Asianet Suvarna News Asianet Suvarna News

Assembly election: ಪಿಟಿಪಿ ಹ್ಯಾಟ್ರಿಕ್‌ ಕನಸಿಗೆ ಬ್ರೇಕ್‌ ಹಾಕುವದೇ ಕಮಲ?

ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಎರಡು ಬಾರಿ ಗೆದ್ದು ದಾಖಲೆ ಮಾಡಿದ್ದು, ಈಗ ಹ್ಯಾಟ್ರಿಕ್‌ ಕನಸು ಕಾಣುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಅವರದೇ ಸರ್ಕಾರ ರಚನೆಯಾಗಲಿದೆ ಎಂಬ ಮಾತು ಚಾಲ್ತಿಯಲ್ಲಿದೆ. ಹೀಗಾಗಿ ಈ ಕ್ಷೇತ್ರ ಪ್ರಬಲ ಪಕ್ಷಗಳ ಹಣೆಬರೆಹ ಕೂಡ ಬರೆಯಲಿದೆ.

MLA PT Parameshwar will break the hatrick victory in assembly electiion rav
Author
First Published Dec 7, 2022, 12:58 PM IST

ಕೃಷ್ಣ ಎನ್‌. ಲಮಾಣಿ

 ಹೊಸಪೇಟೆ (ಡಿ.7) : ಮಲ್ಲಿಗೆ ನಾಡು ಹೂವಿನಹಡಗಲಿ ವಿಧಾನಸಭೆ ಕ್ಷೇತ್ರದಲ್ಲಿ ಸತತ ಎರಡು ಬಾರಿ ಯಾರೂ ಗೆದ್ದಿಲ್ಲ. ಆದರೆ, ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಎರಡು ಬಾರಿ ಗೆದ್ದು ದಾಖಲೆ ಮಾಡಿದ್ದು, ಈಗ ಹ್ಯಾಟ್ರಿಕ್‌ ಕನಸು ಕಾಣುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಅವರದೇ ಸರ್ಕಾರ ರಚನೆಯಾಗಲಿದೆ ಎಂಬ ಮಾತು ಚಾಲ್ತಿಯಲ್ಲಿದೆ. ಹೀಗಾಗಿ ಈ ಕ್ಷೇತ್ರ ಪ್ರಬಲ ಪಕ್ಷಗಳ ಹಣೆಬರೆಹ ಕೂಡ ಬರೆಯಲಿದೆ.

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಹೂವಿನಹಡಗಲಿ ಕ್ಷೇತ್ರ ಎಸ್ಸಿ ಮೀಸಲು ಕ್ಷೇತ್ರವಾಗಿದೆ. ಮೊದಲ ಸಲ ಬಿಜೆಪಿಯಿಂದ ಚಂದ್ರ ನಾಯ್ಕ ಜಯದ ನಗೆ ಬೀರಿದ್ದರು. ಪಿ.ಟಿ.ಪರಮೇಶ್ವರ ನಾಯ್ಕರನ್ನು ಸೋಲಿಸಿದ್ದರು. ಆದರೆ, ಆ ಬಳಿಕ ನಡೆದ 2013 ಹಾಗು 2018ರ ಚುನಾವಣೆಗಳಲ್ಲಿ ಪಿಟಿಪಿ ಜಯಭೇರಿ ಬಾರಿಸಿದ್ದಾರೆ.

Ground Report:ದಕ್ಷಿಣ ಕನ್ನಡದ 'ಕೇಸರಿ' ಕೋಟೆಯಲ್ಲಿ ಈ ಬಾರಿ 'ಕೈ ಪಡೆ' ಪೈಪೋಟಿ

ಎಂಪಿಪಿ ಕ್ಷೇತ್ರ:

ಈ ಕ್ಷೇತ್ರ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ ಅವರ ಕ್ಷೇತ್ರವಾಗಿದೆ. ಸರಳ, ಸಜ್ಜನಿಕೆಯ ರಾಜಕಾರಣಿ ಹಾಗು ರಂಗಕರ್ಮಿ ಎಂ.ಪಿ.ಪ್ರಕಾಶ ಒಮ್ಮೆ ಸೋತು,ಇನ್ನೊಮ್ಮೆ ಗೆದ್ದು ವಿಧಾನಸೌಧಕ್ಕೆ ಹೋಗುತ್ತಿದ್ದರು. ಸೋತಾಗಲೆಲ್ಲ ಅವರು ಹೂವಿನಹಡಗಲಿಯಲ್ಲಿ ಇದ್ದುಕೊಂಡೇ ಸಾಂಸ್ಕೃತಿಕ ಲೋಕದಲ್ಲಿ ತೊಡಗಿಸಿಕೊಂಡು ಇಡೀ ನಾಡಿಗೆ ಪ್ರಜ್ಞಾಪ್ರಭುತ್ವದ ಸಂದೇಶ ರವಾನಿಸುತ್ತಿದ್ದರು.

ಪಿಟಿಪಿ ಹ್ಯಾಟ್ರಿಕ್‌ ಕನಸು:

ಹರಪನಹಳ್ಳಿ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿದ್ದ ಪಿ.ಟಿ.ಪರಮೇಶ್ವರ ನಾಯ್ಕ ಅವರು ಕ್ಷೇತ್ರ ಪುನರ್‌ ವಿಂಗಡನೆ ಬಳಿಕ ಹೂವಿನಹಡಗಲಿಗೆ ಆಗಮಿಸಿದರು. ಎಂಪಿಪಿ ಅವರು ಹರಪನಹಳ್ಳಿಗೆ ಕ್ಷೇತ್ರ ಬದಲಾಯಿಸಿದರು. ಆದರೆ, 2008ರಲ್ಲಿ ಪಿಟಿಪಿ ಹಾಗು ಎಂಪಿಪಿ ಇಬ್ಬರೂ ಪರಾಭವಗೊಂಡರು. ಆದರೆ, ಛಲಬಿಡದ ಪಿ.ಟಿ.ಪರಮೇಶ್ವರ ನಾಯ್ಕ 2013 ಹಾಗು 2018ರಲ್ಲಿ ಎರಡೂ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. 2013ರಲ್ಲಿ ಗೆದ್ದಾಗ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಅವರು, 2018ರಲ್ಲಿ ಗೆದ್ದಾಗ ದೋಸ್ತಿ ಸರ್ಕಾರದಲ್ಲೂ ಮಂತ್ರಿಯಾಗಿದ್ದರು. ಹಾಗಾಗಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದವರ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂಬ ಮಾತು ಇಲ್ಲಿ ಜನಜನಿತವಾಗಿದೆ.

1999ರಲ್ಲಿ ಬಳ್ಳಾರಿಯಿಂದ ಲೋಕಸಭೆಗೆ ಸ್ಪರ್ಧಿಸಿದ್ದಾಗ ಹಸ್ತದ ಗುರುತಿನಲ್ಲಿ ಗೆದ್ದ ಒಂಬತ್ತು ಶಾಸಕರಲ್ಲಿ ಇವರು ಒಬ್ಬರು. ಈಗ ಉಳಿದ ಎಂಟು ಜನ ಮಾಜಿಯಾಗಿದ್ದಾರೆ. ಇವರೊಬ್ಬರೇ ಈಗ ಶಾಸಕರು.

ಕೈ ಟಿಕೆಟ್‌ಗೆ ಪೈಪೋಟಿ:

ಹಾಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕಗೆ ಹರಪನಹಳ್ಳಿ ಕ್ಷೇತ್ರದ ಮೇಲೆ ಹಿಡಿತ ಇದ್ದು, ಅವರಿಗೆ ಅಲ್ಲಿಗೆ ಕಳುಹಿಸಿದರೆ, ಸ್ಥಳೀಯರಿಗೆ ಟಿಕೆಟ್‌ ದೊರೆಯಲಿದೆ ಎಂಬ ಆಶಯದೊಂದಿಗೆ ಎಂ.ವಿ.ಅಂಜಿನಪ್ಪ, ಕೃಷ್ಣ ನಾಯ್ಕ, ಶಿವಣ್ಣ ಮತ್ತಿಹಳ್ಳಿ, ಕಾಶಿನಾಥ, ಹರೀಶ್‌ ಆಕಾಂಕ್ಷಿಗಳಾಗಿದ್ದಾರೆ.

Ticket Fight: ದಕ್ಷಿಣ ಕನ್ನಡ ಬಿಜೆಪಿ ಕೋಟೆಯಲ್ಲಿ ಕಾಂಗ್ರೆಸ್‌ ಪೈಪೋಟಿ

ಬಿಜೆಪಿಯಲ್ಲೂ ಪೈಪೋಟಿ:

ಮಾಜಿ ಶಾಸಕ ಚಂದ್ರನಾಯ್ಕ ಅವರು ಈ ಬಾರಿಯೂ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. 2008ರಲ್ಲಿ ಜಯಶಾಲಿಯಾಗಿದ್ದ ಇವರು, 2013 ಹಾಗು 2018ರಲ್ಲಿ ಪರಾಭವಗೊಂಡಿದ್ದಾರೆ. ಆದರೆ, ಪಕ್ಷದಿಂದ ಯಾರೂ ಬಂಡಾಯ ಏಳದಿದ್ದರೆ, ಇವರು ಗೆಲ್ಲಲಿದ್ದಾರೆ ಎಂಬುದು ಪಕ್ಷದ ಆಂತರಿಕ ಸರ್ವೇ ವರದಿಯಲ್ಲಿ ಉಲ್ಲೇಖವಾಗಿದೆ. ಹಾಗಾಗಿ ಪಕ್ಷದ ಎಲ್ಲ ಆಕಾಂಕ್ಷಿಗಳನ್ನು ಜನ ಸಂಕಲ್ಪಯಾತ್ರೆಯಲ್ಲಿ ಒಗ್ಗೂಡಿಸುವ ಕಾರ್ಯವನ್ನು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಮಾಡಿದ್ದಾರೆ. ಇನ್ನೂ ಕಮಲ ಪಾಳಯದಲ್ಲಿ ಎಚ್‌.ಪೂಜಪ್ಪ, ಓದೋ ಗಂಗಪ್ಪ, ರಾಮನಾಯ್ಕ, ದೂದಾನಾಯ್ಕ, ಎಲ್‌.ಮಧು ನಾಯ್ಕ, ಎಚ್‌.ಹನುಮಂತಪ್ಪ, ಕೋಟ್ರಾ ನಾಯ್ಕ, ರವಿಕುಮಾರ ನಾಯ್ಕ, ಶಿವಪುರ ಸುರೇಶ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

Follow Us:
Download App:
  • android
  • ios