Asianet Suvarna News Asianet Suvarna News

ಅಧಿಕಾರಿಗಳು ನನ್ನ ಮಾತು ಕೇಳುತ್ತಿಲ್ಲ, ನೀವು ಬಂದು ಸಭೆ ಮಾಡಿ: ಸಿಎಂಗೆ ಶಾಸಕ ರಾಯರಡ್ಡಿ ಮತ್ತೆ ಪತ್ರ

‘ಕಲ್ಯಾಣ ಕರ್ನಾಟಕ’ ಭಾಗದಲ್ಲಿ ರೈತರು ತೀವ್ರ ವಿದ್ಯುತ್‌ ಸಮಸ್ಯೆ ಎದುರಿಸುತ್ತಿದ್ದು, ಈ ಕುರಿತು ನಿಮ್ಮ ಅಧ್ಯಕ್ಷತೆಯಲ್ಲಿ ಕಲಬುರಗಿಯಲ್ಲಿ ತುರ್ತು ಸಭೆ ನಡೆಸಿ ಎಂದು ಆಗ್ರಹಿಸಿ ಶಾಸಕ ಬಸವರಾಜ ರಾಯರಡ್ಡಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. 
 

MLA Basavaraj Rayareddy again Letter to CM Siddaramaiah gvd
Author
First Published Sep 2, 2023, 2:20 AM IST

ಕೊಪ್ಪಳ (ಸೆ.02): ‘ಕಲ್ಯಾಣ ಕರ್ನಾಟಕ’ ಭಾಗದಲ್ಲಿ ರೈತರು ತೀವ್ರ ವಿದ್ಯುತ್‌ ಸಮಸ್ಯೆ ಎದುರಿಸುತ್ತಿದ್ದು, ಈ ಕುರಿತು ನಿಮ್ಮ ಅಧ್ಯಕ್ಷತೆಯಲ್ಲಿ ಕಲಬುರಗಿಯಲ್ಲಿ ತುರ್ತು ಸಭೆ ನಡೆಸಿ ಎಂದು ಆಗ್ರಹಿಸಿ ಶಾಸಕ ಬಸವರಾಜ ರಾಯರಡ್ಡಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಹಿಂದೆ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸಿಎಲ್‌ಪಿ ಸಭೆ ಕರೆಯುವಂತೆ ಮನವಿ ಮಾಡಿದ ಪತ್ರಕ್ಕೆ ಸಹಿ ಹಾಕಿ ಭಾರೀ ಚರ್ಚೆಗೆ ಈಡಾಗಿದ್ದ ಶಾಸಕ ರಾಯರಡ್ಡಿ, ಈ ಬಾರಿ ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲ, ತಮ್ಮ ಕರೆ ಸ್ವೀಕರಿಸುತ್ತಿಲ್ಲ ಎಂದು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದೆರಡು ತಿಂಗಳಿಂದ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈತರ ಬೆಳೆ ಒಣಗಲಾರಂಭಿಸಿವೆ. ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾನು ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಸುಮಾರು 100ಕ್ಕೂ ಹೆಚ್ಚು ವಿದ್ಯುತ್‌ ಪರಿವರ್ತಕ ಸುಟ್ಟು ಹೋಗಿದ್ದು ಕಂಡು ಬಂದಿದೆ. ಇವುಗಳನ್ನು ದುರಸ್ತಿ ಮಾಡುವ ಕಾರ್ಯ ಆಗಿಲ್ಲ. ಗುಣಮಟ್ಟದ ವಿದ್ಯುತ್‌ ಸಹ ಪೂರೈಕೆಯಾಗುತ್ತಿಲ್ಲ. ಈ ಕುರಿತು ಜೆಸ್ಕಾಂನ ಕಲಬುರಗಿ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದರೂ ಕರೆ ಸ್ವೀಕರಿಸುತ್ತಿಲ್ಲ. ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಅಸಹಾಯಕರಾಗಿದ್ದಾರೆ ಎಂದು ಆಪಾದಿಸಿದ್ದಾರೆ.

ನಮೋ ನಮಃ ನವ ಮಂತ್ರಾಲಯ ಸುಕ್ಷೇತ್ರ: ಶುರುವಾಗಿದೆ ಪರಿವರ್ತನೆ ಪರ್ವ

ಹೀಗಾಗಿ, ತಾವೇ ಕಲಬುರಗಿಯಲ್ಲಿ ಜೆಸ್ಕಾಂ ಅಧಿಕಾರಿಗಳ ಸಭೆಯನ್ನು ತುರ್ತಾಗಿ ಕರೆದು, ಈ ಗಂಭೀರ ಸಮಸ್ಯೆಯ ಇತ್ಯರ್ಥಕ್ಕೆ ಮುಂದಾಗಬೇಕು. ವಿದ್ಯುತ್‌ ಇಲಾಖೆಯ ವ್ಯವಸ್ಥಾಪಕರನ್ನು, ಜೆಸ್ಕಾಂ ಮುಖ್ಯ ಅಧಿಕಾರಿಗಳನ್ನು, ಕೆಪಿಟಿಸಿಎಲ್‌ ಅಧಿಕಾರಿಗಳನ್ನು ಹಾಗೂ ಇಂಧನ ಸಚಿವರನ್ನು ಹಾಗೂ ಸಂಬಂಧಪಟ್ಟಅಧಿಕಾರಿಗಳನ್ನು ಕರೆದು, ಸವಿಸ್ತಾರವಾಗಿ ಚರ್ಚಿಸಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಯಲಬುರ್ಗಾ ಮತ್ತು ಕುಕನೂರ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಲೂ ಪತ್ರದಲ್ಲಿ ಆಗ್ರಹಿಸಿದ್ದಾರೆ.

ರಾಕಿ ಕಟ್ಟಿದ ಬಾಲಕಿ, ಬಾತ್‌ರೂಂಗೆ ಹೋಗಿ ಅತ್ತ ಬಾಲಕ: ಶಿಕ್ಷಕರು-ಪೋಷಕರ ನಡುವೆ ವಾಗ್ವಾದ

ಇಂಧನ ಸಚಿವರಿಗೇಕೆ ಹೇಳಲಿಲ್ಲ?: ಜೆಸ್ಕಾಂ ಅಧಿಕಾರಿಗಳು ಕರೆ ಸ್ವೀಕರಿಸಿಲ್ಲ ಎಂದು ಆಪಾದಿಸಿರುವ ಶಾಸಕ ಬಸವರಾಜ ರಾಯರಡ್ಡಿ, ಇಂಧನ ಸಚಿವ ಕೆ.ಜೆ. ಜಾಜ್‌ರ್‍ ಕರೆ ಸ್ವೀಕರಿಸಲಿಲ್ಲವೇ? ಅಥವಾ ಇವರೇ ಅವರಿಗೆ ಸಮಸ್ಯೆ ವಿವರಿಸಲಿಲ್ಲವೇ ಎನ್ನುವುದನ್ನು ಪತ್ರದಲ್ಲಿ ಪ್ರಸ್ತಾಪಿಸಿಲ್ಲ. ಸಚಿವರ ಗಮನಕ್ಕೆ ತರದೇ ನೇರವಾಗಿ ಸಿ.ಎಂ.ಸಿದ್ದರಾಮಯ್ಯಗೆ ಪತ್ರ ಬರೆದಿರುವುದು ಮತ್ತೊಂದು ಚರ್ಚೆ ಹುಟ್ಟು ಹಾಕಿದೆ.

Follow Us:
Download App:
  • android
  • ios