ಸರ್ಕಾರಕ್ಕೆ ಮುಜುಗರ ತಂದ ವಿಶ್ವನಾಥ್ ಹೇಳಿಕೆ: ಬಿಜೆಪಿ ಮುಖಂಡ ಕೆಂಡಾಮಂಡಲ
ವಿಶ್ವನಾಥ್ ಈಗ ಬಿಜೆಪಿಗೆ ಬಂದಿದ್ದಾರೆ. ಪಕ್ಷದೊಳಗೆ ಬಂದು ಸ್ವಲ್ಪ ಅಧ್ಯಯನ ಮಾಡಿ ಹೇಳಿಕೆ ನೀಡಬೇಕು| ಈ ಹಿಂದೆ ಟಿಪ್ಪು ಸುಲ್ತಾನ್ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು| ಈಗ ಮತ್ತೆ ಗೊಂದಲದ ಹೇಳಿಕೆ ನೀಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡ ರವಿಕುಮಾರ್|
ಬೆಂಗಳೂರು(ಸೆ.18): ಟಿಪ್ಪು ಸುಲ್ತಾನ್ ಮತ್ತು ಡ್ರಗ್ಸ್ ವಿಚಾರದಲ್ಲಿ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರಕ್ಕೀಡು ಮಾಡುತ್ತಿರುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಬಹಿರಂಗವಾಗಿಯೇ ಗರಂ ಆಗಿದ್ದು, ಪಕ್ಷದೊಳಗೆ ಯಾವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ತಿಳಿದುಕೊಂಡರೆ ಒಳ್ಳೆಯದು ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಶ್ವನಾಥ್ ಈಗ ಬಿಜೆಪಿಗೆ ಬಂದಿದ್ದಾರೆ. ಪಕ್ಷದೊಳಗೆ ಬಂದು ಸ್ವಲ್ಪ ಅಧ್ಯಯನ ಮಾಡಿ ಹೇಳಿಕೆ ನೀಡಬೇಕು. ಈ ಹಿಂದೆ ಟಿಪ್ಪು ಸುಲ್ತಾನ್ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈಗ ಮತ್ತೆ ಗೊಂದಲದ ಹೇಳಿಕೆ ನೀಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿಗೆ ಮತ್ತೆ ಮುಜುಗರ : ಸರ್ಕಾರದ ವಿರುದ್ಧವೇ ಮಾತಾಡಿದ ವಿಶ್ವನಾಥ್
ವಿಶ್ವನಾಥ್ ಅವರು ಹೇಳಿದ್ದು ಒಂದು ಮಾತು ಒಪ್ಪುತ್ತೇನೆ. ಕೇವಲ ಚಿತ್ರರಂಗದಲ್ಲಿ ಮಾತ್ರ ಡ್ರಗ್ಸ್ ಇಲ್ಲ ನಿಜ. ಆದರೆ ಎಲ್ಲೆಲ್ಲಿ ಇದೆ ಎನ್ನುವ ಬಗ್ಗೆ ಪಕ್ಕಾ ಮಾಹಿತಿ ಸಿಗಬೇಕು. ಆ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಸರಿಯಾದ ದಿಕ್ಕಿನಲ್ಲಿ ಸರ್ಕಾರ ಮತ್ತು ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಆದರೆ ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ವಿಶ್ವನಾಥ್ ಅವರು ಹೇಳಿದ್ದರಲ್ಲಿ ಯಾವುದೇ ಹುರುಳಿಲ್ಲ. ವಿಶ್ವನಾಥ್ ಅವರು ಬಿಜೆಪಿ ಒಳಗೆ ಚೆನ್ನಾಗಿ ಬಂದು, ಏನು ನಡೆಯುತ್ತಿದೆ ಮತ್ತು ಯಾವ ಯಾವ ನಿರ್ಧಾರ ಪಕ್ಷ ತೆಗೆದುಕೊಳ್ಳುತ್ತದೆ ಎನ್ನುವುದನ್ನು ತಿಳಿದುಕೊಂಡರೆ ಒಳ್ಳೆಯದು ಎಂದು ಹೇಳಿದರು.