ಮುಖ್ಯಮಂತ್ರಿ ಅಧಿಕಾರ ಹಸ್ತಾಂತರದ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ಈ ಬಗ್ಗೆ ದೆಹಲಿಯವರು ಮತ್ತು ಸಿಎಂ ಅವರು ಹೇಳಬೇಕಷ್ಟೇ ಎಂದು ಯತೀಂದ್ರ ಹೇಳಿಕೆ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಶಿಗ್ಗಾಂವಿ (ಡಿ.13): ಮುಖ್ಯಮಂತ್ರಿ ಅಧಿಕಾರ ಹಸ್ತಾಂತರದ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ಈ ಬಗ್ಗೆ ದೆಹಲಿಯವರು ಮತ್ತು ಸಿಎಂ ಅವರು ಹೇಳಬೇಕಷ್ಟೇ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. 5 ವರ್ಷ ಸಿದ್ದರಾಮಯ್ಯ ಸಿಎಂ ಇರುತ್ತಾರೆ ಎಂಬ ಯತೀಂದ್ರ ಹೇಳಿಕೆ ವಿಚಾರಕ್ಕೆ ಶಿಗ್ಗಾಂವಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವಾಗಿ ಯಾರೂ ಮಾತನಾಡಬಾರದು ಎಂದು ಹೈಕಮಾಂಡ್ ಹೇಳಿದೆ. ಸಿಎಂ ಮತ್ತು ಡಿಸಿಎಂ ಸಹ ಇದರ ಬಗ್ಗೆ ಹೇಳಿದ್ದಾರೆ.
ಅವರ ಮನೆಗೆ ಇವರು ತಿಂಡಿಗೆ ಹೋಗಿದ್ದರು, ಇವರ ಮನೆಗೆ ಅವರು ತಿಂಡಿಗೆ ಹೋಗಿದ್ದರು. ಯಾರೂ ಏನೂ ಮಾತನಾಡಬಾರದು ಅಂತ ಸ್ಪಷ್ಟ ಸಂದೇಶ ನೀಡಿದ್ದರು. ಅದರ ಮೇಲೆನೂ ಮಾತನಾಡಿದರೆ ಏನು ಮಾಡಲು ಆಗುತ್ತೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಬೆಳಗಾವಿ ಅಧಿವೇಶನ ವೇಳೆ ಡಿನ್ನರ್ ಪಾಲಿಟಕ್ಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಅಧಿವೇಶನದಲ್ಲೂ ಸಹಜವಾಗಿ ಎಲ್ಲರೂ ಸೇರುತ್ತೇವೆ. ಇದರಲ್ಲಿ ರಾಜಕೀಯ ಏನಿಲ್ಲ. ಸಿಎಂ ಮತ್ತು ಡಿಸಿಎಂ ದೆಹಲಿ ಪ್ರವಾಸದ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ದ್ವೇಷ ಭಾಷಣ ಮಾಡೋದು ಬಿಜೆಪಿಯವರು. ಅವರಿಗೆ ಎಲ್ಲಿ ಶಿಕ್ಷೆ ಆಗುತ್ತದೋ ಎಂಬ ಭಯ. ಪ್ರತಿ ದಿನವೂ ದೇಶದಲ್ಲಿ ದ್ವೇಷ ಭಾಷಣವನ್ನೇ ಮಾಡುತ್ತಾರೆ. ಮೋದಿಯಿಂದ ಹಿಡಿದು ಅಮಿತ್ ಶಾ ವರೆಗೂ ದ್ವೇಷ ಭಾಷಣ ಮಾಡುತ್ತಾರೆ. ವಾಟ್ಸಪ್, ಸೋಶಿಯಲ್ ಮೀಡಿಯಾದಲ್ಲಿ ದ್ವೇಷ ಭಾಷಣ ಮಾಡುತ್ತಾರೆ. ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯ ಇದೆ, ಎಲ್ಲರಿಗೂ ಅವಕಾಶವಿದೆ. ಹಾಗಂತ ಎಲ್ಲರಿಗೂ ಬೈಯಲಿ, ಎತ್ತಿ ಕಟ್ಟಿ ಅಂತ ಹೇಳಿಲ್ಲ. ದ್ವೇಷ ಭಾಷಣದಿಂದ ನಮ್ಮ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಅದನ್ನು ಪ್ರಾರಂಭ ಮಾಡಿದ್ದು ಬಿಜೆಪಿ, ಭಜರಂಗದಳ ಮತ್ತು ಆರ್ಎಸ್ಎಸ್ನವರು. ನಾನು ಹಿಂದೆ ಗೃಹ ಮಂತ್ರಿಯಾಗಿದ್ದೆ. ಇವರ ಕತೆ ನನಗೆ ಚೆನ್ನಾಗಿ ಗೊತ್ತಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಉತ್ತಮ ಚಾಲನೆ ಪ್ರವೃತ್ತಿಯಿದ್ದರೆ ಅಪಘಾತಗಳ ಸಂಖ್ಯೆ ಇಳಿಮುಖ
ಚಾಲಕನಲ್ಲಿ ಉತ್ತಮ ಚಾಲನೆ ಪ್ರವೃತ್ತಿಯಿದ್ದರೆ ಅಪಘಾತಗಳ ಸಂಖ್ಯೆ ಇಳಿಮುಖವಾಗಲಿದೆ ಎಂದು ಸಾರಿಗೆ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ನಗರದ ಹುಣಸಿಕಟ್ಟಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿದ ರಾಣಿಬೆನ್ನೂರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡ ಹಾಗೂ ಚಾಲನಪಥವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಒಟ್ಟು 45 ಕಡೆಗಳಲ್ಲಿ ಈ ತರಹ ಕಚೇರಿ ಹಾಗೂ ಟ್ರ್ಯಾಕ್ ನಿರ್ಮಿಸುತ್ತಿದ್ದು, ಈಗಾಗಲೇ 9 ಕಡೆಗಳಲ್ಲಿ ಕಾರ್ಯಪ್ರವೃತ್ತವಾಗಿವೆ. ಉಳಿದ ಕಡೆಗೆ ಒಂದೇ ಬಾರಿಗೆ ಉದ್ಟಾಟನೆ ಮಾಡಲಾಗುವುದು. ಸೆನ್ಸಾರ ಮಾಡಿರುವ ಪರಿಣಾಮ ಉತ್ತಮ ಚಾಲನೆಯಾಗಲಿದೆ. ಇದರಿಂದ ಅಪಘಾತ ಸಂಖ್ಯೆ ಇಳಿಯಲಿದೆ. ಅಪಘಾತ ಸಂಖ್ಯೆ ಇಳಿಮುಖವಾದರೆ ಕುಟುಂಬಗಳಿಗೆ ಆಸರೆಯಾಗಲಿದೆ. ಇನ್ನು ಆಟೋಮೆಟಿಟ್ ಟೆಸಿಂಗ್ ಸೆಂಟರ್ ಮಾಡಲಾಗುತ್ತಿದ್ದು, ಟೆಂಡರ್ ಕರೆದಿದ್ದು, ಆದಷ್ಟು ಬೇಗ ಆಗಲಿದೆ. ರಾಣಿಬೆನ್ನೂರು ಬಸ್ನಿಲ್ದಾಣಕ್ಕೆ ಎಪಿಎಂಸಿ ಜಾಗವನ್ನು ತೆಗೆದುಕೊಂಡರೆ ಹೈಟೆಕ್ ಬಸ್ ನಿಲ್ದಾಣವನ್ನು ನಿರ್ಮಿಸಲಾಗುವುದು ಎಂದರು.


