ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ. ನಮ್ಮ ಮೀಸಲಾತಿ ಬೇಡಿಕೆ ಅಸಂವಿಧಾನ ಎಂದಿದ್ದಾರೆ, ಆದರೆ ಮುಸ್ಲಿಂ ಸಮಾಜದವರಿಗೆ ಶೇ.4 ಕೊಟ್ಟಿದ್ದಾರೆ.

ವಿಜಯಪುರ (ಜು.14): ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ. ನಮ್ಮ ಮೀಸಲಾತಿ ಬೇಡಿಕೆ ಅಸಂವಿಧಾನ ಎಂದಿದ್ದಾರೆ, ಆದರೆ ಮುಸ್ಲಿಂ ಸಮಾಜದವರಿಗೆ ಶೇ.4 ಕೊಟ್ಟಿದ್ದಾರೆ. ಮುಸ್ಲಿಂರಿಗೆ ಕೊಟ್ಟಿರೋದೆ ಅಸಂವಿಧಾನಿಕ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಮೀಸಲಾತಿ ಕೇಳಲ್ಲ ಎಂದ ಪಂಚಮಸಾಲಿ ಶ್ರೀಗಳ ಹೇಳಿಕೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಹಾಗೂ ಸಮಾಜದ ಕೆಲ ಲೀಡರ್ ನಮ್ಮ ಹೋರಾಟ ಒಡೆಯೋಕೆ ಮುಂದಾಗಿದ್ದರು. ಬೆಳೆಗಾವಿಯಲ್ಲಿ ನಮ್ಮ ಮೇಲೆ ಹಿಂಸೆ ಮಾಡಿದ್ದಾರೆ. ಆ ಕಾರಣಕ್ಕಾಗಿ ಸಿದ್ದರಾಮಯ್ಯ ಮುಂದೆ ಮೀಸಲಾತಿ ಕೇಳಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ ಎಂದು ಯತ್ನಾಳ ಹೇಳಿದರು.

Add Asianetnews Kannada as a Preferred SourcegooglePreferred

75 ವರ್ಷ ತುಂಬಿದ ಮೇಲೆ ನಿವೃತ್ತಿ ಪಡೆಯುವ ವಿಚಾರದ ಕುರಿತು ಆರ್‌ಎಸ್‌ಎಸ್‌ನ ಮೋಹನ ಭಾಗವತ್ ಹೇಳಿಕೆಗೆ ಕಾಂಗ್ರೆಸ್ ನವರ ಟಾಂಗ್ ವಿಚಾರದ ಕುರಿತು ಪ್ರತಿಕ್ರಿಯಿಸಿ, ಮೋಹನ ಭಾಗವತ್ ಅವರು ಮೋದಿ ಅವರಿಗೆ ಏಕೆ ಹೇಳ್ತಾರೆ?. ದೇಶದಲ್ಲಿರುವ ಎಲ್ಲ 75 ವರ್ಷ ದಾಟಿದವರು ಮನೆಯಲ್ಲಿ ಮೊಮ್ಮಕ್ಕಳನ್ನ ಆಟ ಆಡಿಸುತ್ತ ಕೂಡಿ ಅಂತ ಹೇಳಿದ್ದಾರೆ. ಆರ್‌ಎಸ್‌ಎಸ್ ಅನ್ನೋದು ದೇಶಕ್ಕೆ ಗುರು ಇದ್ದಂಗೆ, ಗುರುವಿನ ಸ್ಥಾನದಿಂದ, ಹಿರಿತನದಿಂದ ಅವರು ಹೇಳಿದ್ದಾರೆ. ಅದನ್ನು ಎಲ್ಲರು ಪಾಲಿಸಬೇಕು, ಅದು ಕೇವಲ ಬಿಜೆಪಿ ಮಾತ್ರ ಅಲ್ಲ, ಕಾಂಗ್ರೆಸ್, ಜನತಾ ದಳಕ್ಕೂ ಅನ್ವಯ ಆಗತ್ತೆ ಎಂದು ಯತ್ನಾಳ ಹೇಳಿದರು.

ಆಲಮಟ್ಟಿ ಡ್ಯಾಂ ಎತ್ತರಿಸಲು ಅನುಮತಿ ಸಿಕ್ಕಿದೆ: ಈಗಾಗಲೇ 524 ಮೀಟರ್‌ಗೆ ಏರಿಕೆಗೆ ಅನುಮತಿ ಸಿಕ್ಕಿದೆ. ಮಹಾರಾಷ್ಟ್ರದ ಪ್ರಕಾರ ಕೆಲ ಗ್ರಾಮಗಳಲ್ಲಿ ನೀರು ನಿಲ್ಲಲಿದೆ. ಅದನ್ನ ಬಿಟ್ರೆ ಸಾಂಗ್ಲಿ, ಕೊಲ್ಹಾಪುರಕ್ಕೆ ಯಾವುದೇ ತೊಂದರೆ ಆಗಲ್ಲ ಎಂದು ಹೇಳಿದರು. ಮಹಾರಾಷ್ಟ್ರದವರು ಉದ್ದೇಶಪೂರಕವಾಗಿ ಪ್ರಚೋದನೆ ಮಾಡಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕಾರಣ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಆಗದ ರೀತಿಯಲ್ಲಿ ಎರಡು ರಾಜ್ಯದ ಸಿಎಂಗಳ ಸಭೆ ಕರೆಯಬೇಕು. ನೀರಾವರಿ ತಜ್ಞರನ್ನು ಕರೆದು ಮಹಾ ಸಿಎಂಗೆ ಎಷ್ಟು ಮುಳುಗಡೆ ಆಗುತ್ತೆ ಅಂತಾ ತಿಳಿ ಹೇಳಬೇಕು. ನಮ್ಮ ರಾಜ್ಯಕ್ಕೆ ಯಾವುದೇ ತೊಂದರೆ ಆಗಬಾರದು. ಯಾವುದೇ ಸರ್ಕಾರ ಇದ್ರೂ ನಾವು ಹೋರಾಟ ಮಾಡಬೇಕು. ಮಹಾರಾಷ್ಟ್ರದಲ್ಲಿ ಅದೇ ಉದ್ಯೋಗ ಆಗಿ ಬಿಟ್ಟಿದೆ.

ಕೇವಲ ಕನ್ನಡ, ಮರಾಠಿ ಅಂತಾ ಜಗಳ ಹಚ್ಚೊದೇ ಅವರ ಕೆಲಸ ಆಗಿದೆ. ಭಾಷಾ ಜಗಳ ಹಚ್ಚೋದು, ನೀರಿನ ಜಗಳ ಹಚ್ಚೋದು ಶಾಶ್ವತ ಅಲ್ಲ. ಹಿನ್ನೀರು ನಿಲ್ಲೋದ್ರಿಂದ ಅವರಿಗೂ ನೀರಾವರಿಗೆ ಅನುಕೂಲ ಆಗುತ್ತೆ. ಸುಮ್ಮನೆ ಏನಾದ್ರೂ ಮಾಡಿ ಆಲಮಟ್ಟಿ ಎತ್ತರಕ್ಕೆ ಅಡ್ಡಿ ಮಾಡಬೇಕು ಎಂದು ವ್ಯವಸ್ಥಿತವಾಗಿ ಪಿತೂರಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಸಾಲ ಮಾಡಿಯಾದರೂ ಎತ್ತರ ಮಾಡಬೇಕು. ಗ್ಯಾರಂಟಿಗಳನ್ನು ಕೊಡುವ ಬದಲು ನೀರಿನ ಉಪಯೋಗ ಮಾಡಿದ್ರೆ ಸಾಕು. ಇವರ ಗ್ಯಾರಂಟಿಗಳು ಯಾರಿಗೂ ಬೇಕಿಲ್ಲ. ರಾಜ್ಯದ ಎಲ್ಲ ಸಂಸದರು ಧ್ವನಿ ಎತ್ತಬೇಕು ಎಂದು ಯತ್ನಾಳ ಆಗ್ರಹಿಸಿದರು.