ಎರಡೂ ಪಕ್ಷಗಳನ್ನು ಬಿಜೆಪಿಯ ಬಿ ಟೀಂ ಎಂದು ಬಿಂಬಿಸಲು ಕಾಂಗ್ರೆಸ್‌ ನಿರ್ಧಾರ

ಬೆಂಗಳೂರು(ಜು.21):  ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಅನ್ನು ಬಿಜೆಪಿ ಬಿ ಟೀಂ ಎಂದು ಪ್ರತಿಪಾದಿಸಿದ್ದ ಕಾಂಗ್ರೆಸ್‌, ಈ ಬಾರಿ ಎಸ್‌ಡಿಪಿಐ ಮತ್ತು ಎಐಎಂಐಎಂ ಅನ್ನು ಬಿಜೆಪಿಯ ಬಿ-ಟೀಂ ಎಂದು ಜನರಿಗೆ ಮನದಟ್ಟು ಮಾಡಿಕೊಡುವ ಚಿಂತನೆ ಹೊಂದಿದೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷ ಸಂಘಟನೆ ಕುರಿತು ಬುಧವಾರ ನಗರದಲ್ಲಿ ನಡೆದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಮುಖಂಡರ ಸಭೆಯಲ್ಲಿ ಇಂತಹದ್ದೊಂದು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಈ ಎರಡು ಬಿಜೆಪಿಯ ಬೀ ಟೀಮ್‌ಗಳು. ಬಿಜೆಪಿಯವರು ಇವುಗಳನ್ನು ಬಳಸಿಕೊಂಡು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್‌ ವಿರುದ್ಧ ನಡೆಸಿರುವ ಪ್ರಯೋಗವನ್ನು ಕರ್ನಾಟಕದಲ್ಲೂ ನಡೆಸಲು ಹೊರಟಿದ್ದು ಈ ಬಗ್ಗೆ ರಾಜ್ಯದಲ್ಲಿ ಬೃಹತ್‌ ಜನಜಾಗೃತಿ ಮೂಡಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್‌ ಕೈಬಿಟ್ಟು ಹೋಗದಂತೆ ಎಚ್ಚರ ವಹಿಸಲು ಮಹತ್ವದ ಚರ್ಚೆಗಳನ್ನು ನಡೆಸಿ ಕೆಲ ನಿರ್ಣಯಕ್ಕೆ ಬರಲಾಗಿದೆ.

News Hour: ಕಾಂಗ್ರೆಸ್‌ನಲ್ಲಿ ಜೋರಾಯ್ತು ‘ಸಿಎಂ’ ಕುರ್ಚಿ ಕದನ: ಎಲ್ಲೆಲ್ಲೂ ಮುಖ್ಯಮಂತ್ರಿಯದ್ದೇ ಜಪ..!

ಬಿಜೆಪಿ ಬಿ ಟೀಮ್‌:

ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಮತ್ತು ಅಸಾದುದ್ದೀನ್‌ ಒವೈಸಿ ಅಧ್ಯಕ್ಷರಾಗಿರುವ ಅಲ್‌ ಇಂಡಿಯಾ ಮಜ್ಲಿಸ್‌-ಇ-ಇತ್ತೆಹಾದುಲ್‌ ಮುಸ್ಲಿಮೀನ್‌(ಎಐಎಂಐಎಂ) ಪಕ್ಷಗಳು ಬಿಜೆಪಿಯ ಬಿ ಟೀಂಗಳು ಎಂದು ಸ್ಪಷ್ಟವಾಗಿ ಜನರಿಗೆ ಅರಿವು ಮೂಡಿಸಬೇಕು. ಬಿಜೆಪಿಯವರು ಈ ಪಕ್ಷಗಳನ್ನು ಬಳಸಿಕೊಂಡು ಕಾಂಗ್ರೆಸ್‌ ವಿರುದ್ಧ ಯಾವುದೇ ತಂತ್ರಗಾರಿಕೆ ಎಣೆದರೂ ಅದು ಸಫಲವಾಗದಂತೆ ನೋಡಿಕೊಳ್ಳಬೇಕು. ತನ್ಮೂಲಕ ಮುಸ್ಲಿಂ ಸಮುದಾಯದ ಮತಗಳು ಹರಿದು ಹಂಚಿಹೋಗದಂತೆ ಎಚ್ಚರ ವಹಿಸಿ ಎಲ್ಲವೂ ಕಾಂಗ್ರೆಸ್‌ ಜೋಳಿಗೆ ಸೇರುವಂತೆ ಭದ್ರವಾಗುಳಿಸಿಕೊಳ್ಳಲು ಕಾಂಗ್ರೆಸ್‌ನ ಅಲ್ಪಸಂಖ್ಯಾತ ಮುಖಂಡರು ತೀರ್ಮಾನಿಸಿದ್ದಾರೆ.

ಕಾಂಗ್ರೆಸ್ಸಿಗರು ಭಾರತ ಮಾತೆಯ ನಿಜವಾದ ವಾರಸುದಾರರು: ಸಾಸಲು ಸತೀಶ್

ಜೆಡಿಎಸ್‌ ಬಗ್ಗೆಯೂ ಎಚ್ಚರ:

ಇದೇ ವೇಳೆ ಸಭೆಯಲ್ಲಿ ಜೆಡಿಎಸ್‌ನವರು ಈ ಬಾರಿಯೂ ಕೂಡ ಬಿಜೆಪಿಯವರ ಜೊತೆ ಕೈ ಜೋಡಿಸಲಿದ್ದಾರೆ. ಮುಸ್ಲಿಂ ಸಮುದಾಯದ ಮತಗಳು ಹೆಚ್ಚಾಗಿರುವ ಕ್ಷೇತ್ರಗಳ ಪೈಕಿ ಎಲ್ಲೆಲ್ಲಿ ತಮ್ಮ ಪಕ್ಷ ಗೆಲ್ಲಲು ಸಾಧ್ಯವಿಲ್ಲವೋ ಅಲ್ಲೆಲ್ಲಾ ಮುಸ್ಲಿಂ ಅಭ್ಯರ್ಥಿಗಳನ್ನೇ ತಮ್ಮ ಪಕ್ಷದಿಂದ ಕಣಕ್ಕಿಳಿಸಿ ಬಿಜೆಪಿ ಗೆಲುವಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ಮಾಡಲಿದ್ದಾರೆ. ಜೆಡಿಎಸ್‌ನ ಇಂತಹ ತಂತ್ರಗಾರಿಕೆಗಳ ಬಗ್ಗೆ ಅಲ್ಪಸಂಖ್ಯಾತ ಸಮುದಾಯದಲ್ಲಿ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕೆಂದು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಪ್ರಮುಖವಾಗಿ ಪಕ್ಷದ ಹಿರಿಯ ನಾಯಕ ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್‌ಖಾನ್‌, ಯು.ಟಿ.ಖಾದರ್‌, ನಜೀರ್‌ ಅಹಮದ್‌, ರಹೀಂಖಾನ್‌, ಎಂ.ಎಂ.ಇಂಡಸಗೇರಿ, ಅಬ್ದುಲ್‌ ಜಬ್ಬಾರ್‌, ಜಿ.ಎ.ಭಾವ ಸೇರಿದಂತೆ ಪಕ್ಷದ ಹಲವು ಮಾಜಿ ಸಚಿವರು, ಹಾಲಿ ಮಾಜಿ ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರು ಭಾಗವಹಿಸಿದ್ದರು.