವೃದ್ಧಿಯಾಗಲಿ ಅಥವಾ ಸಮಸ್ಯೆಗೆ ಪರಿಹಾರ ಮಾಡಲು ಇವರು ಪ್ರಯತ್ನ ಮಾಡುತ್ತಿಲ್ಲ. ಇವರ ಕೈಯಲ್ಲಿ ರಾಜ್ಯದ ಆಡಳಿತ ಸಂಪೂರ್ಣ ಕುಸಿತವಾಗಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹಿರಿಯ ರಾಜಕಾರಣಿಗಳು, ಕಳೆದ ಎರಡೂವರೆ ವರ್ಷದಿಂದ ಒಂದೇ ಮಾತು ಹೇಳುತ್ತಿದ್ದಾರೆ. ಐದು ವರ್ಷ ನಾನೇ ಪೂರ್ಣ ಮಾಡುತ್ತೇನೆ ಎಂದು ಪದೇ ಪದೇ ಹೇಳುತ್ತಿರುವ ಈ ಹೇಳಿಕೆಯೇ ಜನರ ಸಂಶಯಕ್ಕೆ ಕಾರಣವಾಗಿದೆ ಎಂದರು.

ಅವರು ಪ್ರತಿ ದಿನ ಹೇಳುವ ಅವಶ್ಯಕತೆ ಇಲ್ಲ. ದೆಹಲಿಯಲ್ಲಿ ಮಾತನಾಡಿ ಸಿಎಂ ಸ್ಥಾನ ಬಿಟ್ಟು ಕೊಡುವ ಬಗ್ಗೆ ಒಪ್ಪಂದ ಆಗಿಲ್ಲ ಎಂದಿದ್ದಾರೆ. ಒಪ್ಪಂದ ಆಗಿದೆಯೋ ಇಲ್ಲವೋ ನಮಗೆ ಗೊತ್ತಿಲ್ಲ. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಫುಲ್ ಪಾಯಿಂಟ್ ಹಾಕಬೇಕು. ರಾಹುಲ್ ಗಾಂಧಿ ಅಥವಾ ಖರ್ಗೆ ಹೇಳಬೇಕು. ಸುರ್ಜೆವಾಲಾ ಹೇಳಿದರೆ ನಡೆಯುವುದಿಲ್ಲ. ಇದು ಕಾಂಗ್ರೆಸ್‌ನ ಗಂಭೀರ ಸಮಸ್ಯೆಯಾಗಿದೆ ಎಂದರು.

ಇವರ ಕೈಯಲ್ಲಿ ರಾಜ್ಯದ ಆಡಳಿತ ಸಂರ್ಪೂಣ ಕುಸಿದಿದೆ. ಯಾರಾದರೂ ಮುಂದುವರೆಯಲಿ ನಮಗೆ ಸಮಸ್ಯೆ ಇಲ್ಲ. ಕುರ್ಚಿ ಉಳಿಸಿಕೊಳ್ಳುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯದ ಜನರ ಅಭಿವೃದ್ಧಿಯಾಗಲಿ ಅಥವಾ ಸಮಸ್ಯೆ ಪರಿಹಾರ ಮಾಡಲು ಇವರು ಪ್ರಯತ್ನ ಮಾಡುತ್ತಿಲ್ಲ. ಅಧಿಕಾರಿಗಳು ಸಂಪೂರ್ಣ ನಿಷ್ಕ್ರಿಯವಾಗಿದ್ದಾರೆ. 136 ಸೀಟು ಬಂದಿದೆ ಎಂಬ ಸೊಕ್ಕಿನಿಂದ ಆಡಳಿತ ನಡೆಸುತ್ತಿದ್ದಾರೆ. ಜನರ ಬಗ್ಗೆ ಕಾಳಜಿಯೇ ಇಲ್ಲ. ಅವರಿಗೆ ಸಮಯವೇ ಇಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಕೆಟ್ಟು ಹೋಗಿದೆ. ಎಲ್ಲ ಕಡೆ ಸಮಸ್ಯೆಗಳು ಉದ್ಭವವಾಗಿದೆ. ಆರೋಗ್ಯ ಸಮಸ್ಯೆ, ಶಿಕ್ಷಣ ಸಮಸ್ಯೆ ಹೆಚ್ಚಾಗಿವೆ ಎಂದರು.

ಸಮರ್ಪಕ ಯೂರಿಯಾ ಗೊಬ್ಬರ ಪೂರೈಸಲು ಆಗ್ರಹ: ರಾಜ್ಯದಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ಉತ್ತಮವಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಆಗಿದೆ. ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಇದೆ. ಆದರೆ, ಗೊಬ್ಬರ ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎಂದು ತಿಳಿಸಿದರು. ಅತ್ಯಧಿಕ ಯೂರಿಯಾ ಅಗತ್ಯ ಇದೆ. ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ಮತ್ತು ಗೊಬ್ಬರ ಪೂರೈಕೆ ಮಾಡುವುದು ಕೃಷಿ ಇಲಾಖೆಯ ಕರ್ತವ್ಯ. ಕೃಷಿ ಇಲಾಖೆ ಯಾವುದೇ ಮುಂದಾಲೋಚನೆ ಇಲ್ಲದೇ ಕೆಲಸ ಮಾಡುತ್ತಿದೆ ಎಂದರು.

ಗೊಬ್ಬರದ ವಿಚಾರದಲ್ಲಿ ಬ್ಲ್ಯಾಕ್ ಮಾರ್ಕೆಟ್ ಪ್ರಾರಂಭ ಆಗಿದೆ. ಡೀಲರ್‌ಗಳು ಗೊಬ್ಬರವನ್ನು ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಮಾರುವ ವ್ಯವಸ್ಥೆ ಮಾಡುತ್ತಿದ್ದಾರೆ. ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಗೊಬ್ಬರ ಒದಗಿಸುವ ಕೆಲಸ ಆಗುತ್ತಿಲ್ಲ. ಕೃಷಿ ಸಚಿವರು ಈ ವರ್ಷದ ಅಗತ್ಯತೆಯ ಅನುಗುಣವಾಗಿ ಜಿಲ್ಲೆಯ ರೈತರ ಬೇಡಿಕೆ ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.