ಮುಂಬರುವ ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಕರ್ನಾಟಕ ಸರ್ಕಾರಿ ಸ್ವಾಮ್ಯದ, ಮೈಸೂರು ಕಂಪನಿ ಉತ್ಪಾದಿಸುವ ಇಂಕ್‌ ಅನ್ನೇ ಮತದಾರರ ಕೈಗೆ ಗುರುತು ಹಾಕಲು ಬಳಸಲಾಗುವುದು ಎಂದು ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಮುಂಬೈ: ಮುಂಬರುವ ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಕರ್ನಾಟಕ ಸರ್ಕಾರಿ ಸ್ವಾಮ್ಯದ, ಮೈಸೂರು ಕಂಪನಿ ಉತ್ಪಾದಿಸುವ ಇಂಕ್‌ ಅನ್ನೇ ಮತದಾರರ ಕೈಗೆ ಗುರುತು ಹಾಕಲು ಬಳಸಲಾಗುವುದು ಎಂದು ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಕೋರಸ್‌ನ ಮಾರ್ಕರ್‌ ಪೆನ್‌ನಿಂದ ಗುರುತು

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾರರ ಬೆರಳಿಗೆ ಖಾಸಗಿ ಕಂಪನಿ ಕೋರಸ್‌ನ ಮಾರ್ಕರ್‌ ಪೆನ್‌ನಿಂದ ಗುರುತು ಹಾಕಲಾಗಿತ್ತು. ಆದರೆ ಅಸಿಟೋನ್‌ ಎಂಬ ರಾಸಾಯನಿಕ ಬಳಸಿ ಒರೆಸಿದಾಗ ಇಂಕ್‌ ಅಳಿಸಿಹೋದ ವಿಡಿಯೋಗಳು ವೈರಲ್‌ ಆಗಿದ್ದವು. ಇದು ಚುನಾವಣಾ ಆಯೋಗದ ಅಕ್ರಮಕ್ಕೆ ಸಾಕ್ಷಿ ಎಂದು ಉದ್ಧವ್‌ ಠಾಕ್ರೆ ಮತ್ತು ರಾಜ್‌ ಠಾಕ್ರೆ ಆರೋಪಿಸಿದ್ದರು. ಅದರ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗ ಮರಳಿ ಮೈಸೂರು ಇಂಕ್‌ ಬಳಸಲು ನಿರ್ಧರಿಸಿದೆ.

ಮುಂಬರುವ ಜಿಲ್ಲಾ ಪರಿಷತ್‌ ಚುನಾವಣೆಯಲ್ಲಿ ಮೈಸೂರು ಬಣ್ಣ

ಈ ಕುರಿತು ಮಾತನಾಡಿದ ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯುಕ್ತ ದಿನೇಶ ವಾಘ್ಮರೆ, ‘ನಾವು 2011ರಿಂದ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಾರ್ಕರ್‌ ಪೆನ್ನುಗಳನ್ನೇ ಬಳಸುತ್ತಿದ್ದೇವೆ. ಆದರೆ ಮುಂಬರುವ ಜಿಲ್ಲಾ ಪರಿಷತ್‌ ಚುನಾವಣೆಯಲ್ಲಿ ಕರ್ನಾಟಕ ಸರ್ಕಾರದ ಕಂಪನಿಯಾದ ಮೈಸೂರು ಬಣ್ಣ ಮತ್ತು ಅರಗು ಕಂಪನಿ ಉತ್ಪಾದಿಸುವ ಸಾಂಪ್ರದಾಯಿಕ ಶಾಯಿಯನ್ನು ಬಳಸಲು ನಿರ್ಧರಿಸಿದ್ದೇವೆ’ ಎಂದರು.