ಕಾಂಗ್ರೆಸ್‌ ಏನಾದ್ರೂ ಅಧಿಕಾರದಲ್ಲಿದ್ದರೆ ಕಾಶ್ಮೀರವನ್ನು ಸಹ ಬಿಟ್ಟು ಕೊಡುತ್ತಿತ್ತು, ಕಾಂಗ್ರೆಸ್‌ನಲ್ಲಿ ಐಕ್ಯತಾ ಇದ್ಯಾ..? ಕರ್ನಾಟಕದಲ್ಲಿ ಸಹ  ಡಿಕೆಶಿ, ಸಿದ್ದರಾಮಯ್ಯನವರಿಗೆ ಸಮನ್ವಯತೆ ಇಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಆರೋಪ ಮಾಡಿದ್ದಾರೆ. 


ಬೆಂಗಳೂರು (ಸೆಪ್ಟೆಂಬರ್ 29): ರಾಹುಲ್ ಗಾಂಧಿಯವರದು ಭಾರತ್ ಜೋಡೋ ಯಾತ್ರೆಯಲ್ಲ.. ಭಾರತ್ ತೋಡೋ ಯಾತ್ರೆ. ಅವರಿಗೆ ಇನ್ನೂ ಪ್ರಬುದ್ದತೆ ಇಲ್ಲ, ಅವ್ರಿನ್ನು ಎಳಸು. ರಾಹುಲ್ ಗಾಂಧಿ ಕಾಮಿಡಿ ಪೀಸ್ ಎಂದೂ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ನಿಮ್ಮ ಪಕ್ಷ ಅಖಂಡ ಭಾರತವನ್ನು ಒಡೆದು ಹಾಕಿದೆ. ಭಾರತದಲ್ಲಿ ಐಕ್ಯತೆ ಇಲ್ವಾ, ದೇಶದ ಎಲ್ಲ ಭಾಗವನ್ನು ಬಿಟ್ಡುಕೊಟ್ಟಿದ್ದು ಕಾಂಗ್ರೆಸ್ ಎಂದು ಶಾಸಕರೂ ಆಗಿರುವ ರೇಣುಕಾಚಾರ್ಯ ಆರೋಪ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಕಾಂಗ್ರೆಸ್‌ ಏನಾದ್ರೂ ಅಧಿಕಾರದಲ್ಲಿದ್ದರೆ ಕಾಶ್ಮೀರವನ್ನು ಸಹ ಬಿಟ್ಟು ಕೊಡುತ್ತಿತ್ತು, ಗುಲಾಂ ನಬಿ ಆಜಾದ್‌ ಕಾಂಗ್ರೆಸ್‌ ಪಕ್ಷ ತೊರೆದಿದ್ದಾರೆ. ಕಾಂಗ್ರೆಸ್‌ನಲ್ಲಿ ಐಕ್ಯತಾ ಇದ್ಯಾ..? ಕರ್ನಾಟಕದಲ್ಲಿ ಸಹ ಡಿಕೆಶಿ, ಸಿದ್ದರಾಮಯ್ಯನವರಿಗೆ ಸಮನ್ವಯತೆ ಇಲ್ಲ. ಭಾರತವನ್ನು ಹೊಡೆದಿದ್ದು ನೀವು, ಹೊಡೆದಾಟ ಬಡಿದಾಟ ಮಾಡಿದ್ದು ನೀವು.. ಕರ್ನಾಟಕದಲ್ಲಿ ನೀವು ಎಲ್ಲೆಲ್ಲಿ ಕಾಲಿಡ್ತಾರೋ ಅಲ್ಲೆಲ್ಲ ಜನ ಉತ್ತರ ಕೊಡ್ತಾರೆ ಎಂದೂ ರೇಣುಕಾಚಾರ್ಯ ಆರೋಪ ಮಾಡಿದ್ದಾರೆ.

ಇದನ್ನು ಓದಿ: Karnataka Cabinet Expansion: ಸಚಿವ ಸ್ಥಾನ ಸಿಗದ ಬಗ್ಗೆ ರೇಣುಕಾಚಾರ್ಯ ಅಸಮಾಧಾನ

ರಾಹುಲ್ ಗಾಂಧಿ ಐರನ್ ಲೆಗ್
ಇನ್ನು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಐರನ್‌ ಲೆಗ್‌ ಇದ್ದಂತೆ ಎಂದೂ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ. ಭಾರತ್ ಜೋಡೋ ಯಾತ್ರೆ ಸಂಪೂರ್ಣ ವಿಫಲವಾಗಲಿದೆ, ನಿಮ್ಮ ಒಡೆದ ಮನೆಯನ್ನು ಸರಿ ಮಾಡೋಕೆ ನಿಮಗೆ ಆಗ್ತಿಲ್ಲ. ನಿಮ್ಮ ಕುರ್ಚಿಯನ್ನು ಗಟ್ಟಿ ಮಾಡಿಕೊಳ್ಳಲು ಆಗ್ತಿಲ್ಲ. ನಿಮ್ಮ ಪಕ್ಷದ ಅಧ್ಯಕ್ಷ ಸ್ಥಾನ ಎಲ್ಲರೂ ಬೇಡ ಬೇಡ ಅಂತಿದ್ದಾರೆ ಎಂದೂ ಹೇಳಿಕೊಂಡಿದ್ದಾರೆ. ಅಲ್ಲದೆ, ಕರ್ನಾಟಕದಲ್ಲಿ ನಿಮ್ಮ ಅಡ್ರೆಸ್ ಉಳಿಯಲ್ಲ. ಕಾಂಗ್ರೆಸ್ ಅಂದ್ರೆ ಕತ್ತರಿ. ಆದರೆ, ಸೂಜಿ ದಾರದ ರೀತಿ ಆರ್ ಎಸ್ ಎಸ್ ಮತ್ತು ಬಿಜೆಪಿ ಕೆಲಸ ಮಾಡುತ್ತಿದೆ ಎಂದೂ ಹೊನ್ನಾಳಿಯ ಬಿಜೆಪಿ ಶಾಸಕರೂ ಆಗಿರುವ ರೇಣುಕಾಚಾರ್ಯ ಹೇಳಿದ್ದಾರೆ. 

ಡಿಕೆಶಿಗೆ ರೇಣುಕಾಚಾರ್ಯ ತಿರುಗೇಟು
ಇನ್ನೊಂದೆಡೆ, ಸಿಬಿಐ, ಇಡಿಯಿಂದ ನನಗೆ ಮಾನಸಿಕವಾಗಿ ಹಿಂಸೆ ಆಗ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಡಿಕೆ ಶಿವಕುಮಾರ್ ಬಿಜೆಪಿಗೆ ಯಾವ ಲೆಕ್ಕ. ಉಪ್ಪು ತಿಂದವನು ನೀರು ಕುಡಿಯಲೇಬೇಕು. ನೀನು ಯಾರು ಅಂತಾ ಬಿಜೆಪಿ ಟಾರ್ಗೆಟ್ ಮಾಡಬೇಕಪ್ಪ. ನಿಮ್ಮ ರಾಷ್ಟ್ರೀಯ ಅಧ್ಯಕ್ಷರನ್ನೇ ಬಿಜೆಪಿ ಪರಿಗಣಿಸಿಲ್ಲ. ಇನ್ನೂ ನೀನು ಯಾವ ಲೆಕ್ಕ ಅಂತಾ ನಿನ್ನನ್ನು ಟಾರ್ಗೆಟ್ ಮಾಡ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆರೋಪಕ್ಕೆ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. 

ಇದನ್ನೂ ಓದಿ: ದೇವಸ್ಥಾನದಲ್ಲಿ ತೀರ್ಥ ಕೊಟ್ರೆ ಮದರಸಾದಲ್ಲಿ ಭಯೋತ್ಪಾದನೆ‌ ಕಲಿಸ್ತಾರೆ: ರೇಣುಕಾಚಾರ್ಯ ಆರೋಪ

ಇನ್ನೊಂದೆಡೆ, ಪಿಎಫ್‌ಐ ಬ್ಯಾನ್ ಸ್ವಾಗತಿಸಿರುವ ರೇಣುಕಾಚಾರ್ಯ ಈ ವಿಚಾರವಾಗಿ ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 175 ಪಿಎಫ್ಐ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ತಗೊಂಡ್ರಿ, ಯಾವ ಕಾರಣಕ್ಕೆ ಕೇಸ್ ವಾಪಸ್ ತಗೊಂಡ್ರಿ ಅಂತ ಹೇಳಿ. ಅದರ ಪರಿಣಾಮ ಹಿಂದೂ, ಬಿಜೆಪಿ ಕಾರ್ಯಕರ್ತರ ಕೊಲೆ ಆಯ್ತು ಎಂದೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಕಾರ್ಯದರ್ಶಿ ಆಗಿರುವ ರೇಣುಕಾಚಾರ್ಯ ಆರೋಪ ಮಾಡಿದ್ದಾರೆ.