ಮುಂಬರುವ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ 150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ನಮ್ಮ ಗುರಿ ಇದೆ. ಅದರಂತೆ ಬೆಳಗಾವಿ ಜಿಲ್ಲೆಯ 18ಕ್ಕೆ 18 ಕ್ಷೇತ್ರ ಗೆಲ್ಲುವುದೇ ನಮ್ಮ ಗುರಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. 

ಬೆಳಗಾವಿ (ಜ.30): ಮುಂಬರುವ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ 150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ನಮ್ಮ ಗುರಿ ಇದೆ. ಅದರಂತೆ ಬೆಳಗಾವಿ ಜಿಲ್ಲೆಯ 18ಕ್ಕೆ 18 ಕ್ಷೇತ್ರ ಗೆಲ್ಲುವುದೇ ನಮ್ಮ ಗುರಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಧುನಿಕ ಚಾಣಕ್ಯ ಎಂದು ಕರೆಸಿಕೊಂಡವರು ಅಮಿತ್‌ ಶಾ ಉತ್ತರ ಪ್ರದೇಶಕ್ಕೆ ಬಿಜೆಪಿ ಉಸ್ತುವಾರಿ ಆಗಿ ಹೋದಾಗ ಇದ್ದದ್ದು 10 ಕೇವಲ ಎಂಪಿ ಸೀಟು. ಅವರು ಹೋದ ಮೇಲೆ ಬಿಜೆಪಿಗೆ ಸಿಕ್ಕಿದ್ದು 73 ಸೀಟು. ಅಂದು ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿತ್ತು. 

Add Asianetnews Kannada as a Preferred SourcegooglePreferred

ಈಗ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇದಕ್ಕಿಂತ ದೊಡ್ಡ ಉದಾಹರಣೆ ಬೇಡ ಅಂದುಕೊಂಡಿದ್ದೇನೆ ಎಂದು ಹೇಳಿದರು. ರಾಜ್ಯದಲ್ಲಿ 150 ಪ್ಲಸ್‌ ನಮ್ಮ ಟಾರ್ಗೆಟ್‌. ಅದರಂತೆ ಬೆಳಗಾವಿಯ 18ಕ್ಕೆ 18 ಕ್ಷೇತ್ರ ಗೆಲ್ಲುವುದು ನಮ್ಮ ಗುರಿ ಆಗಿರುವುದರಿಂದ ಅದಕ್ಕೆ ಬೇಕಾದ ಪೂರಕ ಪ್ರಯತ್ನ ಮಾಡುತ್ತೇವೆ. ಯಾವುದೇ ಕ್ಷೇತ್ರದಲ್ಲಿ ಯಾವುದೇ ವ್ಯಕ್ತಿಯ ಜೊತೆ ರಾಜಿ ಇಲ್ಲ. 18 ಕ್ಷೇತ್ರಗಳಲ್ಲಿ ನಮ್ಮ ಹೋರಾಟ ನಡೆಯುತ್ತದೆ. 18 ಕ್ಷೇತ್ರ ಗೆಲ್ಲಲು ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು. ಬೆಳಗಾವಿ ಸೇರಿ ರಾಜ್ಯದ ಕೆಲವೆಡೆ ಬಿಜೆಪಿಯ ಹೊಂದಾಣಿಕೆ ರಾಜಕಾರಣಕ್ಕೆ ಬ್ರೇಕ್‌ ಬೀಳುತ್ತಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೊಂದಾಣಿಕೆ ಇರಬೇಕು. ಯಾರ ಜತೆಗೆ ಹೊಂದಾಣಿಕೆ ವಿಪಕ್ಷಗಳ ಜೊತೆ ಅಲ್ಲ. 

ಎಲ್ಲ ವರ್ಗಗಳ ಹಿತರಕ್ಷಣೆ ಬಿಜೆಪಿಯ ಆದ್ಯತೆ: ಸಿ.ಟಿ.ರವಿ

ಬಿಜೆಪಿ ಕಾರ್ಯಕರ್ತರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಪರಿವಾರದ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅವರನ್ನು್ನ ಒಟ್ಟಿಗೆ ಸೇರಿಸಿ ಅವರ ಸಮನ್ವಯ ಜೊತೆ ವಿಪಕ್ಷಗಳ ಜೊತೆ ಹೋರಾಟ ಮಾಡಬೇಕು ಎಂದರು. ವಿಪಕ್ಷಗಳ ಜೊತೆ ಹೊಂದಾಣಿಕೆ ರಾಜಕಾರಣ ಬಹಳ ಕಾಲ ನಡೆಯಲ್ಲ, ಆ ರೀತಿಯ ಹೊಂದಾಣಿಕೆ ರಾಜಕಾರಣ ಪಕ್ಷ ಸಹಿಸೋದು ಇಲ್ಲ. ಕೇಂದ್ರ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳು ಪ್ರತಿ ಕ್ಷೇತ್ರದಲ್ಲಿ ಶೇ.70ರಿಂದ ಶೇ.80ರಷ್ಟಿದ್ದಾರೆ. ಅವರನ್ನು ಮತದಾರರಾಗಿ ಪರಿವರ್ತಿಸಿದರೆ ಯಾವುದೇ ಕ್ಷೇತ್ರದಲ್ಲಿ ಸೋಲುವ ಪ್ರಶ್ನೆ ಇರುವುದಿಲ್ಲ. ಮತದಾರರಾಗಿ ಪರಿವರ್ತನೆ ಮಾಡಿದರೆ ನಾವು 150ಕ್ಕೂ ಹೆಚ್ಚಿನ ಸ್ಥಾನವನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಬಂಡವಾಳ ನರೇಂದ್ರ ಮೋದಿ, ಬಿಜೆಪಿಯ ಸಚಿವರು ಅಲಿಬಾಬಾ ವರ್ಸಸ್‌ ಚಾಲೀಸ್‌ ಚೋರ್‌ ಇದ್ದ ಹಾಗೇ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್‌ ಅಧಿಕಾರದಲ್ಲಿ ಇದ್ದಾಗ ಆ ಪರಿಸ್ಥಿತಿ ಇತ್ತು. ಈಗ ಅಲ್ಲ. ಅವರು ಹಳೆಯದ್ದು ನೆನಪು ಮಾಡಿಕೊಳ್ಳುತ್ತಿದ್ದಾರೆ, ಸಿದ್ದರಾಮಯ್ಯ ಕಾಲದಲ್ಲಿ ಹಾಗೆಯೇ ಇತ್ತು ಎಂದು ವ್ಯಂಗ್ಯವಾಡಿದರು. ನಮ್ಮ ನಾಯಕರು ನರೇಂದ್ರ ಮೋದಿ, ಅವರೂ ಬಂಡವಾಳ ಮಾಡಿಕೊಳ್ಳಲಿ, ನಮ್ಮ ನಾಯಕರಾದ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಬಲಿಷ್ಠವಾಗಿದೆ ಎಂದು ಒಂದು ಒಳ್ಳೆಯ ಮಾತು ಹೇಳಿದರೆ ತಪ್ಪೇನು? ಎಂದರು.

ಬೆಳಗಾವಿಯಲ್ಲಿ ಜಾರಕಿಹೊಳಿ ಬ್ರದರ್ಸ ವರ್ಸಸ್‌ ಅದರ್ಸ ಸ್ಥಿತಿ ವಿಚಾರ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ರೀತಿಯ ಬಣ ರಾಜಕಾರಣಕ್ಕೆ ಅವಕಾಶವಿಲ್ಲ. ನಮ್ಮದೇ ಒಂದೇ ಪಾರ್ಟಿ, ಎಲ್ಲರೂ ಬಿಜೆಪಿ ರಾಜಕಾರಣ ಒಂದೇ ಮಾಡಬೇಕು. ಯಾರು ಬಿಜೆಪಿ ರಾಜಕಾರಣ ಮಾಡುತ್ತಾರೆ ಅವರಿಗೆ ಭವಿಷ್ಯವಿದೆ. ಇಷ್ಟೇ ನಾನು ಹೇಳಲು ಬಯಸುವೆ ಎಂದರು.

ಬಿಜೆಪಿ ಟಿಕೆಟ್‌ ಕೇಳುವುದು ಅಪರಾಧ ಅಲ್ಲ. ಸಾಮಾನ್ಯ ಕಾರ್ಯಕರ್ತನಿಗೂ ಟಿಕೆಟ್‌ ಕೇಳುವ ಅವಕಾಶವಿದೆ. ಪಕ್ಷಕ್ಕೆ ಒಂದು ಚೌಕಟ್ಟಿದೆ, ಆ ಚೌಕಟ್ಟಿನೊಳಗೆ ಪಕ್ಷ ಯಾವ ಸಂದರ್ಭದಲ್ಲಿ ಬಯಸುತ್ತದೆ ಆಗ ಚರ್ಚೆ ಆಗಲಿದೆ. ಟಿಕೆಟ್‌ ವಿಚಾರ ಬಿಜೆಪಿಯಲ್ಲಿ ಹಾದಿ ಬೀದಿಯಲ್ಲಿ ಚರ್ಚಿಸುವ ವಿಷಯವಲ್ಲ. ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು, ಅದನ್ನು ಮಾಡುತ್ತೇವೆ. ಯಾರು ಗೆಲ್ಲುತ್ತಾರೆ, ಯಾರಿಗೆ ಹೆಚ್ಚು ಜನಪ್ರಿಯತೆ ಇರುತ್ತದೆ ಎಂಬ ಎರಡು ಮಾನದಂಡ ಇಟ್ಟುಕೊಂಡು ಟಿಕೆಟ್‌ ಕೊಡುತ್ತದೆ. ಒಂದು ಇಂಟರ್ನಲ್‌ ಸರ್ವೇ, ಇನ್ನೊಂದು ಎಕ್ಸಟರ್ನಲ್‌ ಸರ್ವೆ ಮಾಡಿ ಮಾನದಂಡಲ್ಲಿ ಬರುವವರಿಗೆ ಟಿಕೆಟ್‌ ನೀಡಲಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮತ್ತೆ ಬಿಜೆಪಿಗೆ ಬಹುಮತ ಖಚಿತ: ಕೆ.ಎಸ್‌.ಈಶ್ವರಪ್ಪ

ಜನರಿಗೆ ಕೊಡಬೇಕು ಅಂದಾಗ ಮಾನದಂಡ ವಿಷಯ ಬರುತ್ತೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್‌ ಸರ್ಕಾರ ಇದ್ದಾಗ ಡಿಕೆಶಿ ಇಂಧನ ಸಚಿವರಾಗಿದ್ದರು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಗಿರಿಧರ ಪೈ ಕರೆಂಟ್‌ ಇಲ್ಲ ಎಂದು ಇಂಧನ ಸಚಿವರಿಗೆ ಫೋನ್‌ ಮಾಡಿ, ಎಂಥಾ ಸಾವು ಮಾರಾಯ್ರೆ, ಮೊಬೈಲ್‌ ಚಾರ್ಜ್‌ಮಾಡೋಕೆ ಕರೆಂಟ್‌ ಇಲ್ಲ ಎಂದು ಹೇಳಿದ್ದಕ್ಕೆ, ಕರೆಂಟ್‌ ಕೊಡದೇ ಮಧ್ಯರಾತ್ರಿ ಪೊಲೀಸರು ಬಂದು ಜೈಲಿಗೆ ಕಳುಹಿಸಿದ್ದರು. ಕರೆಂಟ್‌ ಕೇಳಿದವರಿಗೆ ಕರೆಂಟ್‌ ನೀಡದ ಪಾರ್ಟಿ ಫ್ರೀ ಕರೆಂಟ್‌ ಎಂದು ಹೇಳುತ್ತಿದ್ದಾರೆ ಎಂದರು.