ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಈ ಬಾರಿ ಏಕೈಕ ಮಹಿಳೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದು, ಡಬಲ್ ಖುಷಿಯಲ್ಲಿದ್ದಾರೆ. ಹೌದು! ಒಂದೆಡೆ ಮೊದಲ ಬಾರಿಗೆ ಮಂತ್ರಿ ಆಗ್ತಿದ್ದರೆ, ಮತ್ತೊಂದೆಡೆ ಅಜ್ಜಿ ಆದ ಸಂತಸದಲ್ಲಿದ್ದಾರೆ.  

ಬೆಳಗಾವಿ (ಮೇ.27): ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಈ ಬಾರಿ ಏಕೈಕ ಮಹಿಳೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದು, ಡಬಲ್ ಖುಷಿಯಲ್ಲಿದ್ದಾರೆ. ಹೌದು! ಒಂದೆಡೆ ಮೊದಲ ಬಾರಿಗೆ ಮಂತ್ರಿ ಆಗ್ತಿದ್ದರೆ, ಮತ್ತೊಂದೆಡೆ ಅಜ್ಜಿ ಆದ ಸಂತಸದಲ್ಲಿದ್ದಾರೆ. ಹೆಬ್ಬಾಳ್ಕರ್ ಪುತ್ರ ಮೃಣಾಲ್- ಡಾ. ಹಿತಾ ದಂಪತಿಗೆ ಹೆಣ್ಣು ಮಗುವಾಗಿದ್ದು, ಶಿವಮೊಗ್ಗದ ಭದ್ರಾವತಿಯ ಖಾಸಗಿ ಆಸ್ಪತ್ರೆಯಲ್ಲಿಂದು ಡಾ. ಹಿತಾಗೆ ಹೆಣ್ಣು ಮಗು ಜನನವಾಗಿದೆ. ಇಂದು ಪ್ರಮಾಣ ವಚನ ಸ್ವೀಕಾರದ ಬಳಿಕ ಹೆಬ್ಬಾಳ್ಕರ್ ಭದ್ರಾವತಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಇನ್ನು ಬೆಳಗಾವಿಯ ಧೀರ ರಾಜಕಾರಣಿಯಾಗಿರವ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಕಳೆದ ಒಂದೂವರೆ ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದಾರೆ.

ನೂತನ ಸಚಿವೆಯಾಗಿ ಆಯ್ಕೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್‌ ಬೆಳಗಾವಿ ಗ್ರಾಮೀಣ ಕ್ಷೇತ್ರ ಶಾಸಕರಾಗಿದ್ದು, ಪಂಚಮಸಾಲಿ ಲಿಂಗಾಯತ ಸಮುದಾಯದ ಪ್ರತಿನಿಧಿಯಾಗಿದ್ದಾರೆ. ಇವರ ಶಿಕ್ಷಣ, ರಾಜಕೀಯ ಹಿನ್ನೆಲೆ, ಜಾತಿ, ಸಾಮಾಜಿಕ ಸ್ಥಾನಮಾನಗಳ ಕುರಿತ ಮಾಹಿತಿ ಇಲ್ಲಿದೆ. 1975 ಮೇ 28 ರಂದು ಬೆಳಗಾವಿ ಜಿಲ್ಲೆಯ ಹಟ್ಟಿ ಹೊಳಿಯಲ್ಲಿ ಜನಿಸಿದ ಲಕ್ಷ್ಮೀ ಹೆಬ್ಬಾಳ್ಕರ್‌ಮೈಸೂರು ವಿಶ್ವ ವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದಿದ್ದಾರೆ. ಪತಿ ರವೀಂದ್ರ ಹೆಬ್ಬಾಳಕರ್, ಪತ್ರ ಮೃಣಾಲ್ ಹೆಬ್ಬಾಳಕರ್‌. 

ವಿಕಾಸಸೌಧ ಉದ್ಘಾಟನೆಗೆ ಕಾಂಗ್ರೆಸ್‌ ರಾಷ್ಟ್ರಪತಿಗಳನ್ನು ಕರೆಸಿತ್ತಾ?: ಎಚ್‌ಡಿಕೆ

ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾಗಿ ಸಮರ್ಥ ಸೇವೆ ಸಲ್ಲಿಸಿರುವ ಅವರು 2013 ರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಬಳಿಕ 2014 ರ ಲೋಕಸಭಾ ಚುನಾವಣೆಯಲ್ಲೂ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಯ ಹೊಂದಿದ್ದರು. ಸೋಲುಗಳಿಂದ ಧೃತಿಗೆಡದ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಮುಂದುವರೆಸಿದರು. 

ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಪ್ರವೀಣ್‌ ನೆಟ್ಟಾರು ಪತ್ನಿ ಕೆಲಸದಿಂದ ವಜಾ!

ಶಾಸಕಿಯಲ್ಲದಿದ್ದರೂ ಓರ್ವ ಶಾಸಕರು ಮಾಡಿದ್ದಕ್ಕಿಂತ ಹೆಚ್ಚಿನ ಕೆಲಸವನ್ನು ಕ್ಷೇತ್ರಕ್ಕೆ ತಂದಿದ್ದರು. ‌2018ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಭೂತಪೂರ್ವ ಜಯ ಸಾಧಿಸಿದರು. ಒಟ್ಟು 1,02,040 ಮತಗಳನ್ನು ಪಡೆದ ಲಕ್ಷ್ಮೀ ಹೆಬ್ಬಾಳಕರ್ ತಮ್ಮ ಎದುರಾಳಿ ಬಿಜೆಪಿ ಅಭ್ಯರ್ಥಿಯನ್ನು 51,680 ಮತಗಳ ಅಂತರದಿಂದ ಸೋಲಿಸುವ ಮೂಲಕ ಆ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಅತೀ ಹೆಚ್ಚು ಮತಗಳ ಅಂತರದ ಜಯ ಸಾಧಿಸಿದ ಕೀರ್ತಿಗೆ ಪಾತ್ರರಾದರು.