Asianet Suvarna News Asianet Suvarna News

ಎಚ್ಡಿಕೆ ಆಸ್ಪತ್ರೆ ಕಟ್ಟಿಸದಿದ್ದರೆ ಜನ ಸಾಯಬೇಕಿತ್ತು: ಎಚ್‌.ಡಿ.ರೇವಣ್ಣ

ಹಾಸನದ ಜಿಲ್ಲಾ ಆಸ್ಪತ್ರೆಯನ್ನು ಕುಮಾರಸ್ವಾಮಿ ಆಡಳಿತದಲ್ಲಿ 250 ಕೋಟಿ ರು.ಗಳ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸದೆ ಇದ್ದಿದ್ದರೆ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ರಸ್ತೆಗಳಲ್ಲಿ ಹೆಣಗಳನ್ನು ನೋಡಬೇಕಾದ ಕಠಿಣ ಪರಿಸ್ಥಿತಿ ಇರುತ್ತಿತ್ತು ಎಂಬುದನ್ನು ನೀವುಗಳು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಎಚ್‌.ಡಿ.ರೇವಣ್ಣ ತಿಳಿಸಿದರು. 

MLA HD Revanna Talks About HD Kumaraswamy At Hassan gvd
Author
First Published Apr 13, 2023, 3:00 AM IST | Last Updated Apr 13, 2023, 3:00 AM IST

ಹೊಳೆನರಸೀಪುರ (ಏ.13): ಹಾಸನದ ಜಿಲ್ಲಾ ಆಸ್ಪತ್ರೆಯನ್ನು ಕುಮಾರಸ್ವಾಮಿ ಆಡಳಿತದಲ್ಲಿ 250 ಕೋಟಿ ರು.ಗಳ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸದೆ ಇದ್ದಿದ್ದರೆ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ರಸ್ತೆಗಳಲ್ಲಿ ಹೆಣಗಳನ್ನು ನೋಡಬೇಕಾದ ಕಠಿಣ ಪರಿಸ್ಥಿತಿ ಇರುತ್ತಿತ್ತು ಎಂಬುದನ್ನು ನೀವುಗಳು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಎಚ್‌.ಡಿ.ರೇವಣ್ಣ ತಿಳಿಸಿದರು. ಪಟ್ಟಣದ ಚೆನ್ನಾಂಬಿಕ ಕನ್ವೆಷನ್‌ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 60 ವರ್ಷದ ರಾಜಕೀಯದಲ್ಲಿ ದೇವೇಗೌಡರು ಸಾಕಷ್ಟುಏಳುಬೀಳುಗಳನ್ನು ಕಂಡಿದ್ದಾರೆ. ಜತೆಗೆ ಅವರು ಕೈಗೊಂಡ ಜನಪರ ಕಾರ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿದೆ ಮತ್ತು ಅವರ ಜತೆಯಲ್ಲಿ ಬೆಳೆದಿರುವ ನಾವೂ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. 

ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಆಡಳಿತಕ್ಕೆ ಬರುತ್ತದೆ, ಇದರ ಬಗ್ಗೆ ಸಂಶಯ ಬೇಡ ಎಂದರು. ಬಡ ರೈತರ ಏಳಿಗೆಗಾಗಿ ರೈತರ 25 ಸಾವಿರ ಕೋಟಿ ರು. ಸಾಲ ಮನ್ನ ಮಾಡುವ ಮೂಲಕ ರೈತರಿಗೆ ಶಕ್ತಿ ತುಂಬುವ ಕೆಲಸವನ್ನು ಕುಮಾರಸ್ವಾಮಿ ಮಾಡಿದ್ದಾರೆ. ಅದೇ ರೀತಿ ಪಂಚರತ್ನ ಯಾತ್ರೆಯ ಮೂಲಕ ರೈತಪರ, ಬಡವರ ಪರವಾಗಿ ಹಲವು ಅತ್ಯುತ್ತಮ ಯೋಜನೆಗಳನ್ನು ರೂಪಿಸಿ, ನಾಡಿನ ಅಭಿವೃದ್ಧಿಗೆ ಶ್ರಮಿಸುವ ಕೆಲಸವನ್ನು ಕುಮಾರಸ್ವಾಮಿಯವರ ನೇತೃತ್ವದಲ್ಲಿ ಕೈಗೊಳ್ಳಲಾಗುತ್ತೆ. 

ಬಿಜೆಪಿಯಲ್ಲಿ ಕಳ್ಳ ಸಾಗಾಣಿಕೆದಾರರಿಗೆ ಟಿಕೆಟ್: ಎಚ್.ಡಿ.‌ಕುಮಾರಸ್ವಾಮಿ

ತಾಲೂಕಿನ ಯುವ ಜನತೆಯ ಶೈಕ್ಷಣಿಕ ಅಭಿವೃದ್ಧಿಗೆ ಕಾಲೇಜುಗಳು, ಸ್ನಾತಕೋತ್ತರ ಕಾಲೇಜುಗಳು, ವ್ಯವಸ್ಥಿತ ಹಾಸ್ಟೆಲ್‌ಗಳು, ಬಡವರ ಮಕ್ಕಳಿಗಾಗಿ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಇಂಗ್ಲೀಷ್‌ ಶಿಕ್ಷಣ, ಪ್ರತಿ ಗ್ರಾಮದಲ್ಲೂ ದೇವಾಲಯಗಳು, ಪ್ರತಿ ಜನಾಂಗಕ್ಕೂ ಸಮುದಾಯ ಭವನಗಳು, ನಂದಿನಿ ಡೈರಿಗೆ ಹಾಲು ಪೂರೈಸುವ ರೈತರಿಗೆ ಬ್ಯಾಂಕಿನ ಮೂಲಕ ಪ್ರತಿಯೊಬ್ಬರಿಗೂ 1 ಲಕ್ಷ ರು. ಸಾಲ ಕೊಡಿಸುವ ಇಂಗಿತವಿದ್ದು, ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುತ್ತದೆ. ಏ.17ಕ್ಕೆ ನಾನು ನಾಮಪತ್ರ ಸಲ್ಲಿಸುತ್ತೇನೆ, 20ಕ್ಕೆ ಎ.ಮಂಜು ನಾಮಪತ್ರ ಸಲ್ಲಿಸುತ್ತಾರೆ ಎಂದರು. 

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭವಾನಿ ರೇವಣ್ಣ ಮಾತನಾಡಿ, ಜಿಲ್ಲಾ ಕೇಂದ್ರದ ಆಸ್ಪತ್ರೆಯಲ್ಲಿ ಇಲ್ಲದ ಆಧುನಿಕ ತಂತ್ರಜ್ಞಾನದ ಸಿಟಿ ಸ್ಕಾ್ಯನ್‌ ಸೌಲಭ್ಯ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇದೆ. ನಮ್ಮೂರ ಆಸ್ಪತ್ರೆಯಲ್ಲಿ ನುರಿತ ವೈದ್ಯರು, ಶುಶ್ರೂಷಕರು ಹಾಗೂ ಅಧುನಿಕ ಯಂತ್ರೋಪಕರಣಗಳ ಸಹಾಯದಿಂದ ಬಡ ಜನರ ಆರೋಗ್ಯ ರಕ್ಷಣೆಗೆ ಶಾಸಕ ಎಚ್‌.ಡಿ.ರೇವಣ್ಣ ಅವರು ಕೈಗೊಂಡ ಕಾರ್ಯಗಳ ಬಗ್ಗೆ ನಿಮಗೆ ಗೊತ್ತಿದೆ. ನೀವು ಮತಗಟ್ಟೆಗೆ ಹೋಗುವ ಮುನ್ನ ನಿಮ್ಮ ತಲೆಗೆ ಕೆಲಸ ಕೊಡಿ, ರೇವಣ್ಣ ಅವರಿಗೆ ಏಕೆ ಮತ ನೀಡಬೇಕು ಎಂದು ಚಿಂತಿಸಿ, ಶಾಲಾ, ಕಾಲೇಜುಗಳು, ದೇವಾಲಯಗಳು, ಕಾಂಕ್ರೀಟ್‌ ರಸ್ತೆಗಳು, ವ್ಯವಸ್ಥಿತ ಆಸ್ಪತ್ರೆ, ಈ ರೀತಿಯ ಹತ್ತಾರು ಅಭಿವೃದ್ಧಿ ಕಾರ್ಯಗಳ ಚಿತ್ರಣ ನಿಮ್ಮ ಮನದಲ್ಲಿ ಮೂಡುತ್ತದೆ, ಆಗ ನೀವು ರೇವಣ್ಣ ಅವರಿಗೆ ಮತ ನೀಡಲು ನಿಶ್ಚಯಿಸುತ್ತೀರಿ ಎಂದರು.

ಮಾಜಿ ಸಚಿವ ಎ. ಮಂಜು, ಪುರಸಭಾಧ್ಯಕ್ಷೆ ಜ್ಯೋತಿ ಮಂಜುನಾಥ್‌, ತಾ.ಪಂ. ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಚಂದ್ರಶೇಖರ್‌ ಹಾಗೂ ಎಚ್‌.ಎನ್‌.ದೇವೇಗೌಡ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ತ್ರಿಲೋಚನಾ, ತಾ.ಪಂ. ಮಾಜಿ ಅಧ್ಯಕ್ಷ ಎನ್‌.ಆರ್‌.ಅನಂತ ಕುಮಾರ್‌, ಜಿ.ಪಂ. ಮಾಜಿ ಸದಸ್ಯ ಕೃಷ್ಣೇಗೌಡ, ತಾ.ಪಂ. ಮಾಜಿ ಉಪಾಧ್ಯಕ್ಷ ಜವರೇಗೌಡ, ಪುರಸಭಾ ಸದಸ್ಯರು, ಜೆಡಿಎಸ್‌ ತಾ. ಅಧ್ಯಕ್ಷ ಪುಟ್ಟಸ್ವಾಮಪ್ಪ, ಮುತ್ತಿಗೆ ರಾಜೇಗೌಡ ಇತರರು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಕ್ಷೇತ್ರದ ಅಭಿವೃದ್ಧಿ, ಹೊಸ ಆಲೋಚನೆಯೊಂದಿಗೆ ಸ್ಪರ್ಧೆ: ಶಾಸಕ ಸಿ.ಎಸ್‌.ಪುಟ್ಟರಾಜು

ಎಚ್‌ಡಿಡಿ ನಿರ್ಣಯಕ್ಕೆ ಗೌರವ: ದೇವೇಗೌಡರಿಗೆ ಜಿಲ್ಲೆಯ ಬಗ್ಗೆ 60 ವರ್ಷದ ಅನುಭವವಿದೆ. ಅವರ ಹತ್ತಿರ ಈಗಾಗಲೇ ಮಾತನಾಡಿದ್ದೇನೆ. ಅಗ್ರಗಣ್ಯ ನಾಯಕರಾದ ದೇವೇಗೌಡರು ಯಾವುದೇ ನಿರ್ಣಯ ಕೈಗೊಂಡರೂ ಗೌರವಿಸುವ ಜವಾಬ್ದಾರಿ ನಮ್ಮದು ಎಂದು ಎಚ್‌.ಡಿ.ರೇವಣ್ಣ ತಿಳಿಸಿದರು. ಪಟ್ಟಣದಲ್ಲಿ ಬುಧವಾರ ನಡೆದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದಾರಾಮಯ್ಯ ಮತ್ತು ನನ್ನ ನಡುವೆ ಒಳ್ಳೆಯ ಸಂಬಂಧವಿದೆ. ಅದರೆ ರಾಜಕೀಯ ಬೇರೆ. ನಮ್ಮದೇ ಪಕ್ಷ ಇರುವಾರ ಅವರು ಕರೆದರೂ ನಾನೇಕೆ ಕಾಂಗ್ರೆಸ್‌ಗೆ ಹೋಗಲಿ ಎಂದರು.

ದೇವೇಗೌಡರು, ಕುಮಾರಣ್ಣ, ನಮ್ಮ ಪಕ್ಷ ಇರುವಾಗ ನಾನೇಕೆ ಪಕ್ಷೇತರನಾಗಿ ಸ್ಪ​ರ್ಧಿಸಲಿ ಎಂದು ತಿಳಿಸಿ, ನಿಮಗೆ ನಾನು ಆ ರೀತಿ ಹೇಳಿದ್ನಾ ಎಂದು ಪ್ರಶ್ನಿಸಿದರು. ರೇವಣ್ಣ ಕುಮಾರಸ್ವಾಮಿ ಹೊಡೆದಾಡುತ್ತಾರೆ ಎಂದರೂ, ನಾವು ಬೆಳಗ್ಗೆ ಎದ್ದಾಗ ಚೆನ್ನಾಗಿ ಇರ್ತೀವಿ, ನಿಮಗೆ ಗೊತ್ತಿಲ್ಲ. ವರದಿಗಾರರೊಬ್ಬರು ಸಾಮಾನ್ಯ ಕಾರ್ಯಕರ್ತನಿಗೆ ಟಿಕೇಟ್‌ ನೀಡಿದರೆ ನೀವು ಬೆಂಬಲಿಸುತ್ತೀರ ಎಂಬ ಪಶ್ನೆಗೆ ಉತ್ತರಿಸಿ ನೀನೂ ಸಾಮಾನ್ಯ ಕಾರ್ಯಕರ್ತ ಅಲ್ವ, ನೀನೇ ನಿಲ್ಲು, ಬೆಂಬಲಿಸುತ್ತೇವೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಜೆಡಿಎಸ್‌ ಪಕ್ಷ 123 ಸ್ಥಾನಗಳನ್ನು ಪಡೆದು ಬಹುಮತದೊಂದಿಗೆ ಆಡಳಿತ ನಡೆಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios