‘ನಾನು ಕಾಂಗ್ರೆಸ್ ಜೊತೆ ಬಲವಂತದ ಮದುವೆಯಲ್ಲಿದ್ದೆ. ಅದು ನಿಂದನೀಯ ಸಂಬಂಧವಾದ್ದರಿಂದ ವಿಚ್ಛೇದನ ಮಾಡಬೇಕಾಯಿತು’ ಎಂದು ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಐಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ.

 ಬೆಂಗಳೂರು : ‘ನಾನು ಕಾಂಗ್ರೆಸ್ ಜೊತೆ ಬಲವಂತದ ಮದುವೆಯಲ್ಲಿದ್ದೆ. ಅದು ನಿಂದನೀಯ ಸಂಬಂಧವಾದ್ದರಿಂದ ವಿಚ್ಛೇದನ ಮಾಡಬೇಕಾಯಿತು’ ಎಂದು ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಐಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ.

Add Asianetnews Kannada as a Preferred SourcegooglePreferred

 ಖರ್ಗೆ ಆಡಿದ ಮಾತಿಗೆ ‘ಎಕ್ಸ್‌’ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಗೌಡರು

ರಾಜ್ಯಸಭೆಯಲ್ಲಿ ತಮ್ಮ ಬಗ್ಗೆ ಖರ್ಗೆ ಆಡಿದ ಮಾತಿಗೆ ‘ಎಕ್ಸ್‌’ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಗೌಡರು, ‘ನನ್ನ ಆತ್ಮೀಯ ಮತ್ತು ದೀರ್ಘಕಾಲದ ಸ್ನೇಹಿತ ಮಲ್ಲಿಕಾರ್ಜುನ ಖರ್ಗೆ ಅವರು ಇವತ್ತು ಸಂಸತ್ತಿನಲ್ಲಿ ನಾನು ಅವರನ್ನು (ಕಾಂಗ್ರೆಸ್) ಪ್ರೀತಿಸುತ್ತಿದ್ದೆ. ಆದರೆ ಅಂತಿಮವಾಗಿ ಮೋದಿ (ಬಿಜೆಪಿ) ಅವರನ್ನು ಮದುವೆಯಾದೆ ಎಂದು ಹಗುರವಾಗಿ ಹೇಳಿಕೆ ನೀಡಿದ್ದಾರೆ. ನಾನು ಏಕೆ ಹಾಗೆ ಮಾಡಿದೆ ಎಂಬುದಕ್ಕೆ ಅವರಿಗೆ ಕಾರಣ ತಿಳಿದಿಲ್ಲ. ಖರ್ಗೆ ಅವರು ಸದನದಲ್ಲಿ ಮಾತನಾಡುವಾಗ ನಾನು ಸದನದಲ್ಲಿ ಇರಲಿಲ್ಲ. ಯುಗಾದಿ ಆಚರಣೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಹೊರಟಿದ್ದೆ’ ಎಂದು ಹೇಳಿದ್ದಾರೆ.

ನನ್ನ ಸ್ನೇಹಿತನಿಗೆ ಮದುವೆಯ ಭಾಷೆಯಲ್ಲಿಯೇ ಪ್ರತಿಕ್ರಿಯಿಸುವುದಾದರೆ

‘ನನ್ನ ಸ್ನೇಹಿತನಿಗೆ ಮದುವೆಯ ಭಾಷೆಯಲ್ಲಿಯೇ ಪ್ರತಿಕ್ರಿಯಿಸುವುದಾದರೆ, ನಾನು ಕಾಂಗ್ರೆಸ್‌ ಜೊತೆ ಬಲವಂತದ ಮದುವೆಯಲ್ಲಿದ್ದೆ. ಅದು ನಿಂದನೀಯ ಸಂಬಂಧ ಆಗಿದ್ದರಿಂದ ವಿಚ್ಛೇದನ ಮಾಡಬೇಕಾಯಿತು ಎಂದು ಹೇಳಲು ಬಯಸುತ್ತೇನೆ ಎಂದು ದೇವೇಗೌಡರು ಕುಟುಕಿದ್ದಾರೆ.

ಸಮ್ಮಿಶ್ರ ಸರ್ಕಾರ ರಚನೆ ಹಿನ್ನೆಲೆ ಕುರಿತು ಖರ್ಗೆ ಅವರಿಗೆ ನೆನಪಿಸಿರುವ ದೇವೇಗೌಡರು, 2018ರಲ್ಲಿ ಕಾಂಗ್ರೆಸ್‌ ಪಕ್ಷವು ಗುಲಾಂ ನಬಿ ಆಜಾದ್‌ ಅವರನ್ನು ಕಳುಹಿಸಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಆಫರ್‌ ನೀಡಿತು. ನಾನು ಇದಕ್ಕೆ ಒಪ್ಪಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಎಲ್ಲರ ಸಮ್ಮುಖದಲ್ಲೇ ನಾನು ಹೇಳಿದ್ದೆ. ಆಗ ಸಿದ್ದರಾಮಯ್ಯ ಸಹ ಅಲ್ಲೇ ಇದ್ದರು. ಆದರೂ ಗುಲಾಬ್‌ ನಬಿ ಆಜಾದ್‌ ಅವರು ಕುಮಾರಸ್ವಾಮಿ ಅವರೇ ನಾಯಕತ್ವ ವಹಿಸಿಕೊಳ್ಳುವಂತೆ ಒತ್ತಾಯಿಸಿದ್ದರು.

ಇಷ್ಟೆಲ್ಲಾ ಹಾಡು, ನೃತ್ಯ ಮತ್ತು ಮದುವೆಯ ನಂತರ 2019ರಲ್ಲಿ ಏನು ಮಾಡಿದರು? ನಮ್ಮನ್ನು ಕೈಬಿಟ್ಟರು. ಎಷ್ಟು ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡರು ಮತ್ತು ಅವರನ್ನು ಯಾರು ಬಿಜೆಪಿಗೆ ಕಳುಹಿಸಿದರು ಎಂಬುದು ಈಗ ಎಲ್ಲರಿಗೂ ತಿಳಿದಿದೆ. ಆ ದಿನ ಶಾಸಕರ ಪಕ್ಷಾಂತರವನ್ನು ಪ್ರಚೋದಿಸಿದ ವ್ಯಕ್ತಿಯ ವಿರುದ್ಧ ಕಾಂಗ್ರೆಸ್‌ ಕ್ರಮ ಕೈಗೊಂಡಿದ್ದರೆ, ಇಂದು ಎಐಸಿಸಿ ಅಧ್ಯಕ್ಷರಾಗಿರುವ ನನ್ನ ಸ್ನೇಹಿತ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತಮ ಸ್ಥಾನದಲ್ಲಿ ಇರುತ್ತಿದ್ದರು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಇನ್ನೂ ನೇರವಾಗಿ ಹೇಳುವುದಾದರೆ, ನಾನು ಕಾಂಗ್ರೆಸ್‌ ಮೈತ್ರಿಕೂಟವನ್ನು ತ್ಯಜಿಸಲಿಲ್ಲ. ಅವರೇ ದೂರ ಸರಿದರು. ಹೀಗಾಗಿ ನನಗೆ ವಿಚ್ಛೇದನದ ಆಯ್ಕೆ ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಹೀಗಾಗಿ ಹೆಚ್ಚು ಸ್ಥಿರವಾದ ಮೈತ್ರಿ ಕೂಟ ಹುಡುಕುವುದನ್ನು ಬಿಟ್ಟು ಬೇರೆ ದಾರಿ ಕಾಣಲಿಲ್ಲ ಎಂದು ದೇವೇಗೌಡರು ತಿಳಿಸಿದ್ದಾರೆ.-