Asianet Suvarna News Asianet Suvarna News

ನಮೋ ನಮಃ ನವ ಮಂತ್ರಾಲಯ ಸುಕ್ಷೇತ್ರ: ಶುರುವಾಗಿದೆ ಪರಿವರ್ತನೆ ಪರ್ವ

ಬೇಡಿಬಂದ ಭಕ್ತರನ್ನು ಕರುಣಿಸುವ ಕರುಣಾಮಯಿ, ಯತಿಕುಲ ತಿಲಕ, ಕಲಿಯುಗದ ಕಲ್ಪತರು ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ಸಂಕಲ್ಪ ಸಿದ್ಧಿಯ ಫಲವಾಗಿ ಸುಕ್ಷೇತ್ರವು ನಮೋ ನಮಃ ನವ ಮಂತ್ರಾಲಯವಾಗಿ ಪರಿವರ್ತನೆಗೊಳ್ಳುತ್ತಿದೆ.

Namo Namah Nava Mantralayam Sukshetra gvd
Author
First Published Sep 1, 2023, 11:59 PM IST

ರಾಮಕೃಷ್ಣ ದಾಸರಿ

ರಾಯಚೂರು (ಸೆ.01): ಬೇಡಿಬಂದ ಭಕ್ತರನ್ನು ಕರುಣಿಸುವ ಕರುಣಾಮಯಿ, ಯತಿಕುಲ ತಿಲಕ, ಕಲಿಯುಗದ ಕಲ್ಪತರು ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ಸಂಕಲ್ಪ ಸಿದ್ಧಿಯ ಫಲವಾಗಿ ಸುಕ್ಷೇತ್ರವು ನಮೋ ನಮಃ ನವ ಮಂತ್ರಾಲಯವಾಗಿ ಪರಿವರ್ತನೆಗೊಳ್ಳುತ್ತಿದೆ. ಶ್ರೀಗುರುರಾಜರ ಅನುಗ್ರಹ, ಶ್ರೀಗಳ ಮುಂದಾಲೋಚನೆ ಸಂಕಲ್ಪದ ಸಹಕಾರದಿಂದ ಇಂದು ಮಂತ್ರಾಲಯ ಕ್ಷೇತ್ರವು ನವ ರೂಪವನ್ನು ತಾಳಿದೆ. ಎರಡು ವರ್ಷಗಳ ಹಿಂದಿನ ಮಂತ್ರಾಲಯಕ್ಕೆ ಹೋಲಿಸಿದರೆ ಇದೇನಾ ಆ ಮಂತ್ರಾಲಯ ಎನ್ನುವಷ್ಟರ ಮಟ್ಟಿಗೆ ಅಭಿವೃದ್ಧಿ ಕೆಲಸ-ಕಾರ್ಯಗಳು ಸಾಗಿದ್ದು, ಇನ್ನು ಹತ್ತು ಹಲವು ಯೋಜನೆಗಳ ಅನುಷ್ಠಾನ ಪ್ರಗತಿಯಲ್ಲಿದೆ.

ಮಂತ್ರಾಲಯದ ಮಠದ ಮುಖ್ಯದ್ವಾರದ ಕಟ್ಟಡ ವಿನ್ಯಾಸ, ದೀಪಾಲಂಕಾರ, ರಥಬೀದಿಯ ಎರಡೂ ಬದಿಯಲ್ಲಿ ಕಾರಿಡಾರ್, ಮ್ಯುಸಿಯಂ, ತುಂಗ ಮಾರ್ಗ, ಹೆಚ್ಚುವರಿ ವಸತಿ ಗೃಹಗಳ ನಿರ್ಮಾಣ, ವಿವಿಧೆಡೆ ವಾಹನಗಳ ನಿಲುಗಡೆಗೆ ವ್ಯವಸ್ಥೆ, ರಾಯಚೂರು ರಸ್ತೆ ಹಾಗೂ ಎಮ್ಮಿಗನೂರು ಮಾರ್ಗದಲ್ಲಿ ಅತೀ ಎತ್ತದ ಶ್ರೀರಾಮ ವಿಗ್ರಹದ ಪ್ರತಿಷ್ಠಾಪನೆ, ಸನಾತನ ಧರ್ಮ, ಆಧ್ಯಾತ್ಮಿಕ-ಧಾರ್ಮಿಕ ಚಿಂತನೆ ಸೇರಿ ಹತ್ತು ಹಲವು ರೀತಿಯ ಚಟುವಟಿಕೆಗಳಿಂದ ಸುಕ್ಷೇತ್ರ ಮಂತ್ರಾಲಯ ಧಾರ್ಮಿಕ ಕೇಂದ್ರಗಳ ಬಿಂದುವಾಗಿ ಮಾರ್ಪಟ್ಟಿದೆ. ಪರಮಪವಿತ್ರವಾದ ಮಂತ್ರಾಲಯದ ತುಂಗಾ ತಟದಲ್ಲಿ ಸಶರೀರವಾಗಿ ಬೃಂದಾವನಸ್ಥರಾಗಿರುವ ಶ್ರೀಗುರುಸಾರ್ವಭೌಮರ 532 ನೇ ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಶ್ರೀಮಠದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ-ಉದ್ಘಾಟನೆಯನ್ನು ಮಾಡಲಾಗಿದೆ.

ಉಪೇಂದ್ರ ಶವಯಾತ್ರೆ ನಡೆಸಿದ ಪ್ರತಿಭಟನಾಕಾರರು: ಧಿಕ್ಕಾರ ಕೂಗುವ ಮೂಲಕ ಆಕ್ರೋಶ

ಶ್ರೀಗುರುರಾಜರ ಅಂತರಂಗದ ಭಕ್ತರೊಬ್ಬರು ಸುಕ್ಷೇತ್ರದ ವಸತಿ ಬುಕ್ಕಿಂಗ್ ಕಚೇರಿಯ ಹಿಂದುಗಡೆ ಮೂಲರಾಮ ಹೆಸರಿನಲ್ಲಿ ಸುಮಾರು 8 ಕೋಟಿ ವೆಚ್ಚದಲ್ಲಿ 100 ಕೊಠಡಿಯನ್ನು ನಿರ್ಮಾಣ ಮಾಡಿ ದಾನ ರೂಪದಲ್ಲಿ ಶ್ರೀಮಠಕ್ಕೆ ಸಮರ್ಪಣೆ ಮಾಡಿದ್ದಾರೆ. ಸುಕ್ಷೇತ್ರದ ತುಂಗಭದ್ರಾ ನದಿಗೆ ಹೋಗುವ ದಾರಿಯಲ್ಲಿ ತುಂಗಾ ಮಾರ್ಗ ಕಾರಿಡಾರ್‌ನ್ನು ನಿರ್ಮಿಸಿ ಉದ್ಘಾಟಿಸಿದ್ದು, ಇಲ್ಲಿ ನದಿಗಳ ಉಗಮ, ಅವುಗಳ ಪಾವಿತ್ರತೆ, ಸ್ಮರಣೆ, ಸಂಕಲ್ಪ ಸೇರಿದಂತೆ ಪೂಣ್ಯ ಸ್ನಾನದ ಮಹತ್ವವನ್ನು ಭಕ್ತಾದಿಗಳಿಗೆ ತಿಳಿಸುವ ಉದ್ದೇಶವನ್ನು ಶ್ರೀಮಠ ಹೊಂದಿದೆ. 

ಇನ್ನು 1 ಕೋಟಿ ವೆಚ್ಚದಲ್ಲಿ ಜಗನ್ನಾಥದಾಸರ ಜೀವನ ಕುರಿತು ಹಾಗೂ ದಾಸರು ರಚಿಸಿದ ಹರಿಕಥಾಮೃತಸಾರದ ವಿಷಯಗಳ ಕುರಿತು ಭಕ್ತರಿಗೆ ಪ್ರದರ್ಶಿಸುವ ನಿಟ್ಟಿನಲ್ಲಿ ಸುಸಜ್ಜಿತವಾಗಿರುವ ಜಗನ್ನಾಥದಾಸರ ಮ್ಯೂಜಿಯಂನ್ನು ಸಹ ಆರಾಧನೆ ನಿಮಿತ್ತ ಶ್ರೀಗಳು ಲೋಕಾರ್ಪಣೆ ಮಾಡಿದ್ದು, ದಾಸ ಸಾಹಿತ್ಯದ ಶ್ರೀ ಜಗನ್ನಾಥ ದಾಸರು ರಚಿಸಿರುವ ಹರಿಕಥಾಮೃತ ಸಾರ, ಅವರ ಜೀವನ, ಕೃತಿಗಳ ಪರಿಚಯಿಸುವ ಮ್ಯುಸಿಯಂನ್ನು ಶ್ರೀಗಳು ಲೋಕಾರ್ಪಣೆ ಮಾಡಿದ್ದು, ಇಲ್ಲಿ ಹರಿಕಥಾಮೃತಸಾರದ 32 ಸುಳಾದಿಗಳ ಸಂಪೂರ್ಣವಾಗಿ ಚಿತ್ರದೊಂದಿಗೆ ಅದ್ಭುತವಾಗಿ ಮೂಡಿಬಂದಿದೆ. ಇಷ್ಟೇ ಅಲ್ಲದೇ 1 ಕೋಟಿ ವೆಚ್ಚದಲ್ಲಿ ಅಡುಗೆ ಸಿದ್ಧಪಡಿಸಲು ಡಿಸೇಲ್ ಬಾಯ್ಲರ್‌ಗಳನ್ನು ಅನ್ನಪೂರ್ಣ ಹಾಗೂ ರಂಗಭವನದ ಊಟದ ಶಾಲೆಗಳಿಗೆ ಅಳವಡಿಸಲಾಗಿದೆ. ೫೦ ಲಕ್ಷ ವೆಚ್ಚದಲ್ಲಿ ಆಧುನೀಕ ಯಂತ್ರೀಕರಣಗೊಂಡಿರುವ ಬಟ್ಟೆ ಒಗೆಯುವ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ,

ಲಕೋಟೆ ರೂಪದಲ್ಲಿ ಭಕ್ತರ ಮನೆಗೆ ರಾಯರು: ಕೇಂದ್ರ ಸರ್ಕಾರ ಹಾಗೂ ಅಂಚೆ ಇಲಾಖೆ ಸಹಯೋಗದೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿಗಳವರ ಭಾವಚಿತ್ರವನ್ನು ಹೊಂದಿರುವ ವಿಶೇಷ ಲಕೋಟೆ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಶುಭ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಮೂಲಕ ದೇಶದಲ್ಲಿ ನೆಲೆಸಿರುವ ರಾಯರ ಅಪಾರ ಭಕ್ತಾದಿಗಳಿಗೆ ಅಂಚೆ ಲಕೋಟೆ ರೂಪದಲ್ಲಿ ರಾಯರು ಭಕ್ತರ ಮನೆಗೆ ಬರಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಅಂಚೆ ಇಲಾಖೆ ಅಧಿಕಾರಿಗಳು ಶ್ರಮವಹಿಸಿ ಈ ಲಕೋಟೆಯನ್ನು ರೂಪಿಸಿ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ಕೈಗಳ ಮುಖಾಂತರ ಬಿಡುಗಡೆ ಮಾಡಿಸಿದ್ದಾರೆ. ತಮ್ಮ ಭಾವಚಿತ್ರ ಹೊಂದಿರುವ ಲಕೋಟೆ ಮೂಲಕ ಶ್ರೀಗುರುಸಾರ್ವಭೌಮರು ತಮ್ಮ ಭಕ್ತರಿಗೆ ಆಶೀರ್ವಾದವನ್ನು ನೀಡಲಿದ್ದಾರೆ.

ಭವಿಷ್ಯದ ಯೋಜನೆಗಳು: ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆಯನ್ನು ಸಾರುವ ಸಂಗ್ರಹಾಲಯ (ಮ್ಯೂಸಿಯಂ) ಕಾರ್ಯ ಪ್ರಗತಿಯಲ್ಲಿದೆ, ಸುಮಾರು 35 ಕೋಟಿ ವೆಚ್ಚದಲ್ಲಿ ಮೂರು ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ರಾಮ ಕಥಾ ಥಿಮ್ ಪಾರ್ಕ್‌ ಮುಂದಿನ ಆರು ತಿಂಗಳಲ್ಲಿ ಉದ್ಘಾಟನೆ ಮಾಡಲು ಶ್ರೀಗಳು ಸಂಕಲ್ಪಿಸಿದ್ದಾರೆ.

₹2.50 ಕೋಟಿ ವೆಚ್ಚದಲ್ಲಿ ಹೈದರಾಬಾದ್‌ ಬರ್ಕತಪುರ ಬಡಾವಣೆಯಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಕಲ್ಯಾಣ ಮಂಟಪದ ನವೀಕರಣ ಹಾಗೂ ತಿರುಪತಿಯಲ್ಲಿ ₹4 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಾಣ, ಹೈದರಾಬಾದ್‌ ಮಲ್ಕಾಜಿಗಿರಿ ಬಡಾವಣೆಯಲ್ಲಿ ₹2ಕೋಟಿ ಕಲ್ಯಾಣ ಮಂಟಪ ನಿರ್ಮಾಣ ಹಾಗೂ ಬದರಿನಾಥದಲ್ಲಿ ₹2ಕೋಟಿ ವೆಚ್ಚದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಶಾಖಾ ಮಠ ನಿರ್ಮಾಣ, ಸುಕ್ಷೇತ್ರ ಮಂತ್ರಾಲಯದಲ್ಲಿ ₹2.50ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಸುಧಾರಣೆಗೊಳಿಸುವುದು, ₹4ಕೋಟಿ ವೆಚ್ಚದಲ್ಲಿ ಬೇಸಿಗೆ ಸಂದರ್ಭದಲ್ಲಿ ನೀರು ಸಂಗ್ರಹಣೆಗಾಗಿ ಟ್ಯಾಂಕ್ ನಿರ್ಮಾಣ ಹಾಗೂ ₹15 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೇ ₹5.5 ಕೋಟಿ ವೆಚ್ಚದಲ್ಲಿ ಸೌರ ವಿದ್ಯುತ್ ಉತ್ಪಾದನಾ ವ್ಯವಸ್ಥೆಯ ಯೋಜನೆಯನ್ನು ಹೊಂದಲಾಗಿದೆ ಎಂದು ಶ್ರೀಗಳವರು ಹೇಳಿದರು.

ಸಾಲು- ಸಾಲು ರಜೆಗಳು ಹಿನ್ನೆಲೆ: ಮಂತ್ರಾಲಯದ ರಾಯರ ಮಠಕ್ಕೆ ಮತ್ತೆ ಹರಿದುಬಂತು ಕೋಟಿ ಗಟ್ಟಲೆ ಕಾಣಿಕೆ

ಶ್ರೀಗುರುಸಾರ್ವಭೌಮರ 352 ನೇ ಆರಾಧನಾ ಮಹೋತ್ಸವವು ಅತ್ಯಂತ ವೈಭವದಿಂದ ನಡೆಯುದಿದೆ. ದೇಶ-ವಿದೇಶಗಳಿಂದ ಆಗಮಿಸುವ ಭಕ್ತರಿಗೆ ಅಗತ್ಯವಾದ ದರ್ಶನ, ತೀರ್ಥ ಪ್ರಸಾದ, ವಸತಿ, ಕುಡಿಯುವ ನೀರು, ಆರೋಗ್ಯ ಸೇರಿದಂತೆ ಇತರೆ ಸವಲತ್ತುಗಳನ್ನು ಶ್ರೀಮಠದಿಂದ ಕಲ್ಪಿಸಿಕೊಡಲಾಗಿದೆ. ಭಕ್ತರು ಯಾವುದೇ ಆತಂಕವಿಲ್ಲದೇ ಸುಕ್ಷೇತ್ರಕ್ಕೆ ಬಂದು ಶ್ರೀಗುರುರಾಜಯ ಆರಾಧನೆಯನ್ನು ಪಾಲ್ಗೊಂಡು ಹರಿಗುರುಗಳ ಕೃಪೆಗೆ ಪಾತ್ರರಾಗಬೇಕು.
-ಡಾ.ಸುಬುಧೇಂದ್ರ ತೀರ್ಥರು, ಪೀಠಾಧಿಪತಿ ಶ್ರೀರಾಘವೇಂದ್ರ ಸ್ವಾಮಿಗಳ ಮಠ, ಮಂತ್ರಾಲಯ

Follow Us:
Download App:
  • android
  • ios