ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು ಬಿಜೆಪಿಗೆ ಹೋದ ಕೆಲವರು ಮತ್ತೆ ಕಾಂಗ್ರೆಸ್‌ಗೆ ಮರಳುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ ಎಂದು ಎಂಎಲ್‌ಸಿ ಎಚ್‌.ವಿಶ್ವನಾಥ್‌ ಹೇಳಿದ್ದಾರೆ.

ನವದೆಹಲಿ (ಆ.17): ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು ಬಿಜೆಪಿಗೆ ಹೋದ ಕೆಲವರು ಮತ್ತೆ ಕಾಂಗ್ರೆಸ್‌ಗೆ ಮರಳುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ ಎಂದು ಎಂಎಲ್‌ಸಿ ಎಚ್‌.ವಿಶ್ವನಾಥ್‌ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿ, ಈಗ ಬಿಜೆಪಿಯಲ್ಲಿರುವ ಎಸ್‌.ಟಿ.ಸೋಮಶೇಖರ್‌, ಮುನಿರತ್ನ ಕಾಂಗ್ರೆಸ್ಸಿಗರು. ಯಾವುದೋ ಪರಿಸ್ಥಿತಿಯಲ್ಲಿ ಇದ್ದಾಗ ಕಾಂಗ್ರೆಸ್‌ ತೊರೆದು ಹೋಗಿದ್ದರು. ಬಿಜೆಪಿಯವರು ಸರ್ಕಾರ ಮಾಡುವಾಗ ನಮ್ಮನ್ನು ದಮ್ಮಯ್ಯ ಬನ್ನಿ ಎಂದು ಕರೆದರು. 

Add Asianetnews Kannada as a Preferred SourcegooglePreferred

ಈಗ ಅವರೆಲ್ಲಾ ಮರಳಿ ಬರುವುದಾದರೆ ರಾಜೀನಾಮೆ ಕೊಟ್ಟು ಮರು ಚುನಾವಣೆ ಆಗಬೇಕು. ಅವರು ಈ ಪರಿಸ್ಥಿತಿಯನ್ನು ಯಾವ ರೀತಿ ನಿರ್ವಹಿಸುತ್ತಾರೆ ಎಂಬುದನ್ನು ನೋಡಬೇಕು. ಕಾಂಗ್ರೆಸ್‌ಗೆ ನಾಯಕರು ಬರಬೇಕು. ದೇಶದಲ್ಲಿ ಕಾಂಗ್ರೆಸ್‌ ಬಲಿಷ್ಠ ಆಗಬೇಕಿದೆ ಎಂದು ಹೇಳಿದರು. ಈ ಹಿಂದೆ ನೆಹರೂ ಅವರು ಪ್ರಧಾನಿಯಾಗಿದ್ದಾಗ ಬೆಂಗಳೂರಿಗೆ ಬಹಳಷ್ಟುಯೋಜನೆಗಳನ್ನು ಕೊಟ್ಟಿದ್ದರು. ಆದರೆ, ಈಗಿನ ಪ್ರಧಾನಿ ಮೋದಿಯಿಂದ ಬೆಂಗಳೂರಿಗೆ ಏನು ಉಪಯೋಗ ಆಯಿತು?. ಮೋದಿಯವರು ಭೂತಕಾಲದಲ್ಲಿ ಮಾತನಾಡುತ್ತಾರೆ. ಭೂತಕಾಲದ ಬಗ್ಗೆ ಮಾತನಾಡುವುದರಿಂದ ಉಪಯೋಗವಿಲ್ಲ ಎಂದರು.

ಕಾಂಗ್ರೆಸ್ ಸೇರುವ ಯಾವುದೇ ಪರಿಸ್ಥಿತಿ ಬಂದಿಲ್ಲ: ಶಾಸಕ ಶಿವರಾಮ್ ಹೆಬ್ಬಾರ್

ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲ್ಲ: ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಒಮ್ಮೆ ಕುಮಾರಸ್ವಾಮಿಯವರ ಹೆಗಲ ಮೇಲೆ ಕೂತು ಅಧಿಕಾರಕ್ಕೆ ಬಂದರೆ ಇನ್ನೊಂದು ಸಲ ನಮ್ಮ ಹೆಗಲ ಮೇಲೆ ಕೂತುಕೊಳ್ಳುತ್ತಾರೆ. ಇವರ ಆಡಳಿತದಿಂದ ಜನ ಬೇಸತ್ತಿರುವುದರಿಂದ ಬಿಜೆಪಿ ಮತ್ತೆ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್‌ ಸರ್ಕಾರ ಚುನಾವಣಾ ಪೂರ್ವ ನೀಡಿದ ಭರವಸೆಯನ್ನು ಈಡೇರಿಸುತ್ತಿದೆ. ಸರ್ಕಾರಕ್ಕೆ ಕೆಲಸ ಮಾಡಲು ಕಾಲಾವಕಾಶ ನೀಡಬೇಕು. ಅದನ್ನು ಬಿಟ್ಟು ಬಿಜೆಪಿ ಹಾಗೂ ಕುಮಾರಸ್ವಾಮಿ ಸರ್ಕಾರದ ವಿರುದ್ಧ ನಿರಂತರ ಟೀಕೆ ಮಾಡುವುದರಲ್ಲಿ ಏನೂ ಅರ್ಥವಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಮುಖಂಡ ಸಿ.ಟಿ.ರವಿ ಕಾಂಗ್ರೆಸ್‌ ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪ ಕಮಿಷನ್‌ ಆರೋಪ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಮಿಷನ್‌ ತೆಗೆದುಕೊಂಡವರು ಮನೆಗೆ ಹೋದರು. ಮನೆಗೆ ಹೋಗಿದ್ದು ಏಕೆ? ಏಕೆ ಗೆಲ್ಲಬಾರದು? ನಿಮ್ಮ ಪರ ಇರುವವರೇ ನೀವು ಏನು ಮತ್ತು ಎಷ್ಟುಭ್ರಷ್ಟಾಚಾರ ಮಾಡಿದ್ದೀರಿ ಎಂದು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಚುನಾವಣಾ ಪೂರ್ವದಲ್ಲಿ ಬಿಜೆಪಿ ಸರ್ಕಾರ ಬೊಮ್ಮಾಯಿ ಒಂದೂವರೆ ಲಕ್ಷ ಕೋಟಿ ರೂಪಾಯಿ ಮೊತ್ತದ ಟೆಂಡರ್‌ಗಳಿಗೆ ಅನುಮೋದನೆ ನೀಡಿತ್ತು. ಈಗ ಆ ಮಸೂದೆಗಳನ್ನು ಯಾರು ಅನುಮೋದಿಸುತ್ತಾರೆ? ಒಬ್ಬರ ಮೇಲೊಬ್ಬರು ಕಳ್ಳರೆಂದು ಆರೋಪ ಮಾಡುವುದರಲ್ಲಿ ಅರ್ಥವೇನು? ಯಾರು ಕಳ್ಳ ಎಂಬುದನ್ನು ಜನರೇ ನಿರ್ಧರಿಸುತ್ತಾರೆ ಎಂದು ಹೇಳಿದರು.

2024ಕ್ಕೆ ನರೇಂದ್ರ ಮೋದಿಯೇ ಪ್ರಧಾನಿ: ಎಂಟಿಬಿ ನಾಗರಾಜ್‌

ಎಚ್‌.ಡಿ.ಕುಮಾರಸ್ವಾಮಿ ಪೆನ್‌ಡ್ರೈವ್‌ ಬಾಂಬ್‌ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿಸಚಿವ ಎಚ್‌.ವಿಶ್ವನಾಥ, ರಾಜಕೀಯವಾಗಿ ಕುಮಾರಸ್ವಾಮಿ ಸ್ಥಾನವೇನು? ಅವರು ಎಲ್ಲಿ ಕುಳಿತಿದ್ದಾರೆ? ಅದರ ಬಗ್ಗೆ ಯೋಚಿಸಬೇಕು. ದೇಶದಲ್ಲಿ ಪಕ್ಷ ರಾಜಕಾರಣ ಮುಗಿದು, ನಾಯಕ, ವ್ಯಕ್ತಿ ಕೇಂದ್ರಿತ ರಾಜಕಾರಣ ಆರಂಭವಾಗಿದೆ. ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಕೊನೆಗೊಂಡಿದೆ ಎಂದು ಇದೇ ವೇಳೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನಿಂದ ಲೋಕಸಭೆಗೆ ಸ್ಪರ್ಧಿಸುತ್ತಾರಾ?ಎಂಬ ಪ್ರಶ್ನೆಗೆ ನಾನು ಕಾಂಗ್ರೆಸ್‌ನಿಂದ ಸಂಸದನಾಗಿದ್ದೇನೆ. 40 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ಅತಿ ಹೆಚ್ಚು ಕಾಲ ಕಾಂಗ್ರೆಸ್‌ನಲ್ಲಿದೆ. ಜೆಡಿಎಸ್‌ ಪಕ್ಷದ ಅಧ್ಯಕ್ಷನಾಗಿಯೂ ಕೆಲಸ ಮಾಡಿದ್ದೇನೆ. ನನ್ನ ಬಾವುಟ ಬದಲಾಗುತ್ತದೆ. ಆದರೆ, ಅಜೆಂಡಾ ಬದಲಾಗುವುದಿಲ್ಲ ಎಂದರು.