ಒಮ್ಮೆಯಾದ್ರೂ ಕೆಪಿಸಿಸಿ ಹುದ್ದೆ ಮುಸ್ಲಿಮರಿಗೆ ಕೊಟ್ಟಿದ್ದೀರಾ?: ಸಿ.ಎಂ.ಇಬ್ರಾಹಿಂ ಆಕ್ರೋಶ!
ಕಾಂಗ್ರೆಸ್ ವಿರುದ್ಧವೇ ಶಾಸಕ ಸಿ.ಎಂ.ಇಬ್ರಾಹಿಂ ಆಕ್ರೋಶ| ಒಮ್ಮೆಯಾದರೂ ಕೆಪಿಸಿಸಿ ಅಧ್ಯಕ್ಷ ಹುದ್ದೆ ಮುಸ್ಲಿಮರಿಗೆ ಕೊಟ್ಟಿದ್ದೀರಾ?
ಬೆಂಗಳೂರು(ಡಿ.17): ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಅವರು ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದು, ಶೇ.16ರಷ್ಟುಜನಸಂಖ್ಯೆಯಿರುವ ಮುಸ್ಲಿಮರು ಒಂದು ಬಾರಿಯೂ ಕೆಪಿಸಿಸಿ ಅಧ್ಯಕ್ಷರಾಗಿಲ್ಲ. ಮುಸ್ಲಿಮರು ಇನ್ನೆಷ್ಟುವರ್ಷ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು ಎಂದು ಕಿಡಿ ಕಾರಿದ್ದಾರೆ.
ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಡಿಕೆಶಿ ಬಳಿ ಹೇಳಿದ್ದೇನೆ : ಅಸಮಾಧಾನಗೊಂಡ ಕೈ ಮುಖಂಡ
‘ಮುಸ್ಲಿಮರು ನಿಮಗೆ ಮತ ಹಾಕಲು ಮಾತ್ರ ಬೇಕಾ? ನಾವು ಮುಂದೆ ಬಂದು ನಿಮಗೆ ಮತ ಹಾಕಿ ಹಿಂದೆ ಹೋಗಿ ನಿಲ್ಲಬೇಕಾ?’ ಎಂದು ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿರುವ ಅವರು, ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ರಾಜ್ಯಾದ್ಯಂತ ಪ್ರವಾಸ ಮಾಡಿದ ಬಳಿಕ ಘೋಷಿಸುವುದಾಗಿ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ದಿನದಿಂದಲೂ ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದೇವೆ. ಇನ್ನು ಎಷ್ಟುವರ್ಷ ಕಾಂಗ್ರೆಸ್ಗೆ ಮತ ಹಾಕುತ್ತಿರಬೇಕು. ನಾವು ಮುಂದೆ ಬಂದು ನಿಮಗೆ ಮತ ಹಾಕುವುದು. ನೀವು ಮುಂದೆ ನಿಂತುಕೊಂಡರೆ ನಾವು ಹಿಂದೆ ಹೋಗುವುದು. ಒಬ್ಬನೇ ಒಬ್ಬ ಮುಸ್ಲಿಮನಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿಲ್ಲ. ಶೇ.16ರಷ್ಟುಇರುವ ಮುಸ್ಲಿಮರು ನಿಮಗೆ ಮತ ಹಾಕಲು ಮಾತ್ರ ಬೇಕಾ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.
ದೇವೇಗೌಡ್ರ ಭೇಟಿ ಬಳಿಕ ಸ್ಪೋಟಕ ಹೇಳಿಕೆ ಕೊಟ್ಟ ಕಾಂಗ್ರೆಸ್ ಹಿರಿಯ ನಾಯಕ..!
ಪ್ರವಾಸ ಬಳಿಕ ನಿಲುವು ಪ್ರಕಟಿಸುತ್ತೇನೆ:
ನನ್ನ ರಾಜಕೀಯ ನಡೆಯ ಬಗ್ಗೆ ಯಾವುದೇ ಅನುಮಾನ ಬೇಡ. ಪಕ್ಷದಲ್ಲಿ ಮುಸ್ಲಿಂ ನಾಯಕತ್ವದ ಸಂಘರ್ಷ ನನ್ನ ನಡೆಗೆ ಕಾರಣ ಎನ್ನುವುದು ಸಹ ಸರಿಯಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಿದ ಬಳಿಕ ನನ್ನ ನಿಲುವು ಪ್ರಕಟಿಸುತ್ತೇನೆ. ನನ್ನನ್ನು ಭೇಟಿ ಮಾಡಲು ಆಗಮಿಸಿದ್ದ ಡಿ.ಕೆ. ಶಿವಕುಮಾರ್ ಅವರಿಗೂ ಇದನ್ನೇ ತಿಳಿಸಿದ್ದೇನೆ ಎಂದರು.