ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ಕುಟುಂಬಕ್ಕೆ ಸೀಮಿತವಾಗಿವೆ. ಆದರೆ, ಭಾರತೀಯ ಜನತಾ ಪಾರ್ಟಿ ಕೆಡರ್‌ ಬೇಸ್‌ ಪಾರ್ಟಿ. ಜಗತ್ತಿನಲ್ಲೇ ಅತೀ ಹೆಚ್ಚು ಸದಸ್ಯರನ್ನು ಹೊಂದಿದ ದೊಡ್ಡ ಪ್ರಜಾಪ್ರಭುತ್ವ ಪಕ್ಷ ನಮ್ಮದಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.  

ಬೆಳಗಾವಿ (ಮಾ.06): ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ಕುಟುಂಬಕ್ಕೆ ಸೀಮಿತವಾಗಿವೆ. ಆದರೆ, ಭಾರತೀಯ ಜನತಾ ಪಾರ್ಟಿ ಕೆಡರ್‌ ಬೇಸ್‌ ಪಾರ್ಟಿ. ಜಗತ್ತಿನಲ್ಲೇ ಅತೀ ಹೆಚ್ಚು ಸದಸ್ಯರನ್ನು ಹೊಂದಿದ ದೊಡ್ಡ ಪ್ರಜಾಪ್ರಭುತ್ವ ಪಕ್ಷ ನಮ್ಮದಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಜೆ.ಎನ್‌.ಮೆಡಿಕಲ್‌ ಕಾಲೇಜು ಜೀರಗೆ ಸಭಾಭವನದಲ್ಲಿ ಮಂಗಳವಾರ ನಡೆದ ಪ್ರಬುದ್ಧರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ರಾಜ್ಯಸಭಾ ಚುನಾವಣೆ ವೇಳೆ ಪಾಕ್‌ ಪರ ಘೋಷಣೆ ಕೂಗಿದರು. ಮಲ್ಲಿಕಾರ್ಜುನ ಖರ್ಗೆ ಅವರೇ ಕರ್ನಾಟಕದ ಈ ಭೂಮಿ ಪುತ್ರ ನೀವು. ಈ ವಿಚಾರದಲ್ಲಿ ನಿವೇಕೆ ಸುಮ್ಮನಿದ್ದೀರಿ ಎಂದು ಪ್ರಶ್ನಿಸಿದ ನಡ್ಡಾ, ಭಾರತ ಜೋಡೋ ಪಾದಯಾತ್ರೆ ಮಾಡುತ್ತಿದ್ದೀರಲ್ಲ. 

Add Asianetnews Kannada as a Preferred SourcegooglePreferred

ಭಾರತ ಒಡೆಯುವವರು ನಿಮ್ಮ ಮನೆಯಲ್ಲೇ ಕುಳಿತಿದ್ದಾರೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಮಾಡಲಾಗಿದೆ. ಕಾಂಗ್ರೆಸ್‌ನವರಿಗೆ ಮತಗಳು ಬೇಕಿವೆ. ಅವರಿಗೆ ನಿಜವಾಗಿಯೂ ದೇಶಭಕ್ತಿ ಇಲ್ಲ. ಅವರದ್ದು ಕುಟುಂಬ ಭಕ್ತಿ ಎಂದು ವ್ಯಂಗ್ಯವಾಡಿದರು. ಫಾರೂಕ್‌ ಅಬ್ದುಲ್ಲಾ, ಅಖಿಲೇಶ ಯಾದವ, ಲಾಲು ಪ್ರಸಾದ ಯಾದವ, ರಾಬ್ಡಿ ದೇವಿ, ಗಾಂಧಿ ಕುಟುಂಬ ಹೀಗೆ ಪ್ರತಿಪಕ್ಷಗಳು ಕುಟುಂಬ ಪಾರ್ಟಿಗಳಾಗಿವೆ. ಅವರು ನಮ್ಮ ಕುಟುಂಬ ಉಳಿಯಲಿ, ಭ್ರಷ್ಟಾಚಾರ ಹೆಚ್ಚಲಿ ಎನ್ನುತ್ತಿದ್ದಾರೆ. ಕೇಜ್ರಿವಾಲ್‌, ಸಂಜಯ ಸಿಂಗ್‌ ಸೇರಿದಂತೆ ಪ್ರತಿಪಕ್ಷಗಳ ನಾಯಕರ ಮೇಲೆ ಭ್ರಷ್ಟಾಚಾರ ಆರೋಪಗಳಿವೆ. ಕೆಲವರು ಜಾಮೀನಿನ ಮೇಲಿದ್ದರೆ, ಕೆಲವರು ಜೈಲಿನಲ್ಲಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದರು.

ರಾಜಕೀಯ ಸಂಸ್ಕೃತಿ ಬದಲಾಯಿಸಿದ ಪ್ರಧಾನಿ ಮೋದಿ: ಜೆ.ಪಿ.ನಡ್ಡಾ

ಗಾಂಧಿ ಕುಟುಂಬ ತಿವಿದ ನಡ್ಡಾ: ಇಡೀ ಜಗತ್ತಿನಲ್ಲಿ ಆರ್ಥಿಕತೆಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ 2028ರಲ್ಲಿ ನಾವು 3ನೇ ಸ್ಥಾನಕ್ಕೆ ಬರುತ್ತೇವೆ. ಗಾಂಧಿ ಕುಟುಂಬ ನಿರುದ್ಯೋಗದ ಬಗ್ಗೆ ಮಾತನಾಡುತ್ತಿದೆ. ಆ ಕುಟುಂಬವೇ ಈಗ ನಿರುದ್ಯೋಗಿಯಾಗಿದೆ. ಜಗತ್ತಿನಲ್ಲಿ ಭಾರತದ ಗ್ರೋಥ್‌ರೇಟ್‌ ಶೇ.6.3 ಇದೆ. ಇದನ್ನು ನಾವು ಅನಕ್ಷರಸ್ಥರಿಗೆ ತಿಳಿಸಬೇಕೇ ಎಂದು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸ್ಟಾಕ್‌ ಮಾರ್ಕೆಟ್‌ನಲ್ಲಿ ನಾವು ಬಲಾಢ್ಯರಾಗಿದ್ದೇವೆ. ಭಾರತ ಮುಂಚೂಣಿಯಲ್ಲಿದೆ. ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಕನಸಿನೊಂದಿಗೆ ಹೋಗುತ್ತಿದ್ದೇವೆ. ವಿಕಸಿತ ಭಾರತ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.

ಪಾಕಿಸ್ತಾನ್ ಜಿಂದಾಬಾದ್ ಎಂದವರನ್ನು ಭೂಮಿಯೊಳಗೆ ಹೊಕ್ಕರು ಬಿಡುವುದಿಲ್ಲ: ಶಿವರಾಜ ತಂಗಡಗಿ

ಚುನಾವಣೆಗಳಲ್ಲಿ ಬಹುಮತದೊಂದಿಗೆ ಗೆದ್ದ ಪಾರ್ಟಿಗಳು ಬಳಿಕ ಆ ಸರ್ಕಾರ ಒಂದು ಜಾತಿಗೆ ಸೀಮಿತವಾಗುತ್ತಿತ್ತು. ಇಂತಹ ಆಡಳಿತ ಎಂದಿಗೂ ಇಡೀ ಸಮಾಜ ಪ್ರತಿನಿಧಿಸುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ರಾಜಕಾರಣವನ್ನು ಸವಾಲಾಗಿ ಸ್ವೀಕರಿಸಿ, ರಾಜಕೀಯ ಸಂಸ್ಕೃತಿ ಬದಲಾಯಿಸಿದರು. ಜಾತಿ ರಾಜಕಾರಣಕ್ಕೆ ತಡೆಹಾಕಿದರು. ಎಲ್ಲರಿಗೂ ನ್ಯಾಯಕೊಟ್ಟರು. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ ಮಂತ್ರದೊಂದಿಗೆ ಅಭಿವೃದ್ಧಿ ಸಂಕಲ್ಪ ಮಾಡಿದರು ಎಂದರು. ಈ ಹಿಂದೆ ರಾಜಕಾರಣ ನೋಡಿದರೆ ಭ್ರಷ್ಟಾಚಾರ, ದುರಾಡಳಿತ, ಜಾತಿ ರಾಜಕಾರಣ ತುಂಬಿತ್ತು. ರಾಜಕಾರಣದ ಈ ಸ್ಥಿತಿ ಎಂದೂ ಬದಲಾಗದು ಎಂಬ ಸ್ಥಿತಿ ಇತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ರಾಜಕಾರಣವನ್ನು ಸವಾಲಾಗಿ ಸ್ವೀಕರಿಸಿ, ರಾಜಕೀಯ ನೀತಿ, ಸಂಸ್ಕೃತಿಯನ್ನು ಬದಲಾಯಿಸಿದ್ದಾರೆ ಎಂದು ಹೇಳಿದರು.