*  ನವದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಘೋಷಣೆ*  ಮೇಲ್ಮನೆ ಚುನಾವಣೆ ಟಿಕೆಟ್‌ ವಿಚಾರದಲ್ಲಿ ನಾನು ಯಾರ ಪರವೂ ನಿಂತಿಲ್ಲ*  ಕಾಂಗ್ರೆಸ್‌ ಪಕ್ಷಕ್ಕೆ ಏನು ಒಳ್ಳೆಯದಾಗುತ್ತೋ ಅದನ್ನು ಮಾಡಿ ಅಂತ ಹೈಕಮಾಂಡ್‌ಗೆ ಹೇಳಿದ್ದೇನೆ: ಡಿಕೆಶಿ

ನವದೆಹಲಿ(ಮೇ.24): ಮುಂಬರುವ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಬರಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಸೋಮವಾರ ಈ ವಿಚಾರವಾಗಿ ದೆಹಲಿಯಲ್ಲಿ ಮಾತನಾಡಿದ ಅವರು, ರಾಜ್ಯಸಭೆಗೆ ಪ್ರಿಯಾಂಕಾ ಗಾಂಧಿ ಅವರು ರಾಜ್ಯದಿಂದ ಸ್ಪರ್ಧಿಸಬೇಕೆಂಬ ಆಸೆ ಇತ್ತಾದರೂ ಈ ಬಗ್ಗೆ ಎಲ್ಲೂ ಚರ್ಚೆ ಆಗಿಲ್ಲ. ಆದರೆ, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕಕ್ಕೆ ಬಂದು ಚುನಾವಣೆ ಪ್ರಚಾರ ಮಾಡಲು ಅವರು ಒಪ್ಪಿದ್ದಾರೆ ಎಂದು ತಿಳಿಸಿದರು.

ಯಾರ ಪರವೂ ಇಲ್ಲ: 

ಮೇಲ್ಮನೆ ಚುನಾವಣೆ ಟಿಕೆಟ್‌ ವಿಚಾರದಲ್ಲಿ ನಾನು ಯಾರ ಪರವೂ ನಿಂತಿಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ಏನು ಒಳ್ಳೆಯದಾಗುತ್ತೋ ಅದನ್ನು ಮಾಡಿ ಅಂತ ಹೈಕಮಾಂಡ್‌ಗೆ ಹೇಳಿದ್ದೇನೆ. ನಾನು ಮತ್ತು ಸಿದ್ದರಾಮಯ್ಯ ಇಬ್ಬರೂ ಸೇರಿ ಹೆಸರುಗಳನ್ನು ಕೊಟ್ಟಿದ್ದೇವೆ ಎಂದರು.

ಅಜ್ಜಿ-ಅಮ್ಮನಂತೆ ಪ್ರಿಯಾಂಕಾಗೂ ರಾಜ್ಯದಿಂದಲೇ ರಾಜಕೀಯ ಭವಿಷ್ಯಕ್ಕೆ ತಿರುವು ಸಿಗುತ್ತಾ?

ಎಸ್‌.ಆರ್‌.ಪಾಟೀಲ ಪಕ್ಷಕ್ಕಾಗಿ ದುಡಿದಿದ್ದಾರೆ. ತಂದೆಗೆ ವಯಸ್ಸಾಯ್ತು ಅಂತ ಹೊರಗಡೆ ಹಾಕಲು ಸಾಧ್ಯವೇ? ಎಂದು ಹೇಳುವ ಮೂಲಕ ಪರೋಕ್ಷವಾಗಿ ಪಾಟೀಲರ ಪರ ಡಿ.ಕೆ.ಶಿವಕುಮಾರ್‌ ಒಲವು ಪ್ರದರ್ಶಿಸಿದರು.

ಇದೇ ವೇಳೆ ಮೇಲ್ಮನೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಒಂದೇ ದಿನ ಬಾಕಿ ಇರುವ ಕುರಿತು ಪ್ರತಿಕ್ರಿಯಿಸಿದ ಅವರು, ಮಂಗಳವಾರ ನಾಮಪತ್ರ ಸಲ್ಲಿಸಿದರೆ ಏನೂ ಆಗಲ್ಲ. ಅವೆಲ್ಲ ನಮ್ಮ ನಂಬಿಕೆಗಳು ಅಷ್ಟೆ. ನಾನು ಅಮವಾಸ್ಯೆ ದಿನ ಹುಟ್ಟಿದ್ದೇನೆ. ಎಲ್ಲಾ ಸಮಯ, ವಾರವೂ ಒಳ್ಳೆಯದೇ ಎಂದು ಹೇಳಿದರು.