ಮೋದಿ ಬರುವ ಮುಂಚೆ ಅವರು ಶ್ರೀಮಂತರಾಗಿರಲಿಲ್ಲವಾ ಎಂದು ಸಂಸದ ಪ್ರತಾಪ್‌ ಸಿಂಹ ಪ್ರಶ್ನಿಸಿದ್ದಾರೆ. ಅದಾನಿ, ಅಂಬಾನಿ ಸಂಪತ್ತು ಹೆಚ್ಚಾದ ಬಗ್ಗೆ ಮಾತಾಡಿದ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ಮೈಸೂರು (ಏ.22): ಮೋದಿ ((PM Narendra Modi) ಬರುವ ಮುಂಚೆ ಅವರು ಶ್ರೀಮಂತರಾಗಿರಲಿಲ್ಲವಾ ಎಂದು ಸಂಸದ ಪ್ರತಾಪ್‌ ಸಿಂಹ (Pratap Simha) ಪ್ರಶ್ನಿಸಿದ್ದಾರೆ. ಅದಾನಿ, ಅಂಬಾನಿ ಸಂಪತ್ತು ಹೆಚ್ಚಾದ ಬಗ್ಗೆ ಮಾತಾಡಿದ ಸಿದ್ದರಾಮಯ್ಯ (Siddaramaiah) ಅವರಿಗೆ ತಿರುಗೇಟು ನೀಡಿದ ಸಂಸದ ಪ್ರತಾಪ್‌ ಸಿಂಹ, ಮಾತೆತ್ತಿದರೆ ಅದಾನಿ, ಅಂಬಾನಿ ಅಂತೀರಾ. ಎಷ್ಟೋ ಶ್ರೀಮಂತ ಉದ್ಯಮಿಗಳು ಹುಟ್ಟಿದ್ದು ಯಾರ ಕಾಲದಲ್ಲಿ? ಆಸ್ತಿ ಮೌಲ್ಯ ಹೆಚ್ಚಾದಂತೆ ಶ್ರೀಮಂತಿಕೆ ಹೆಚ್ಚಾಗುತ್ತದೆ. ಅದಕ್ಕೆ ಮೋದಿ ಕಾರಣ ಎಂದರೆ ಏನರ್ಥ? ಸಿದ್ದರಾಮಯ್ಯ ಯಾವ ಜಮೀನಿನಲ್ಲಿ ಬೆಳೆ ಬೆಳೆದು ಶ್ರೀಮಂತರಾಗಿದ್ದಾರೆ. 

Add Asianetnews Kannada as a Preferred SourcegooglePreferred

ಸಿದ್ದರಾಮಯ್ಯ ಯಾವ ಆಲೂಗೆಡ್ಡೆ, ಜೋಳ ಬೆಳೆದು ಹಣ ಮಾಡಿದರು. ನೀವು ಇವತ್ತು ಶ್ರೀಮಂತರಾಗಿಲ್ಲವಾ? 30- 40 ವರ್ಷದ ಹಿಂದೆ ಇದ್ದ ಹಾಗೆಯೇ ಇದ್ದೀರಾ? ನಿಮ್ಮ ಜೊತೆ ಇರುವ ಕೆ.ಜೆ.ಜಾರ್ಜ್, ಎಂ.ಬಿ. ಪಾಟೀಲ್‌, ಡಿ.ಕೆ. ಶಿವಕುಮಾರ್‌ 40 ವರ್ಷದ ಹಿಂದೆ ಏನಾಗಿದ್ದರು ಹೇಳಿ. ಇವತ್ತು ಎಷ್ಟು ಶ್ರೀಮಂತರಾಗಿದ್ದಾರೆ. ಉದ್ಯಮಿಗಳ ಶ್ರೀಮಂತಿಕೆ ಬಗ್ಗೆ ಮಾತನಾಡುವ ನೀವು ರಾಜಕಾರಣಿಗಳ ಶ್ರೀಮಂತಿಕೆ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ವಿರೋಧಿಸಿರುವ ಉದ್ಯಮಿಗಳನ್ನು ಸೃಷ್ಟಿಸಿದ್ದು ಮೋದಿ ಅಲ್ಲ. ಕಾಂಗ್ರೆಸ್‌ ನಾಯಕರು ಎಂಬುದನ್ನು ತಿಳಿಯಬೇಕು ಎಂದರು.

ಯೋಗ ದಿನಕ್ಕೆ ಪ್ರಧಾನಿ ಮೋದಿ ಬರುವ ಸಾಧ್ಯತೆ: ಸಂಸದ ಪ್ರತಾಪ್‌ ಸಿಂಹ

ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ: ಆಧಾರ ರಹಿತವಾಗಿ ನನ್ನ ಸರ್ಕಾರವನ್ನು ಅಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) 10% ಕಮಿಷನ್‌ ಸರ್ಕಾರ ಎಂದು ಟೀಕಿಸಿದ್ದರು. ಆದರೆ, ಈಗ ಈ ಬಿಜೆಪಿ ಸರ್ಕಾರ (BJP Govt) 40% ಕಮಿಷನ್‌ ಕೇಳುತ್ತಿದೆ ಎಂದು ಗುತ್ತಿಗೆದಾರರ ಸಂಘವೇ ಪ್ರಧಾನಿಗೆ 8 ತಿಂಗಳ ಹಿಂದೆ ಪತ್ರ ಬರೆದಿದೆ, ನಾನು ತಿನ್ನಲ್ಲ, ತಿನ್ನಲೂ ಬಿಡಲ್ಲ ಎನ್ನುವ ನಿಮಗೆ ತಾಕತ್‌ ಇದ್ದರೇ 40% ಸರ್ಕಾರದ ವಿರುದ್ಧ ತನಿಖೆ ಮಾಡಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸವಾಲು ಹಾಕಿದರು. 

ಬೆಲೆ ಏರಿಕೆ, ರೈತ ವಿರೋಧಿ ಆಡಳಿತ ಈಶ್ವರಪ್ಪ (KS Eshwarappa) ಬಂಧನ ಆಗದಿರುವುದನ್ನು ಖಂಡಿಸಿ ನೇತೃತ್ವದಲ್ಲಿ ಕೈ ಪಡೆ ಬೃಹತ್‌ ಪ್ರತಿಭಟನೆ ನಡೆಸಿದ ಬಳಿಕ ಮಾರಿಗುಡಿ ಸಮೀಪ ಮಂಗಳವಾರ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಎಲ್ಲಾ ಏಜೆನ್ಸಿಗಳು ಅವರ ಬಳಿಯೇ ಇದೆಯಲ್ಲಾ ಏಕೆ ತನಿಖೆ ನಡೆಸುತ್ತಿಲ್ಲ ಎಂದು ಕಿಡಿ ಕಾರಿದರು. ಸ್ವತಂತ್ರ ಭಾರತದ ಇದುವರೆಗಿನ ಪ್ರಧಾನ ಮಂತ್ರಿಗಳಲ್ಲಿ ಮೋದಿ ಅವರಷ್ಟುಸುಳ್ಳು ಹೇಳುವ ಪ್ರಧಾನಿಯನ್ನು ನಾನು ನೋಡಿಲ್ಲ, ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎನ್ನುವ ಪ್ರಧಾನಿ ರಸಗೊಬ್ಬರಗಳ ನಿರಂತರ ಬೆಲೆ ಏರಿಕೆ ಮೂಲಕ ಅನ್ನದಾತರಿಂದಲೂ ಸಾವಿರಾರು ಕೋಟಿ ರು. ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಿದರು.

Karnataka Politics: ಬೊಮ್ಮಾಯಿ ಮಾತಾಡುವ ಬಸವಣ್ಣ ಅಲ್ಲ, ದುಡಿವ ಬಸವಣ್ಣ: ಪ್ರತಾಪ್‌ ಸಿಂಹ

ರಾಜ್ಯದಲ್ಲಿ 15 ಲಕ್ಷ ಟನ್‌ ರಾಗಿ ಬೆಳೆಯಲಾಗಿದೆ. ಆದರೆ, ಸರ್ಕಾರ ಬೆಂಬಲ ಬೆಲೆ ಮೂಲಕ 1.90 ಲಕ್ಷ ಟನ್‌ ರಾಗಿಯನ್ನು ಮಾತ್ರ ಕೊಂಡುಕೊಂಡಿದ್ದು ಉಳಿದ ರೈತರು ಏನು ಮಾಡಬೇಕು? ಕಳೆದ 3 ವರ್ಷದಲ್ಲಿ ಬಡವರಿಗೆ ಒಂದೂ ಮನೆ ಮಂಜೂರು ಮಾಡಿಲ್ಲ, ಸರ್ಕಾರ ನಡೆಸುವ ತಾಕತ್‌ ಇಲ್ಲದಿದ್ದರೇ ಬಿಟ್ಟು ತೊಲಗಿ, ನಾವು ಜನಪರ ಆಡಳಿತ ಕೊಡುತ್ತೇವೆಂದು ಹೇಳಿದರೂ ಕುರ್ಚಿಯನ್ನು ಭದ್ರವಾಗಿ ಹಿಡಿದುಕೊಂಡಿದ್ದಾರೆ, ಇವರಿಗೆ ನಾಚಿಕೆ ಇಲ್ಲವೇ ಎಂದು ಬಿಜೆಪಿ ಸರ್ಕಾರವನ್ನು ಛೇಡಿಸಿದರು. ಕಾಂಗ್ರೆಸ್‌ ಜಾರಿ ಮಾಡಿದ್ದ ಹಲವು ಕಾರ್ಯಕ್ರಮಗಳನ್ನು ನಿಲ್ಲಿಸಿದ್ದಾರೆ, ದಲಿತ ವಿರೋಧಿ, ಹಿಂದುಳಿದ ವರ್ಗಗಳ ವಿರೋಧಿ ಸರ್ಕಾರ ಇದಾಗಿದ್ದು ಅಭಿವೃದ್ಧಿ ಶೂನ್ಯವಾಗಿದೆ.