Asianet Suvarna News Asianet Suvarna News

ಬಿಜೆಪಿ ತಡೆದ ಯೋಜನೆಗೆ ಮತ್ತೆ ಚಾಲನೆ ನೀಡುವೆ: ಸಚಿವ ಮಲ್ಲಿಕಾರ್ಜುನ

ಜಿಲ್ಲೆಗೆ ಇನ್ನೂ ನೂರು ಯೋಜನೆ ಕೊಟ್ಟರೂ, ಅವುಗಳ ಅನುಷ್ಠಾನ, ಅಭಿವೃದ್ಧಿ ಕಾಮಗಾರಿ ಮಾಡಿಸುವ ಶಕ್ತಿ ತಮಗಿದ್ದು, ಹಿಂದಿನ ಬಿಜೆಪಿಯವರು ತಡೆ ಹಿಡಿದಿದ್ದ ಕಾಮಗಾರಿಗಳ ಮತ್ತೆ ಚಾಲನೆ ನೀಡುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಸಂಸದ ಜಿ.ಎಂ.ಸಿದ್ದೇಶ್ವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

Minister SS Mallikarjun Slams On BJP At Davanagere gvd
Author
First Published Aug 7, 2023, 11:59 PM IST

ದಾವಣಗೆರೆ (ಆ.07): ಜಿಲ್ಲೆಗೆ ಇನ್ನೂ ನೂರು ಯೋಜನೆ ಕೊಟ್ಟರೂ, ಅವುಗಳ ಅನುಷ್ಠಾನ, ಅಭಿವೃದ್ಧಿ ಕಾಮಗಾರಿ ಮಾಡಿಸುವ ಶಕ್ತಿ ತಮಗಿದ್ದು, ಹಿಂದಿನ ಬಿಜೆಪಿಯವರು ತಡೆ ಹಿಡಿದಿದ್ದ ಕಾಮಗಾರಿಗಳ ಮತ್ತೆ ಚಾಲನೆ ನೀಡುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಸಂಸದ ಜಿ.ಎಂ.ಸಿದ್ದೇಶ್ವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ, 22 ಕೆರೆ ತುಂಬಿಸುವ ಯೋಜನೆ ಮಂಜೂರು ಮಾಡಿಸಿದ್ದು, ಕಾಮಗಾರಿ ಕೈಗೊಂಡಿದ್ದೂ ನಾವು. 

ಆದರೆ, ಅದನ್ನು ಅಪೂರ್ಣಗೊಳಿಸಿದ್ದು ಬಿಜೆಪಿಯವರು ಎಂದರು. ರಾಜ್ಯದಲ್ಲೇ ಎಲ್ಲೂ ಆಗದಷ್ಟು 550 ಕೋಟಿ ರು. ವೆಚ್ಚದಲ್ಲಿ ಭೂಗತ ವಿದ್ಯುತ್‌ ಮಾರ್ಗ(ಅಂಡರ್‌ ಗ್ರೌಂಡ್‌ ಕೇಬಲ್‌) ಕಾಮಗಾರಿ ಕೈಗೊಂಡರೂ, ನನಗೆ ಹೆಸರು ಬರುತ್ತದೆಂದು ಅದನ್ನು ಬಿಜೆಪಿಯವರು ಮುಂದುವರಿಸಲಿಲ್ಲ. ಹಳೆ ಬಸ್ಸು ನಿಲ್ದಾಣ, ಪಿಬಿ ರಸ್ತೆ, ರಿಂಗ್‌ ರಸ್ತೆ, ವೃತ್ತಗಳು ಯಾರು ಮಾಡಿಸಿದ್ದಾರೆ? ಯಾರು ಕೆಲಸ ಮಾಡಿದ್ದಾರೆಂಬುದಾದರೂ ಗೊತ್ತಾಗಬೇಕಲ್ಲವೇ? ಒಂದು ಲೋಡ್‌ ಮಣ್ಣು ತರಿಸಿ ಹಾಕಿದ್ದೀರಾ ಎಂದು ಹರಿಹಾಯ್ದರು.

ಸದ್ಯಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ: ಸಚಿವ ಮುನಿಯಪ್ಪ

ಇತರೆ ರಾಜ್ಯಗಳು ಗಮನಿಸುತ್ತಿವೆ: ಯಾರೇ ಒಳ್ಳೆಯ ಕೆಲಸ ಮಾಡಿದ್ದರೂ ಅಂತಹವರಿಗೆ ಶಹಬ್ಬಾಸ್‌ ಗಿರಿ ಕೊಡೋಣ. ಅಧಿಕಾರಿಗಳಲ್ಲಿ ಒಳ್ಳೆಯ ಕೆಲಸ ಮಾಡಿದವರಿಗೆ ಒಳ್ಳೆಯವರು ಅನ್ನೋದು, ಕೆಲಸ ಮಾಡದವರಿಗೆ ಗೇಟ್‌ ಪಾಸ್‌ ಕೊಟ್ಟು, ಹೋಗು ಅನ್ನೋದರಲ್ಲಿ ತಪ್ಪೇನಿದೆ? ಐದು ವರ್ಷ ನೀವು ಏನು ಮಾಡಿದ್ದೀರಿ? ನಾಳೆ ನೋಡೋಣ ಲೋಕಸಭೆ ಚುನಾವಣೆ ಬರುತ್ತದೆ. ಐದೂ ಗ್ಯಾರಂಟಿ ಯೋಜನೆ ಮಾಡಿದ್ದು ಸಿಎಂ ಸಿದ್ದರಾಮಯ್ಯ. ಇಡೀ ದೇಶವೇ ಇಂದು ರಾಜ್ಯದತ್ತ ನೋಡುತ್ತಿದೆ. ಬಡವರಿಗೆ ಒಳ್ಳೆಯ ಕೆಲಸ ಇಲ್ಲಿ ಆಗುತ್ತಿದೆಯೆಂಬುದಾಗಿ ಇತರೆ ರಾಜ್ಯಗಳೂ ನಮ್ಮ ಯೋಜನೆ ಗಮನಿಸುತ್ತಿವೆ ಎಂದು ತಿಳಿಸಿದರು.

ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಮಹಾಂತೇಶ ಜಿ.ಬೀಳಗಿ ಹೆಸರು ಬರಲಿ ಅಂತಾ ಕೊರೋನಾ ಸಂದರ್ಭದಲ್ಲಿ ಕೆಲಸ ಮಾಡಲಿಲ್ಲ. ಜನರಿಗೆ ಒಳ್ಳೆಯದಾಗಲೆಂದು ಮಾಡಿದ್ದನ್ನು ನಾನು ನೋಡಿದ್ದೇನೆ. ಆದರೆ, ಕೊರೋನಾ ಕಾಲದಲ್ಲಿ ಆಗಿರುವ ಅಕ್ರಮದ ಬಗ್ಗೆ ಎಲ್ಲಾ ತನಿಖೆಗೆ ಹಾಕಿದ್ದೇನೆ. ಒಬ್ಬ ವೈದ್ಯ ಕೋವಿಡ್‌ ರೋಗಿ ಮುಟ್ಟಿದರೆ, ಜೊತೆಗೆ ಕೆಲಸ ಮಾಡಿದ್ದ ನರ್ಸ್‌, ಅಟೆಂಡರ್‌ಗೂ 13 ದಿನಗಳ ಕಾಲ ಕ್ವಾರಂಟೈನ್‌ ಮಾಡಿದ್ದರು. ಎ. ಬಿ, ಸಿ ಅಂತಾ ಶ್ರೇಣಿ ಮಾಡಿ, 13 ದಿನ ಹೊಟೆಲ್‌ನಲ್ಲಿ ಉಳಿದು ಬರಬೇಕು ಎಂಬುದಾಗಿ ಮಾಡಿದ್ದರು. ಆಗ ಕೆಲ ಹೊಟೆಲ್‌ಗಳಿಗೆ ಹಣ ಕೊಟ್ಟರೆ, ಉಳಿದವರಿಗೆ ಕೊಟ್ಟಿಲ್ಲ. ಹಾಗೆ ಕ್ವಾರಂಟೈನ್‌ ಮಾಡಿದ್ದ ಹೊಟೆಲ್‌ಗಳಿಗೆ ಪೇಮೆಂಟ್‌ ಕೊಡಬೇಕಲ್ಲವಾ? ಹೊಟೆಲ್‌ನವರಿಗೆ ಯಾರಿಗೂ ಪೇಮೆಂಟ್‌ ಮಾಡಿಲ್ಲ. ಈ ಬಗ್ಗೆ ಸಹ ತನಿಖೆ ಆಗಲಿದೆ ಎಂದು ಹೇಳಿದರು.

ಮೆದುಳು ನಿಷ್ಕ್ರಿಯತೆ: ಸಮಾಜ ಸೇವಕಿ ಸಹನಾ ಜೋನ್ಸ್ ರೂಬೆನ್ ಅವರ ಅಂಗಾಗಗಳ ದಾನ

ಅಡಿಕೆ ಬೆಳೆಗಾರರು ಸಂಸದರ ಗಮನಕ್ಕೆ ಬರಲಿಲ್ವಾ?: ಫಸಲ್‌ ವಿಮಾ ಯೋಜನೆಯನ್ನು 7 ದಿನ ವಿಸ್ತರಿಸಿರುವುದಾಗಿ ಸಂಸದರು ಹೇಳಿದ್ದು, ಅಂತಹ ಯೋಜನೆಯನ್ನು ಅಡಿಕೆ ಬೆಳೆಗಾರರಿಗೆ ಯಾಕೆ ವಿಸ್ತರಿಸಲಿಲ್ಲ? ಯೋಜನೆಯಿಂದ ಅಡಿಕೆ ಯಾಕೆ ಕೈಬಿಟ್ಟರು ಎಂದು ಸಚಿವ ಎಸ್ಸೆಸ್‌ ಮಲ್ಲಿಕಾರ್ಜುನ ಪ್ರಶ್ನಿಸಿದ್ದಾರೆ. ಹಿಂದೆ ಬಿಜೆಪಿಯವರು ಮಾಡಬಾರದ್ದನ್ನೆಲ್ಲಾ ಮಾಡಿದ್ದಾರೆ. ಹಿಂದಿನ ಶಾಸಕ ಎಸ್‌.ಎ.ರವೀಂದ್ರನಾಥ್‌ ನಿಮ್ಮ ಸಂಸದ ಸಿದ್ದೇಶ್ವರ ವರ್ತನೆಯಿಂದ ಏನೂ ಮಾಡದೇ, ಬಿಟ್ಟು ಕೊಟ್ಟಿದ್ದರು. ಇನ್ನು ಮೇಲೆ ಏನೇನೋ ಮಾಡುವುದಕ್ಕೆ ನಾನೂ ಬಿಡುವುದಿಲ್ಲ. ಇನ್ನೂ ಆರೆಂಟು ತಿಂಗಳಿದ್ದು, ಒಳ್ಳೆಯ ರೀತಿಯಿಂದ ಇರಲಿ. ಲೋಕಸಭೆ ಚುನಾವಣೆಗೆ ನಿಲ್ಲುವಂತಿದ್ದರೆ ನಿಲ್ಲಲಿ. ನಾವೂ ಕಾಂಗ್ರೆಸ್ಸಿನಿಂದ ಒಳ್ಳೆಯ ಅಭ್ಯರ್ಥಿ ಹುಡುಕುತ್ತಿದ್ದೇವೆ. ಅಗತ್ಯ ಬಿದ್ದರೆ ನಾನೂ ಸಿದ್ಧನಿದ್ದೇನೆ. ನಮ್ಮ ಕಾರ್ಯಕರ್ತರು ಹೇಳಿದಂತೆ ಕೇಳುತ್ತೇನೆ ಎಂದು ಮಲ್ಲಿಕಾರ್ಜುನ್‌ ಹೇಳಿದರು.

Follow Us:
Download App:
  • android
  • ios