ಕ್ಷೇತ್ರದ ಅಭಿವೃದ್ಧಿ, ಹೊಸ ಆಲೋಚನೆಯೊಂದಿಗೆ ಸ್ಪರ್ಧೆ: ಶಾಸಕ ಸಿ.ಎಸ್.ಪುಟ್ಟರಾಜು
ಮೇಲುಕೋಟೆ ಕ್ಷೇತ್ರವನ್ನು ಮತ್ತಷ್ಟುಅಭಿವೃದ್ಧಿ ಪಡಿಸಬೇಕು. ಹೊಸ ಆಲೋಚನೆಗಳೊಂದಿಗೆ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ಪಾಂಡವಪುರ (ಏ.12): ಮೇಲುಕೋಟೆ ಕ್ಷೇತ್ರವನ್ನು ಮತ್ತಷ್ಟುಅಭಿವೃದ್ಧಿ ಪಡಿಸಬೇಕು. ಹೊಸ ಆಲೋಚನೆಗಳೊಂದಿಗೆ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು. ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಜನತೆ ನನ್ನನ್ನು ಮನೆ ಮಗನ ರೀತಿ ಬೆಳೆಸಿದ್ದಾರೆ. ಚುನಾವಣೆಯಲ್ಲಿ ಅಧಿಕ ಬಹುಮತ ನೀಡಿ ಗೆಲ್ಲಿಸುವ ವಿಶ್ವಾಸವಿದೆ ಎಂದರು. ನಾನು ಚಿಕ್ಕವಯಸ್ಸಿನಿಂದಲೂ ನಾರಾಯಣಪುರ ಭಾಗದ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ನನ್ನ ಪ್ರತಿ ಚುನಾವಣೆಯಲ್ಲಿ ಈ ಭಾಗದ ಜನರು ಅಧಿಕ ಬಹುಮತ ನೀಡಿ ನನ್ನನ್ನು ಬೆಂಬಲಿಸುವ ಕೆಲಸ ಮಾಡಿದ್ದಾರೆ.
ಅದೇ ರೀತಿ ನಾನು ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕಳೆದ ಐದು ವರ್ಷದಲ್ಲಿ 60-70 ಕೋಟಿ ಅನುದಾನವನ್ನು ನೀಡಿ ಹಳ್ಳಿಗಳ ಅಭಿವೃದ್ಧಿ ಪಡಿಸಿದ್ದೇನೆ ಎಂದರು. ನೀವು ಕೊಟ್ಟಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಿದ್ದೇನೆ. ಕ್ಷೇತ್ರವನ್ನು ಮತ್ತಷ್ಟುಅಭಿವೃದ್ಧಿ ಮಾಡಬೇಕು ಎಂಬ ಆಲೋಚನೆಯೊಂದಿಗೆ ಸ್ಪರ್ಧಿಸುತ್ತಿದ್ದೇನೆ. ಕ್ಷೇತ್ರದಲ್ಲಿ ಇನ್ನೂ ನೂರಾರು ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿವೆ. ಯುವಜತನೆ, ಮಹಿಳೆಯರ ಆರ್ಥಿಕ ಸಬಲೀಕರಣದ ಆಲೋಚನೆ ಹೊಂದಿದ್ದೇನೆ. ಮತ್ತೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಮಹದೇಶ್ವರನ ಆಶೀರ್ವಾದದಿಂದ ಚಾಮರಾಜನಗರ ಮಾದರಿ ಜಿಲ್ಲೆಯಾಗಿಸುವಾಸೆ: ಸಚಿವ ಸೋಮಣ್ಣ
ಕ್ಷೇತ್ರದಲ್ಲಿ ಯಾವುದಾರೂ ಅಭಿವೃದ್ಧಿ ಕೆಲಸ ಮಾಡಲು ಹೊರಟರೆ ಪುಟ್ಟರಾಜುಗೆ ಒಳ್ಳೆಯ ಹೆಸರು ಬರುತ್ತದೆ ಎಂದು ವಿರೋಧಿಗಳು ಸಾಕಷ್ಟುಅಡ್ಡಿಪಡಿಸುವ ಕೆಲಸ ಮಾಡಿದರು. ಕದಲಗೆರೆ ಕೆರೆ ಅಭಿವೃದ್ಧಿಗೆ ಅಡ್ಡಿಪಸಿದರು. ಇಲ್ಲವಾಗಿದ್ದರೆ ಇಷ್ಟೊತ್ತಿಗೆ ಕದಲಗೆರೆ ಸಂಪೂರ್ಣವಾಗಿ ಅಭಿವೃದ್ಧಿ ಹೊಂದುತ್ತಿತ್ತು ಎಂದು ಕಿಡಿಕಾರಿದರು. ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಯಶ್ವಂತ್ ಕುಮಾರ್ ಮಾತನಾಡಿ, ಪ್ರತಿದಿನ ಜನರ ಮಧ್ಯೆ ಇದ್ದು ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿರುವ ಸಿ.ಎಸ್.ಪುಟ್ಟರಾಜು ಅವರ ಬೇಕೋ. ಐದು ವರ್ಷ ವಿದೇಶದಲ್ಲಿದ್ದು ಚುನಾವಣೆ ವೇಳೆ ಬಂದು ಜನ ದರ್ಶನ ಅಂತ ಜನ ಬಳಿ ಹೋಗುತ್ತಿರುವ ವ್ಯಕ್ತಿ ಬೇಕೋ ಎನ್ನುವುದನ್ನು ಜನತೆ ತೀರ್ಮಾನ ಮಾಡಬೇಕು ಎಂದರು.
ಕ್ಷೇತ್ರದಲ್ಲಿ ಸಿ.ಎಸ್.ಪುಟ್ಟರಾಜು ಮಾಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳ ಅಪಾರವಾಗಿವೆ. ಕಾವೇರಿ ನದಿಯಿಂದ ಬೆಂಗಳೂರು, ಕೋಲಾರದವರೆಗೂ ನೀರು ತೆಗೆದುಕೊಂಡು ಹೋಗಿದ್ದಾರೆ. ಇಲ್ಲಿ ಶಾಸಕರಾದವರು ಈ ಭಾಗಕ್ಕೆ ಕಾವೇರಿ ನೀರು ಕೊಡಲು ಸಾಧ್ಯವಾಗಿರಲಿಲ್ಲ. ಸಿ.ಎಸ್.ಪುಟ್ಟರಾಜು ಅವರು ಸಚಿವರಾಗುತ್ತಿದ್ದಂತೆಯೇ ಈ ಭಾಗಕ್ಕೆ ಕಾವೇರಿ ನೀರುಕೊಟ್ಟು ಭಗೀರಥ ಇಂತಹ ನಾಯಕರನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. ಇದಕ್ಕೂ ಮುನ್ನ ನೂರಾರು ಮಹಿಳೆಯ ಪೂರ್ಣಕುಂಭ, ವಿವಿಧ ಕಲಾತಂಡಗಳ ಮೂಲಕ ಅದ್ಧೂರಿ ಮೆರೆವಣಿಗೆ ನಡೆಸಿ ಪುಷ್ಪಾರ್ಚನೆ ಮಾಡಿ ಬೃಹತ್ ಹಣ್ಣಿನ ಹಾಕಿ ಸ್ವಾಗತಿಸಿ ಶಾಸಕ ಸಿ.ಎಸ್.ಪುಟ್ಟರಾಜು ಅವರನ್ನು ವೇದಿಕೆಗೆ ಕರೆತಂದರು. ವೇದಿಕೆಯಲ್ಲಿ ಹಲವಾರು ರೈತಸಂಘ-ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡರು.
ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳಿಗೆ ಅಳಿವು ಉಳಿವಿನ ಪ್ರಶ್ನೆ?
ಸಮಾರಂಭದಲ್ಲಿ ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಸಿ.ಎಸ್.ಗೋಪಾಲಗೌಡ, ನವೀನ ವೆಂಕಟೇಶ್, ರಾಧಾಕೃಷ್ಣ, ಕೆಂಪರಾಜು, ಸುಂದ್ರಣ್ಣ, ಗ್ರಾಪಂ ಅಧ್ಯಕ್ಷೆ ಪವಿತ್ರ ಲೋಕೇಶ್, ಸ್ವಾಮೀಗೌಡ, ರಾಮಚಂದ್ರು, ಕುಮಾರ್, ಯೋಗನರಸಿಂಹೇಗೌಡ, ವೆಂಕಟೇಶ್, ಆನಂದ್ ಮಾಸ್ಟರ್, ಪ್ರಕಾಶ್, ನಟರಾಜು, ಎನ್.ಕೆ.ಜಯರಾಮು, ಕರಿಯಯ್ಯ ಸೇರಿದಂತೆ ಗ್ರಾಪಂ ವ್ಯಾಪ್ತಿಯ ಎಲ್ಲಾ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಯಜಮಾನರು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.