ಕೆಲ ದಿನಗಳ ಹಿಂದಷ್ಟೇ ಪತ್ತೆಯಾದ ಬ್ರೇನ್‌ ಟ್ಯೂಮರ್‌ನಿಂದ ಪ್ರಿಯಾಂಕ್‌ ಖರ್ಗೆ ಅವರ ಪತ್ನಿ ಶೃತಿ ಪಿ. ಖರ್ಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಈಗಷ್ಟೇ ಹಿಂತಿರುಗಿದ್ದಾರೆ. ಮತ್ತೊಂದೆಡೆ ಕೆಲ ವರ್ಷಗಳಿಂದ ಕುತ್ತಿಗೆ ಕ್ಯಾನ್ಸರ್‌ನಿಂದ ಬಳಲುತ್ತಿರುವ ಸಹೋದರ ರಾಹುಲ್‌ ಖರ್ಗೆ ಅವರ ಆರೋಗ್ಯ ಹಂತ ಹಂತವಾಗಿ ಕ್ಷೀಣಿಸುತ್ತಿದೆ. ತಿಂಗಳಾನುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರಿಗೆ ಈಗ ಮನೆಯಲ್ಲೇ ಚಿಕಿತ್ಸೆ ಮುಂದುವರೆಸಲಾಗಿದೆ.

ಬೆಂಗಳೂರು(ಮೇ.03): ಕೈ ಹಿಡಿದ ಪತ್ನಿ ಹಾಗೂ ಒಡ ಹುಟ್ಟಿದ ಸೋದರ ತೀವ್ರವಾದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಉಂಟಾಗಿರುವ ಅಪಾರ ನೋವು, ತೊಳಲಾಟದ ಮಧ್ಯೆ ಪಕ್ಷದ ಗೆಲುವಿಗಾಗಿ ಹಗಲಿರುಳು ದುಡಿಯುವ ಅನಿವಾರ್ಯತೆ. ಈ ಪರಿಸ್ಥಿತಿ ಯಾರಿಗಾದರೂ ಎದುರಾಗಿದೆ ಎಂಬುದು ಅರಿವಿಗೆ ಬಂದರೆ ಎಂತಹವರ ಕರುಳು ಕೂಡ ಒಂದು ಕ್ಷಣ ಚುರುಕ್‌ ಎನ್ನದೇ ಇರದು!. ಆದರೆ, ಇಂತಹ ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿರುವವರು ಕೆಪಿಸಿಸಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಿಯಾಂಕ್‌ ಖರ್ಗೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಡಳಿತ ಪಕ್ಷದ ಕಟು ಟೀಕಾಕಾರರಾದ ಪ್ರಿಯಾಂಕ್‌ ಖರ್ಗೆ ಅವರನ್ನು ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಣಿಸಲು ಪ್ರತಿಪಕ್ಷಗಳು ಒಂದಾಗಿ ಶ್ರಮಿಸುತ್ತಿವೆ. ಇದನ್ನು ಸಮರ್ಥವಾಗಿ ಎದುರಿಸಲು ತಮ್ಮೆಲ್ಲ ಗಮನವನ್ನು ಕ್ಷೇತ್ರಕ್ಕೆ ನೀಡುವ ಅನಿವಾರ್ಯತೆ ಪ್ರಿಯಾಂಕ್‌ ಖರ್ಗೆ ಅವರಿಗೆ ಇದೆ.

ಖರ್ಗೆ ವಿವಾದಾತ್ಮಕ ಹೇಳಿಕೆಯಿಂದ ಕಾಂಗ್ರೆಸ್‌ಗೆ ನಷ್ಟ, ಸಮೀಕ್ಷೆಯಲ್ಲಿ ಬಯಲಾಯ್ತು ರಹಸ್ಯ!

ಆದರೆ, ಅದು ಸಾಧ್ಯವಾಗದು. ಏಕೆಂದರೆ, ಕೆಲ ದಿನಗಳ ಹಿಂದಷ್ಟೇ ಪತ್ತೆಯಾದ ಬ್ರೇನ್‌ ಟ್ಯೂಮರ್‌ನಿಂದ ಪ್ರಿಯಾಂಕ್‌ ಖರ್ಗೆ ಅವರ ಪತ್ನಿ ಶೃತಿ ಪಿ. ಖರ್ಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಈಗಷ್ಟೇ ಹಿಂತಿರುಗಿದ್ದಾರೆ. ಮತ್ತೊಂದೆಡೆ ಕೆಲ ವರ್ಷಗಳಿಂದ ಕುತ್ತಿಗೆ ಕ್ಯಾನ್ಸರ್‌ನಿಂದ ಬಳಲುತ್ತಿರುವ ಸಹೋದರ ರಾಹುಲ್‌ ಖರ್ಗೆ ಅವರ ಆರೋಗ್ಯ ಹಂತ ಹಂತವಾಗಿ ಕ್ಷೀಣಿಸುತ್ತಿದೆ. ತಿಂಗಳಾನುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರಿಗೆ ಈಗ ಮನೆಯಲ್ಲೇ ಚಿಕಿತ್ಸೆ ಮುಂದುವರೆಸಲಾಗಿದೆ.

ಹೀಗಾಗಿ ಮಕ್ಕಳ ವಿದ್ಯಾಭ್ಯಾಸ, ಯೋಗಕ್ಷೇಮವೂ ಸಂಪೂರ್ಣ ಪ್ರಿಯಾಂಕ್‌ ಅವರ ಮೇಲೆ ಬಿದ್ದಿದೆ. ಇಷ್ಟೆಲ್ಲಾ ಸಮಸ್ಯೆ, ನೋವು, ಜವಾಬ್ದಾರಿಗಳ ನಡುವೆಯೇ ಪ್ರಸಕ್ತ ವಿಧಾನಸಭಾ ಚುನಾವಣೆಯನ್ನೂ ಎದುರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಅವರದ್ದಾಗಿದೆ. ಆಸ್ಪತ್ರೆಯಲ್ಲಿರುವ ಪತ್ನಿಯ ಬಳಿ ಇದ್ದು ಧೈರ್ಯ ತುಂಬಲು ಆಗದಂತಹ ಅನಿವಾರ್ಯತೆ ಇದೆ. ಹೀಗಿದ್ದರೂ ಪತ್ನಿಯ ಆರೋಗ್ಯದ ಮಾಹಿತಿಯನ್ನು ವೈದ್ಯರಿಂದ ಗಂಟೆ ಗಂಟೆಗೂ ಪಡೆಯುತ್ತಿರುವ ಪ್ರಿಯಾಂಕ್‌ ಖರ್ಗೆ ಅವರು, ಮನೆಯಲ್ಲಿರುವ ಸಹೋದರನ ಆರೋಗ್ಯದ ಕಡೆಯೂ ಗಮನಿಸಿಕೊಂಡು ನಿತ್ಯ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ.

ಪ್ರಿಯಾಂಕ್‌ ಅವರ ಜೊತೆ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ್‌ ಖರ್ಗೆ ಅವರು ಕೂಡ ಹೆಚ್ಚೂಕಡಿಮೆ ಇಂತಹ ಸ್ಥಿತಿ ಎದುರಿಸುತ್ತಿದ್ದಾರೆ. ತಂದೆಯವರಿಗೆ ವಿಧಾನಸಭಾ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ಕಾಂಗ್ರೆಸ್ಸನ್ನು ಮತ್ತೆ ಅಧಿಕಾರಕ್ಕೆ ತರಲು ಶತಾಯಗತಾಯ ರಾಜ್ಯ ನಾಯಕರೊಂದಿಗೆ ಪ್ರಿಯಾಂಕ್‌ ಖರ್ಗೆ ಶ್ರಮಿಸುತ್ತಿದ್ದಾರೆ. ಜಾಲತಾಣದ ಅಧ್ಯಕ್ಷರಾಗಿ ದೊಡ್ಡ ಜವಾಬ್ದಾರಿ ಹೊಂದಿರುವುದರಿಂದ ಎಲ್ಲಿಯೂ ಹೊಣೆಗಾರಿಕೆಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಹ ಮಾಡಬೇಕಾಗಿದೆ.