ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಮೂರು ಸಾವಿರ ಕೋಟಿ ಅನುದಾನ ಬರುತ್ತಿದೆ. ಆದ್ರೆ ಕಾಮಾಗಾರಿ ಮಾಡದೇ ಭೋಗಸ್‌ ಬಿಲ್‌ ಗಳನ್ನ ಹಾಕಿ ಅಭಿವೃದ್ಧಿ ಹಣ ನುಂಗಿ ಹಾಕಲಾಗುತ್ತಿದೆ. ಕೆಕೆಆರ್‌ಡಿಬಿಯ ಭ್ರಷ್ಟಾಚಾರದ ಕುರಿತು ದಾಖಲೆ ಸಮೇತ ಶೀಘ್ರದಲ್ಲಿ ಬಿಡುಗಡೆ ಮಾಡುತ್ತೇವೆ: ಮುಖ್ಯಮಂತ್ರಿ ಚಂದ್ರು

ಕಲಬುರಗಿ(ಜ.31): 2023ರ ರಾಜ್ಯದ ವಿಧಾನ ಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್‌ ಕೊಡಲು ಆಮ್‌ ಆದ್ಮಿ ಪಕ್ಷ ತಯಾರಿ ನಡೆಸಿದೆ. ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಪಕ್ಷ ಬಲವರ್ಧನೆಗೆ ರಾಷ್ಟ್ರೀಯ ನಾಯಕರು ಆಗಮಿಸಲಿದ್ದು ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಕಣಕ್ಕಿಳಿಸುವದಾಗಿ ಕಲಬುರಗಿಯಲ್ಲಿ ಆಮ್‌ ಆದ್ಮಿ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ, ನಟ ಮುಖ್ಯಮಂತ್ರಿ ಚಂದ್ರು ಹೇಳಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವಿರುದ್ಧ ಭ್ರಷ್ಟಾಚಾರ, ಲೂಟಿ ಆರೋಪ ಮಾಡಿ ಗುಡುಗಿದ ಮುಖ್ಯಮಂತ್ರಿ ಚಂದ್ರು, ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಅಲ್ಲ, ಇದು ಕಳ್ಳ ಖದೀಮರ ರಿಜಿನಲ್‌ ಡೆವಲಪ್ಮೆಂಟ್‌ ಬೋರ್ಡ್‌ ಎಂದು ಕಿಡಿಕಾರಿದರು.

ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಮೂರು ಸಾವಿರ ಕೋಟಿ ಅನುದಾನ ಬರುತ್ತಿದೆ. ಆದ್ರೆ ಕಾಮಾಗಾರಿ ಮಾಡದೇ ಭೋಗಸ್‌ ಬಿಲ್‌ ಗಳನ್ನ ಹಾಕಿ ಅಭಿವೃದ್ಧಿ ಹಣ ನುಂಗಿ ಹಾಕಲಾಗುತ್ತಿದೆ. ಕೆಕೆಆರ್‌ಡಿಬಿಯ ಭ್ರಷ್ಟಾಚಾರದ ಕುರಿತು ದಾಖಲೆ ಸಮೇತ ಶೀಘ್ರದಲ್ಲಿ ಬಿಡುಗಡೆ ಮಾಡುತ್ತೇವೆಂದು ಹೇಳಿದರು.

ಕಾಂಗ್ರೆಸ್‌ ಬಸ್‌ಯಾತ್ರೆಗೆ 52 ಸ್ಥಾನ ಮಾತ್ರ: ಸಚಿವ ಅಶ್ವತ್ಥ ನಾರಾಯಣ್‌

ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಢಳಿತ ನೀಡುವ ನಿಲುವು ಹೊಂದಿದ್ದು, ರಾಜ್ಯದ 224 ಕ್ಷೇತ್ರದಲ್ಲಿ ಪಕ್ಷ ಸಂಘಟನೆಗಾಗಿ ದೆಹಲಿ ಸಿಎಂ ಕ್ರೇಜಿವಾಲ, ಪಂಜಾಬ್‌ ಸಿಎಂ ಭಗವಂತ ಮಾನ್‌, ಪ್ರಮುಖ ಸಚಿವರು ಶಾಸಕರುಗಳು ರಾಜ್ಯಕ್ಕೆ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಯಾವುದೇ ಪಕ್ಷ ಗೆದ್ದರು ನಾವು ಎರಡನೇ ಸ್ಥಾನದಲ್ಲಾದರೂ ಇರುತ್ತೇವೆಂದರು.

ಮುಂಬರುವ ಫೆ.26ಕ್ಕೆ ದಾವಣಗೆರೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲು ಚಿಂತನೆ ನಡೆದಿದೆ. ಕಾರ್ಯಕ್ರಮಕ್ಕೆ ಕೇಜ್ರಿವಾಲ್‌ ಬರಲಿದ್ದಾರೆ. ಚುನಾವಣೆ ಪೂರ್ವ ನಾಲ್ಕಾರು ಬಾರಿ ರಾಜ್ಯಕ್ಕೆ ಬರುವ ಆಶ್ವಾಸನೆ ಕೇಜ್ರಿವಾಲ್‌ ಕೊಟ್ಟಿದ್ದಾರೆ. ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಅಗತ್ಯ ಯೋಜನೆ ರೂಪಿಸಲಾಗಿದೆ. ಪ್ರಾಮಾಣಿಕರು ಶುದ್ಧ ಹಸ್ತದವರು ಯಾರೇ ಬಂದರು ಅವರನ್ನ ಪಕ್ಷ ಬರಮಾಡಿಕೊಳ್ಳಲಿದೆ ಎಂದರು.

ಸಾಹಸ ಸಿಂಹ ವಿಷ್ಣು ಸ್ಮಾರಕ ಸ್ವಾಗತ:

ಮೇರು ನಟ ಸಾಹಸಸಿಂಹ ವಿಷ್ಣುವರ್ಧನ್‌ ಅವರ ಸ್ಮಾರಕ ಇಂದು ಲೋಕಾರ್ಪಣೆ ಆಗ್ತಿರೋದಕ್ಕೆ ಹಿರಿಯ ನಟರೂ ಆದ ಮುಖ್ಯಮಂತ್ರಿ ಚಂದ್ರು ಸಂತಸ ವ್ಯಕ್ತಪಡಿಸಿದ್ದಾರೆ. ರಾಜಕುಮಾರ, ವಿಷ್ಣುವರ್ಧನ್‌ ಸೇರಿ ಎಲ್ಲರ ಜೊತೆ ನಟನೆ ಮಾಡಿದ್ದೇನೆ. ಸ್ಮಾರಕ ತಡವಾದ್ರು ಕೂಡ ವಿಷ್ಣುವರ್ಧನ್‌ ಸ್ಮಾರಕ ಸಿದ್ಧಗೊಂಡು ಲೋಕಾರ್ಪಣೆ ಆಗುತ್ತರುವುದು ಸಂತೋಷ ಸಂಭ್ರಮ ಮನೆ ಮಾಡಿದೆ. ಇದು ಕಲಾವಿದನಿಗೆ ಸಂದ ಗೌರವ ಕೊಡುಗೆ. ವಿಷ್ಣುವರ್ಧನ್‌ ಸ್ಮಾರಕ ಕೇವಲ ಸ್ಮಾರಕ ಆಗಿ ಇರಬಾರದು, ಅದು ಮುಂದಿನ ಭವಿಷ್ಯದ ಪಿಳಿಗೆಗಳಿಗೆ, ವಿಷ್ಣು ಓರ್ವ ಸಾಂಸ್ಕೃತಿಕ ಲೋಕದ ರಾಯಭಾರಿಗಳಾಗಿ ಕೆಲಸ ಮಾಡಿದ್ದಾರೆ ಅನ್ನೋದನ್ನ ತೊರಿಸಿಕೊಡುವಂತೆ ಆಗಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಅಂತ ಮುಖ್ಯಮಂತ್ರಿ ಚಂದ್ರು ಮನವಿ ಮಾಡಿದ್ದಾರೆ. ವಿಷ್ಣು ಸ್ಮಾರಕ ಅತ್ಯಂತ ಆಕರ್ಷಣಿಯ ಜನಪ್ರೀಯ ಆಗಲಿ ಎಂದು ಆಸೆ ವ್ಯಕ್ತಪಡಿಸಿದರು.