Asianet Suvarna News Asianet Suvarna News

ಬಿಜೆಪಿ ಸೇರಿದ Amarinder Singh; ಕೇಸರಿ ಪಕ್ಷದೊಂದಿಗೆ ವಿಲೀನವಾದ ಪಂಜಾಬ್‌ ಲೋಕ ಕಾಂಗ್ರೆಸ್‌

ಪಂಜಾಬ್‌ ಮಾಜಿ ಸಿಎಂ ಅಮರಿಂದರ್‌ ಸಿಂಗ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ತಮ್ಮ ನೂತನ ಪಕ್ಷವನ್ನು ಸಹ ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದಾರೆ. 

punjab ex cm amarinder singh joins bjp merges punjab lok congress party ash
Author
First Published Sep 19, 2022, 6:30 PM IST

ಪಂಜಾಬ್‌ ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್‌ ತೊರೆದ ಬಹುತೇಕ ಒಂದು ವರ್ಷದ ನಂತರ ಕ್ಯಾಪ್ಟನ್‌ (Captain) ಅಮರಿಂದರ್ ಸಿಂಗ್ ಕೇಸರಿ ಪಕ್ಷವನ್ನು ಸೇರಿದ್ದಾರೆ. ಪಂಜಾಬ್‌ ವಿಧಾನಸಭೆ ಚುನಾವಣೆಗೂ ಮುನ್ನ ಅವರನ್ನು ಸಿಎಂ ಸ್ಥಾನದಿಂದ ತೆಗೆದುಹಾಕಿದ್ದಕ್ಕೆ ಕಾಂಗ್ರೆಸ್‌ ತೊರೆದಿದ್ದ ನಾಯಕ ನಂತರ ಪಂಜಾಬ್‌ ಲೋಕ ಕಾಂಗ್ರೆಸ್‌ (Punjab Lok Congress) ಎಂಬ ನೂತನ ಪಕ್ಷವನ್ನು ಸ್ಥಾಪಿಸಿದ್ದರು. ಈಗ ಆ ಪಕ್ಷವನ್ನು ಸಹ ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದಾರೆ. ಸೆಪ್ಟೆಂಬರ್ 19 ರ ಬೆಳಗ್ಗೆ ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ಜತೆಗೆ ಭೇಟಿಯಾಗಿದ್ದ ಅಮರಿಂದರ್‌ ಸಿಂಗ್ ಕೇಸರಿ ಧ್ವಜವನ್ನು ಹಿಡಿದಿದ್ದಾರೆ. ಇನ್ನು, ಕೇಂದ್ರ ಸಚಿವರಾದ ಕಿರಣ್‌ ರಿಜಿಜು ಹಾಗೂ ನರೇಂದ್ರ ತೋಮರ್‌ ಮತ್ತು ಬಿಜೆಪಿ ನಾಯಕ ಸುನೀಲ್‌ ಜಾಖರ್‌ ಹಾಗೂ ಪಂಜಾಬ್‌ ಬಿಜೆಪಿ ಮುಖ್ಯಸ್ಥ ಅಶ್ವಾನಿ ಶರ್ಮಾ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್ ಅವರನ್ನು ಅಧಿಕೃತವಾಗಿ ಸ್ವಾಗತಿಸಿದ್ದಾರೆ. 

80 ವರ್ಷದ ಅಮರಿಂದರ್‌ ಸಿಂಗ್, ಪಂಜಾಬ್‌ ಲೋಕ ಕಾಂಗ್ರೆಸ್‌ ಪಕ್ಷವನ್ನೂ ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದಾರೆ. ಐದು ದಶಕಗಳ (Decades) ಕಾಲ ಕಾಂಗ್ರೆಸ್‌ನಲ್ಲಿದ್ದ ಪಂಜಾಬ್‌ ಮಾಜಿ ಸಿಎಂ, ಕೈ ಪಕ್ಷವನ್ನು ತೊರೆದ ಬಳಿಕ ನೂತನ ಪಕ್ಷವನ್ನು ಸ್ಥಾಪಿಸಿದ್ದರು. ಅಮರಿಂದರ್ ಸಿಂಗ್ ಜತೆಗೆ 7 ಮಾಜಿ ಶಾಸಕರು ಹಾಗೂ ಒಬ್ಬರು ಮಾಜಿ ಸಂಸದರು ಸಹ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದೂ ತಿಳಿದುಬಂದಿದೆ. 

ಇದನ್ನು ಓದಿ: ಸೆ. 19ಕ್ಕೆ ಬಿಜೆಪಿ ಪಕ್ಷ ಸೇರಲಿರುವ ಪಂಜಾಬ್‌ ಮಾಜಿ ಸಿಎಂ ಕ್ಯಾ.ಅಮರೀಂದರ್‌ ಸಿಂಗ್‌!

ಪಂಜಾಬ್‌ ವಿಧಾನಸಭೆ ಚುನಾವಣೆಯ ವೇಳೆ ಬಿಜೆಪಿಯೊಂದಿಗೆ ಮೈತ್ರಿ (Alliance) ಮಾಡಿಕೊಂಡು ಮಾಜಿ ಸಿಎಂ ಸ್ಪರ್ಧೆ ಮಾಡಿದ್ದರು. ಆದರೆ, ಒಂದು ಸ್ಥಾನವನ್ನು ಗಳಿಸಲು ವಿಫಲವಾಗಿ ಶೂನ್ಯ ಸಂಪಾದನೆಯಾಗಿತ್ತು. ತಮ್ಮ ನೆಚ್ಚಿನ ಹಾಗೂ ಶಾಸಕರಾಗಿದ್ದ ಪಟಿಯಾಲಾ ನಗರ ಕ್ಷೇತ್ರದಲ್ಲೂ ಅಮರಿಂದರ್ ಸಿಂಗ್ ಸೋಲನುಭವಿಸಿದ್ದರು. ಇತರೆ ಎಲ್ಲ ಅಭ್ಯರ್ಥಿಗಳು ಸಹ ಸೋತಿದ್ದರು..  
 
"ಕ್ಯಾಪ್ಟನ್" ಎಂದು ಜನಪ್ರಿಯವಾಗಿರುವ ಅಮರಿಂದರ್‌ ಸಿಂಗ್ ಅವರು ಇತ್ತೀಚೆಗೆ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯ ನಂತರ ಲಂಡನ್‌ನಿಂದ ಹಿಂದಿರುಗಿದರು ಮತ್ತು ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಸೆಪ್ಟೆಂಬರ್ 12 ರಂದು ಅಮಿತ್ ಶಾ ಅವರೊಂದಿಗಿನ ಭೇಟಿಯ ನಂತರ, ಅಮರಿಂದರ್‌ ಸಿಂಗ್ ಅವರು ರಾಷ್ಟ್ರೀಯ ಭದ್ರತೆ, ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ-ಭಯೋತ್ಪಾದನೆಯ ಪ್ರಕರಣಗಳು ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗೆ ಭವಿಷ್ಯದ ಮಾರ್ಗಸೂಚಿ" ಮುಂತಾದ ವಿಷಯಗಳ ಕುರಿತು ಚರ್ಚೆಯನ್ನು ನಡೆಸಿದ್ದಾಗಿ ಹೇಳಿದ್ದರು.

ಇದನ್ನೂ ಓದಿ: Assembly Elections 2022 Result ಆಪ್ ಅಬ್ಬರಕ್ಕೆ ಪಂಜಾಬ್‌ನಲ್ಲಿ ಸಿಧು, ಸಿಎಂ ಚನಿ, ಕ್ಯಾಪ್ಟನ್ ಅಮರಿಂದರ್‌ಗೆ ಹಿನ್ನಡೆ!

ಎರಡು ಬಾರಿ ಪಂಜಾಬ್‌ ಮುಖ್ಯಮಂತ್ರಿಯಾಗಿದ್ದ ಅಮರಿಂದರ್ ಸಿಂಗ್ ಅವರು ಮಾಜಿ ಪಟಿಯಾಲ ರಾಜಮನೆತನಕ್ಕೆ ಸೇರಿದವರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಕಾಂಗ್ರೆಸ್ ಅವರನ್ನು ಮುಖ್ಯಮಂತ್ರಿಯಾಗಿ ಬದಲಿಸಿತು ಮತ್ತು ಚರಂಜಿತ್ ಸಿಂಗ್ ಚನ್ನಿ ಅವರನ್ನು ಆಯ್ಕೆ ಮಾಡಿತು. ಆದರೆ ಕೈ ಪಕ್ಷವು ಫೆಬ್ರವರಿಯಲ್ಲಿ ನಡೆದ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (Aam Aadmi Party) (ಎಎಪಿ) ಗೆ ಹೀನಾಯವಾಗಿ ಸೋಲನುಭವಿಸಿತ್ತು. 

Follow Us:
Download App:
  • android
  • ios