ಪಕ್ಷದಲ್ಲಿ ಮನಸ್ತಾಪ ಏಕಾಯ್ತು? ಎಂಬುದನ್ನು ಕುರಿತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಆರೋಗ್ಯ ಸುಧಾರಿಸಿದ ಬಳಿಕ ನೇರ ಭೇಟಿಯಾಗಿ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು. 

ಮೈಸೂರು (ಆ.28): ಪಕ್ಷದಲ್ಲಿ ಮನಸ್ತಾಪ ಏಕಾಯ್ತು? ಎಂಬುದನ್ನು ಕುರಿತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಆರೋಗ್ಯ ಸುಧಾರಿಸಿದ ಬಳಿಕ ನೇರ ಭೇಟಿಯಾಗಿ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರನ್ನು ಖುದ್ದು ಭೇಟಿಯಾಗಿ ಮಾತನಾಡುತ್ತೇನೆ. ಅವರಿಗೆ ನನ್ನ ಮೇಲೆ ಅಪಾರ ಪ್ರೀತಿ, ಅಭಿಮಾನವಿದೆ. ನಿಮ್ಮ ವಿಷಯದಲ್ಲಿ ತುಂಬಾ ಕೊರಗುತ್ತಿದ್ದು, ಒಮ್ಮೆ ಭೇಟಿಯಾಗಿ ಮಾತನಾಡುವಂತೆ ಎಚ್‌.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಈಗ ಅವರ ಆರೋಗ್ಯ ಸುಧಾರಿಸುತ್ತಿದ್ದು, ಯಾವ ವಿಷಯದಲ್ಲಿ ಮನಸ್ತಾಪವಾಯಿತು, ಏನಾಗಿದೆ ಎಂಬುದರ ಕುರಿತು ಚರ್ಚಿಸುತ್ತೇನೆ ಎಂದು ಹೇಳಿದರು.

ಆದಿಚುಂಚನಗಿರಿ ಶ್ರೀಗಳು ಹುಣಸೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನೀವು ಮತ್ತು ಕುಮಾರಸ್ವಾಮಿ ಅವರು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವಂತೆ ಹೇಳಿದರು. ಕುಮಾರಸ್ವಾಮಿ ಅವರಿಂದ ನನಗೆ, ನನ್ನ ಪುತ್ರನಿಗೆ ಹಾರ, ಶಾಲು ಹೊದಿಸಿ ಅಭಿನಂದಿಸುವಂತೆ ಹೇಳಿದ್ದರಿಂದ ಅವರು ಆತ್ಮೀಯವಾಗಿ ಅಭಿನಂದಿಸಿದ್ದಾಗಿ ಅವರು ತಿಳಿಸಿದರು. ಸಮ್ಮಿಶ್ರ ಸರ್ಕಾರ ರಚನೆ ಆದಾಗ ನನಗೆ ಸಚಿವ ಸ್ಥಾನ ಕೊಡಿ ಎಂದು ಕೇಳಲಿಲ್ಲ. ನನ್ನ ಮಗನಿಗೆ ಟಿಕೆಟ್‌ ಕೊಡುವಂತೆ ಕೇಳಿರಲಿಲ್ಲ. ಕೆಲವು ವಿಚಾರಗಳಿಂದ ದೂರವಾಗಿದ್ದೇನೆಯೇ ಹೊರತು ಬೇರೇನೂ ಇಲ್ಲ. 

Mysuru: ವಾರಾಂತ್ಯದ ಅನ್ನ ದಾಸೋಹಕ್ಕೆ ಶಾಸಕ ಸಾ.ರಾ.ಮಹೇಶ್‌ ಚಾಲನೆ

ಕ್ಷೇತ್ರದ ಜನರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂಬ ಮಾತಿಗೆ ಈಗಲೂ ನಾನು ಬದ್ಧ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರನ್ನು ಭೇಟಿಯಾಗಿ ಮಾತನಾಡುವವರೆಗೆ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದರು. ಜಯಪ್ರಕಾಶ್‌ ನಾರಾಯಣ ಅವರ ನೇತೃತ್ವದಲ್ಲಿ ಹುಟ್ಟಿದ ಜನತಾಪಕ್ಷ, ದಳ ಗಟ್ಟಿಯಾಗಿ ಉಳಿಯಬೇಕಾದರೆ ಪಕ್ಷ ಸಂಘಟಿಸಬೇಕು ಎನ್ನುವ ಮಾತನ್ನು ಹೇಳಿದ್ದೇನೆ. ಸದ್ಯಕ್ಕೆ ಪಕ್ಷದ ಯಾವುದೇ ಸಭೆ, ಕಾರ್ಯಕ್ರಮಗಳಲ್ಲಿ ಭಾಗವಹಿಸಲ್ಲ ಎಂದು ಹೇಳಿದರು. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆತ್ಮೀಯರು, ಸ್ವಾಮೀಜಿ ಜತೆ ಮಾತನಾಡುವಾಗ ದೇವೇಗೌಡರು ನಮ್ಮೊಂದಿಗೆ ಇರುತ್ತಾರೆ ಎನ್ನುವ ಮಾತನ್ನು ಹೇಳಿದರು. ಡಿಕೆಶಿ ಜತೆಗೆ ಯಾವುದೇ ವಿಚಾರ ಮಾತನಾಡಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆಗೆ ಸಂಬಂಧ ಜೆಡಿಎಸ್‌ ಕರೆಯುವ ಸಭೆಗೆ ಹೋಗುವುದಿಲ್ಲ. ಈ ಹಿಂದೆಯ ನನ್ನನ್ನು ಕೇಳಲಿಲ್ಲ. ಈ ವಿಷಯವನ್ನು ಸಾ.ರಾ. ಮಹೇಶ್‌ಗೂ ಹೇಳಿದ್ದೇನೆ. ಇದರಲ್ಲಿ ನನ್ನದೇನೂ ಇಲ್ಲ. ಎಚ್‌.ಡಿ. ಕುಮಾರಸ್ವಾಮಿ ಅವರು ಹೇಳಿದಂತೆ ನಡೆದುಕೊಂಡಿದ್ದೇ ಎಂದರು.

ಸರ್ಕಾರಿ ಟೆಂಡರ್‌ ಬಾಯ್ಕಟ್‌ ಮಾಡಿ: ಗುತ್ತಿಗೆದಾರರಿಗೆ ಎಚ್ಡಿಕೆ ಕರೆ

ಎಂ.ಡಿ. ನಾಗರಾಜು ಭೇಟಿ: ಶಾಸಕ ಜಿ.ಟಿ.ದೇವೇಗೌಡರನ್ನು ಮೇಯರ್‌ ಸ್ಥಾನದ ಆಕಾಂಕ್ಷಿ ಎಂ.ಡಿ. ನಾಗರಾಜು ಭೇಟಿಯಾಗಿ ಆಶೀರ್ವಾದ ಪಡೆದರು. ಜಿ.ಟಿ. ದೇವೇಗೌಡರನ್ನು ಭೇಟಿಯಾಗಿ ಚರ್ಚಿಸಿ, ಅವಕಾಶವಾದರೆ ತಮ್ಮ ಬೆಂಬಲ ನೀಡುವಂತೆ ಕೋರಿದರು.