ಸೆ. 19ಕ್ಕೆ ಬಿಜೆಪಿ ಪಕ್ಷ ಸೇರಲಿರುವ ಪಂಜಾಬ್ ಮಾಜಿ ಸಿಎಂ ಕ್ಯಾ.ಅಮರೀಂದರ್ ಸಿಂಗ್!
ಕಳೆದ ವರ್ಷ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಆ ಬಳಿಕ ನಡೆದ ಪಂಜಾಬ್ ಚುನಾವಣೆಯಲ್ಲಿ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ ರಚಿಸಿ ಸ್ಪರ್ಧೆ ಮಾಡಿದ್ದರು. ಆದರೆ, ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ತಮ್ಮ ಪಕ್ಷವನ್ನು ಬಿಜೆಪಿ ಪಕ್ಷದೊಂದಿಗೆ ವಿಲೀನಗೊಳಿಸಲು ತೀರ್ಮಾನ ಮಾಡಿದ್ದರು.
ನವದೆಹಲಿ (ಸೆ. 16): ಎರಡು ಬಾರಿಯ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಮುಂದಿನ ವಾರ ತಮ್ಮ ಪಕ್ಷವಾದ ಪಂಜಾಬ್ ಲೋಕ ಕಾಂಗ್ರೆಸ್ (PLC) ಅನ್ನು ಕೇಸರಿ ಪಕ್ಷದೊಂದಿಗೆ ವಿಲೀನಗೊಳಿಸುವ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಸೇರಲಿದ್ದಾರೆ. ಸೆಪ್ಟೆಂಬರ್ 19 ರಂದು ವಿಲೀನ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿಯ ಆಪ್ತ ಮೂಲಗಳು ತಿಳಿಸಿದ್ದು, ದಿನಾಂಕವನ್ನು ಇನ್ನೂ ಖಚಿತಪಡಿಸಿಲ್ಲ ಎಂದು ಕ್ಯಾಪ್ಟನ್ನ ಹಿರಿಯ ಸಹಾಯಕರು ತಿಳಿಸಿದ್ದಾರೆ. ಆದರೆ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿ ಸೇರುವುದು ಖಚಿತ ಎಂದರು. ಸೆಪ್ಟೆಂಬರ್ 18 ರಂದು ನವದೆಹಲಿಗೆ ತೆರಳಲಿರುವ 80 ವರ್ಷದ ಕ್ಯಾಪ್ಟನ್ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಅವರು ಬಿಜೆಪಿ ಸೇರಿದ ನಂತರ ಪ್ರಮುಖ ಜವಾಬ್ದಾರಿಯನ್ನು ಪಡೆಯುವ ಸಾಧ್ಯತೆಯಿದೆ ಎನ್ನುವ ವರದಿಗಳೂ ಇವೆ. ಕಳೆದ ಸೆಪ್ಟೆಂಬರ್ನಲ್ಲಿ ಪಕ್ಷದ ಹೈಕಮಾಂಡ್ನಿಂದ ಮುಖ್ಯಮಂತ್ರಿಯಾಗಿ ಅನಧಿಕೃತ ನಿರ್ಗಮನದ ನಂತರ ಕಾಂಗ್ರೆಸ್ನಿಂದ ಬೇರ್ಪಟ್ಟಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್, ಪಿಎಲ್ಸಿ ಹೆಸರಿನಲ್ಲಿ ಹೊಸ ಪಕ್ಷವನ್ನೂ ಸ್ಥಾಪನೆ ಮಾಡಿ ಚುನಾವಣೆ ಎದುರಿಸಿದ್ದರು.
ಫೆಬ್ರವರಿ 2022 ರ ಚುನಾವಣೆಯವರೆಗೆ ಚರಂಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಲಾಯಿತು. ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದ ಚುನಾವಣೆಯಲ್ಲಿ ಕ್ಯಾಪ್ಟನ್ ಅಮರಿಂದರ್ (Former chief minister and Punjab Lok Congress chief Amarinder Singh) ಮತ್ತು ಚನ್ನಿ ಇಬ್ಬರೂ ಸೋಲು ಕಂಡಿದ್ದರು. ಪಿಎಲ್ಸಿಯು (Punjab Lok Congress) ಬಿಜೆಪಿಯೊಂದಿಗೆ (BJP) ಮೈತ್ರಿ ಮಾಡಿಕೊಂಡು ಚುನಾವಣೆಗಳನ್ನು ಎದುರಿಸಿತು. ಆದರೆ, ಯಶಸ್ಸು ಕಾಣಲು ವಿಫಲವಾಯಿತು. ಬಿಜೆಪಿ ಮತ್ತು ಎಸ್ಎಡಿ (ಸಂಯುಕ್ತ) ಜೊತೆ ಮೈತ್ರಿ ಮಾಡಿಕೊಂಡು ಪಿಎಲ್ಸಿ ಚುನಾವಣೆ ಎದುರಿಸಿತ್ತು. ಅವರ ಸೀಟು ಹಂಚಿಕೆಯ ಪ್ರಕಾರ, ಬಿಜೆಪಿ 65 ಸ್ಥಾನಗಳಲ್ಲಿ, ಪಿಎಲ್ಸಿ 37 (ಹಲವಾರು ಅಭ್ಯರ್ಥಿಗಳು ಬಿಜೆಪಿ ಚಿಹ್ನೆಯಲ್ಲಿ ಸ್ಪರ್ಧಿಸಲು ಆದ್ಯತೆ) ಮತ್ತು ಎಸ್ಎಡಿ (ಸಂಯುಕ್ತ) 15 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದವು.
5 ತಿಂಗಳ ವಿದ್ಯಮಾನ, ಅಮರೀಂದರ್ ಬೇಸರ: ರಾಜೀನಾಮೆಗೂ ಮುನ್ನ ಸೋನಿಯಾಗೆ ಪತ್ರ!
ಪಕ್ಷವು ಪಂಜಾಬ್ನಲ್ಲಿ ನೋಟಾ (NOTA) ಮತಗಳಿಗಿಂತ ಕಡಿಮೆ ಮತಗಳನ್ನು ಪಡೆದಿತ್ತು 1,10,308 ನೋಟಾ ಮತಗಳು ಚಲಾವಣೆಗೊಂಡಿದ್ದರೆ, PLC ತನ್ನ ಚಿಹ್ನೆಯಲ್ಲಿ 84,697 ಮತಗಳನ್ನು ಮಾತ್ರ ಗಳಿಸಿತ್ತು. ಪಿಎಲ್ಸಿಯ ಐವರು ಅಭ್ಯರ್ಥಿಗಳು ಬಿಜೆಪಿ ಚಿಹ್ನೆಯ ಮೇಲೆ ಸ್ಪರ್ಧಿಸಿದ್ದರು. ಕ್ಯಾಪ್ಟನ್ ಅಮರೀಂದರ್ ಸಿಂಗ್ ಜೊತೆ ಆರು ಮಂದಿ ಕಾಂಗ್ರೆಸ್ ನಾಯಕರು, ಕೆಲವು ಮಾಜಿ ಶಾಸಕರು ಕೂಡ ಮಾಜಿ ಮುಖ್ಯಮಂತ್ರಿಯೊಂದಿಗೆ ಬಿಜೆಪಿ ಸೇರಲಿದ್ದಾರೆ. 2002 ರಿಂದ 2007 ಹಾಗೂ 2017 ರಿಂದ 2021ರವರೆಗೆ ಎರಡು ಅವಧಿಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಂಜಾಬ್ನ ಮುಖ್ಯಮಂತ್ರಿಯಾಗಿದ್ದರು. 2ನೇ ಅವಧಿ ಕೊನೆಗೊಳ್ಳಲು ಇನ್ನು ನಾಲ್ಕು ತಿಂಗಳು ಇರುವಾಗಲೇ, 2021 ಸೆಪ್ಟೆಂಬರ್ನಲ್ಲಿ ಹೈಕಮಾಂಡ್ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಪಕ್ಷವನ್ನು ತೊರೆದಿದ್ದರು.
ಹುಲ್ಲಿಗೆ ಬೆಂಕಿಯಿಂದ ದಿಲ್ಲಿ, ಪಂಜಾಬ್ ಸಿಎಂ ನಡುವೆ ವಾಕ್ಸಮರ
ಸಿಂಗ್ ದೆಹಲಿಯಲ್ಲಿ (New Delhi) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿ ಮಾಡಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.“ಕೇಂದ್ರ ಗೃಹ ಸಚಿವ ಅಮಿತ್ ಶಾ ಜಿ ಅವರೊಂದಿಗೆ ಬಹಳ ಉತ್ತಮ ಸಭೆ ನಡೆದಿದೆ. ರಾಷ್ಟ್ರೀಯ ಭದ್ರತೆ, ಪಂಜಾಬ್ನಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ-ಭಯೋತ್ಪಾದನೆಯ ಪ್ರಕರಣಗಳು ಮತ್ತು ಪಂಜಾಬ್ನ ಸಮಗ್ರ ಅಭಿವೃದ್ಧಿಗೆ ಭವಿಷ್ಯದ ಮಾರ್ಗಸೂಚಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು' ಎಂದು ಅಮರೀಂದರ್ ಸಿಂಗ್ ಆಗ ಟ್ವೀಟ್ ಮಾಡಿದ್ದರು.