Asianet Suvarna News Asianet Suvarna News

ಗ್ಯಾರಂಟಿ ಈಡೇರಿಸಿ ರಾಜ್ಯದ ಒಳಿತಿಗಾಗಿ ದುಡಿಯುತ್ತಿರುವ ಸರ್ಕಾರ: ಸಚಿವ ಶಿವಾನಂದ ಪಾಟೀಲ

ಇಡೀ ದೇಶದಲ್ಲಿ ಏನೇ ಗಾಳಿ ಇದ್ದರೂ ಕರ್ನಾಟಕದಲ್ಲಿ ವಿಭಿನ್ನ ಗಾಳಿ ಇರುತ್ತದೆ. ಇದು ಇವತ್ತಿನದಲ್ಲ ಬಹು ದಿನಗಳಿಂದ ಕರ್ನಾಟಕದ ಜನತೆ ಬಹು ಮಾರ್ಮಿಕವಾಗಿ ನಿರ್ಣಯಕ್ಕೆ ಬರುತ್ತಾರೆ: ಸಚಿವ ಶಿವಾನಂದ ಪಾಟೀಲ 

Minister Shivanand Patil Talks Over Karnataka Congress Government grg
Author
First Published Nov 17, 2023, 2:00 AM IST

ತಾಳಿಕೋಟೆ(ನ.17):  ಆರು ತಿಂಗಳಲ್ಲಿ ಸರ್ಕಾರ ಹೇಳಿದ ೫ ಬೇಡಿಕೆಗಳಲ್ಲಿ ೪ ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದೆ. ವರ್ಷಕ್ಕೆ ₹೫೦ ಸಾವಿರ ಕೋಟಿಯಷ್ಟು ಸರ್ಕಾರದ ಮೇಲೆ ಹೊರೆ ಬಿದ್ದರೂ ಸರ್ಕಾರ ಸಮರ್ಥವಾಗಿ ಎದುರಿಸುತ್ತಿದೆ. ಇದೆಲ್ಲ ರಾಜ್ಯದ ಜನರ ಒಳಿತಿಗಾಗಿ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಮಿಣಜಗಿ ಗ್ರಾಮದಲ್ಲಿಯ ಶ್ರೀ ಮಾಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರ ವತಿಯಿಂದ ಏರ್ಪಡಿಸಲಾದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಏನೇ ಗಾಳಿ ಇದ್ದರೂ ಕರ್ನಾಟಕದಲ್ಲಿ ವಿಭಿನ್ನ ಗಾಳಿ ಇರುತ್ತದೆ. ಇದು ಇವತ್ತಿನದಲ್ಲ ಬಹು ದಿನಗಳಿಂದ ಕರ್ನಾಟಕದ ಜನತೆ ಬಹು ಮಾರ್ಮಿಕವಾಗಿ ನಿರ್ಣಯಕ್ಕೆ ಬರುತ್ತಾರೆ. ರಾಮಕೃಷ್ಣ ಹೆಗಡೆ ಅವರು ೧೯೮೦ರಲ್ಲಿ ಮುಖ್ಯಮಂತ್ರಿಯಾಗುತ್ತಾರೆ. ಆ ಸಂದರ್ಭದಲ್ಲಿ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಳ್ಳುತ್ತಾರೆ. ಮರು ಚುನಾವಣೆಯಲ್ಲಿ ಗೆಲವು ಸಾಧಿಸಿ ರಾಮಕೃಷ್ಣ ಹೆಗಡೆ ಅವರ ಸರ್ಕಾರ ನಿಲ್ಲುತ್ತದೆ. ದಿ.ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿಯಲ್ಲಿ ಸೋಲು ಅನುಭವಿಸಿದಾಗ ಪುನರ್ ಜೀವನ ನೀಡಿದ್ದು ಇದೇ ಕರ್ನಾಟಕ ಎಂದರು.

ದಸರಾ, ದೀಪಾವಳಿಗೆ ಬಂಪರ್‌ ಗಿಫ್ಟ್: ನೇಕಾರರಿಗೆ ಉಚಿತ ವಿದ್ಯುತ್‌..!

ಕರ್ನಾಟಕದಲ್ಲಿ ೨ನೇ ಸ್ಥಾನ:

ಸಹಕಾರಿ ರಂಗದಲ್ಲಿಯೂ ಸಾಕಷ್ಟು ಸಾಧನೆ ಮಾಡಿದೆ. ಕುಡಿಯಲು ನೀರು ಇರದಂತಹ ಜಿಲ್ಲೆಯಲ್ಲಿ ಈ ಹಿಂದೆ ಹಾಲು ಉತ್ಪಾದನೆಯಲ್ಲಿ ೧೩ನೇ ಸ್ಥಾನದಲ್ಲಿದ್ದೆವು. ಸುದೈವದಿಂದ ಹಾಲು ಉತ್ಪಾದನೆಯಲ್ಲಿ ಕರ್ನಾಟಕದಲ್ಲಿ ೨ನೇ ಸ್ಥಾನದಲ್ಲಿದೆ. ಬಾಗಲಕೋಟೆ-ವಿಜಯಪುರ ಜಿಲ್ಲೆ ಸೇರಿದರೆ ಕರ್ನಾಟಕದಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆ ಮಾಡುವ ಜಿಲ್ಲೆ ನಮ್ಮದೆಂದರು.

ಕಬ್ಬು ಉತ್ಪಾದನೆಯಲ್ಲಿ ೩ನೇ ಸ್ಥಾನ:

ಕಬ್ಬು ನುರಿಸುವ ಶಕ್ತಿ ಜಿಲ್ಲೆಗೆ ಇರಲಿಲ್ಲ. ಬಾಗಲಕೋಟೆ-ವಿಜಯಪುರ ಅವಿಭಾಜ್ಯ ಅಂಗದಂತಿದ್ದಾಗ ಕಬ್ಬಿನ ಕಾರ್ಖಾನೆಗಳಿಗೆ ಸಾಲ ನೀಡಿದಾಗ ಈ ಎರಡೂ ಜಿಲ್ಲೆಯೊಳಗೊಂಡು ೨೪ ಸಕ್ಕರೆ ಕಾರ್ಖಾನೆಗಳು ಇಂದು ಕಬ್ಬು ನುರಿಸುತ್ತಾ ಸಾಗಿವೆ. ಇಲ್ಲಿಯ ಬಾಲಾಜಿ ಸಕ್ಕರೆ ಕಾರ್ಖಾನೆಗೂ ನಾವು ಸಹಾಯ ಮಾಡಿದ್ದೇವೆ. ನಂದಿ ಸಕ್ಕರೆ ಕಾರ್ಖಾನೆ, ಭೀಮಾ ಸಕ್ಕರೆ ಕಾರ್ಖಾನೆ, ಬಾಗಲಕೋಟೆಯ ಗುಡಗುಂಟಿ, ನ್ಯಾಮಗೋಡ ಅವರ ಕಾರ್ಖಾನೆ, ಜಮ್ಮ ಕಾರ್ಖಾನೆ ಒಳಗೊಂಡು ಅನೇಕ ಕಾರ್ಖಾನೆಗಳಿಗೆ ಡಿಸಿಸಿ ಬ್ಯಾಂಕ್‌ನಿಂದ ಅವಧಿ ಸಾಲ ಕೊಟ್ಟಿದ್ದೇವೆ. ಅದರಿಂದ ಇವತ್ತು ಕರ್ನಾಟಕದಲ್ಲಿ ಕಬ್ಬು ಉತ್ಪಾದನೆಯಲ್ಲಿ ೩ನೇ ಸ್ಥಾನಕ್ಕೆ ವಿಜಯಪುರ-ಬಾಗಲಕೋಟೆ ಜಿಲ್ಲೆಗಳು ಏರಿವೆ ಎಂದರು.

ಎಲ್ಲ ರೈತರಿಗೆ ಸಾಲ ಕೊಡಿಸುವ ವ್ಯವಸ್ಥೆ:

ರೈತರಿಗೆ ಒಂದು ಕಾಲದಲ್ಲಿ ಮುಂಗಾರು ಹಂಗಾಮಿಯಲ್ಲಿ ಅಲ್ಪಾವಧಿ ಸಾಲ ಸಿಗುತ್ತಿರಲಿಲ್ಲ. ಯಾವ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಕೊಡುತ್ತಿರಲಿಲ್ಲ. ಇವತ್ತು ನಮ್ಮ ಡಿಸಿಸಿ ಬ್ಯಾಂಕಿನಲ್ಲಿ ಬಾಗಲಕೋಟೆ-ವಿಜಯಪುರ ಜಿಲ್ಲೆಗಳು ಕೂಡಿದ್ದಾಗ ಇಡೀ ೫ ಲಕ್ಷ ರೈತರಲ್ಲಿ ೩೭ ಸಾವಿರ ಜನರಿಗೆ ಸಾಲ ಕೊಟ್ಟಿದ್ದೇವೆ. ಆದರೆ, ಇವತ್ತು ಈ ಎರಡೂ ಜಿಲ್ಲೆ ಸೇರಿಸಿದರೆ ೪ ಲಕ್ಷ ೧೦ ಸಾವಿರ ಜನರಿಗೆ ಸಾಲ ಕೊಡುತ್ತೇವೆ. ಕನಿಷ್ಠ ೬೦ ಸಾವಿರದಿಂದ ಗರಿಷ್ಠ ೩ ಲಕ್ಷದವರೆಗೆ ಸಾಲ ಕೊಡುತ್ತೇವೆ. ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡುವುದರಿಂದ ಎಲ್ಲ ರೈತರಿಗೆ ಸಾಲ ಕೊಡಿಸುವ ವ್ಯವಸ್ಥೆ ನಾವು ಮಾಡಿದ್ದೇವೆ. ಈ ರೀತಿ ನಮ್ಮ ಜಿಲ್ಲೆಯಲ್ಲಿ ಎಲ್ಲ ದೃಷ್ಠಿಕೋನದಲ್ಲಿ ಸಾಧನೆ ಮಾಡುತ್ತದೆ. ಇಡೀ ವಿಜಯಪುರ ಜಿಲ್ಲೆಯಲ್ಲಿ ಛೋಟಾ ಬಾಂಬೆ ಅನ್ನುವಂತಹ ಊರು ಎಂದರೆ ಅದು ತಾಳಿಕೋಟೆ ಎಂದು ಹೇಳಿದರು.

ಸನ್ಮಾನಿತ ಶಾಸಕ ಅಪ್ಪಾಜಿ ನಾಡಗೌಡ ಅವರು ಮಾತನಾಡಿ, ಗಣಿಗಾರಿಕೆ ಕುರಿತು ಸಚಿವ ಶಿವಾನಂದ ಪಾಟೀಲರು ಕೊಟ್ಟಂತಹ ಮಾತಿನಂತೆ ಹೆಗಲಿಗೆ ಹೆಗಲು ಕೊಟ್ಟು ತಮ್ಮ ಕಾರ್ಯವನ್ನು ಮಾಡಿಕೊಡುವುದಾಗಿ ಭರವಸೆ ನೀಡಿದರು. ಇಡೀ ಕರ್ನಾಟಕದಲ್ಲಿ ಬರಗಾಲ ಬಿದ್ದಿದೆ. ಮಲೆನಾಡಿನಲ್ಲಿ ಮಳೆ ಇಲ್ಲ. ಸಿದ್ದರಾಮಯ್ಯನವರ ಸರ್ಕಾರ ಕೊಟ್ಟಂತಹ ಕಾರ್ಯಕ್ರಮದಿಂದ ತೊಂದರೆ ಎಂಬುವುದು ಕಾಣುತ್ತಿಲ್ಲ. ದುಡ್ಡು ಆಹಾರ ಸಿಗುತ್ತದೆ. ಸಂಚಾರವೂ ಕೂಡಾ ಪುಕ್ಕಟೆ ನಡೆದಿದೆ. ಇದೇಲ್ಲವನ್ನು ಅರ್ಥೈಸಿಕೊಂಡು ನಡೆಯಬೇಕೆಂದರು.

ಇದೇ ಸಮಯದಲ್ಲಿ ಬಸವರಾಜ ಬಾಗೇವಾಡಿ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಬಿರಾದಾರ ಮಾತನಾಡಿದರು. ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಕಾರ್ಯಕ್ರಮದ ರೂವಾರಿ ಜಿ.ಎಸ್.ಕಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ(ಯಾಳಗಿ), ಕಾಂಗ್ರೆಸ್ ಮುಖಂಡ ಪ್ರಥಮ ದರ್ಜೆ ಗುತ್ತಿಗೆದಾರ ಎಚ್.ಎಂ.ನಾಯಕ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಆರ್.ಎಲ್.ನಾಯಕ, ಶಂಕರ ನಾಯಕ, ಎಸ್.ಬಿ.ಚವ್ಹಾಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಎಚ್.ಎನ್.ಬಿರಾದಾರ, ಹಣಮಂತ್ರಾಯ ಬಿರಾದಾರ, ರೇವಣಪ್ಪ ಪೂಜಾರಿ, ಆಯ್.ಬಿ.ಪಾಟೀಲ, ಬಸನಗೌಡ ಬಿರಾದಾರ, ಈರಣ್ಣ ತೇಕೂರ, ಬಾಬುಗೌಡ ಬಿರಾದಾರ, ಜಿ.ಜಿ.ಯರನಾಳ, ಸಂಗನಗೌಡ ಪಾಟೀಲ, ಎಂ.ಎಸ್.ಮ್ಯಾಗೇರಿ, ಎಂ.ಕೆ.ಸಜ್ಜನ, ಬಿ.ಎನ್.ಮಂಗ್ಯಾಳ, ಕಾಶಿನಾಥ ಬಿರಾದಾರ, ಕಾಶಿಮಗೌಡ ಪಾಟೀಲ, ಡಿ.ವ್ಹಿ.ಪಾಟೀಲ, ಬಿ.ಎನ್.ಹಿಪ್ಪರಗಿ, ವ್ಹಿ.ಸಿ.ಹಿರೇಮಠ, ಪ್ರಭುಗೌಡ ಮದರಕಲ್ಲ, ಎಂ.ಜಿ.ಪಾಟೀಲ, ಚಿಂತಪ್ಪಗೌಡ ಯಾಳಗಿ, ವೀರೇಶ ಬಾಗೇವಾಡಿ, ಸಿ.ಎಸ್.ಮಾಳಿ, ಕಾರ್ತಿಕ ಕಟ್ಟಿಮನಿ, ಎಚ್.ಬಿ.ಬಾಗೇವಾಡಿ, ಮೊದಲಾದವರು ಉಪಸ್ಥಿತರಿದ್ದರು.

ಲಿಂಗಾಯತರಿಗೆ ಸೂಕ್ತ ಸ್ಥಾನಮಾನ: ಶಾಮನೂರ ಶಿವಶಂಕರಪ್ಪ ಸಿಎಂಗಿಂತ ಹಿರಿಯರು, ಸಚಿವ ಪಾಟೀಲ

ಕಾರ್ಯಕ್ರಮಕ್ಕೂ ಮೊದಲು ಜಗದಂಬಾ ಸೇವಾಲಾಲ್ ಮಂದಿರದಿಂದ ಸಚಿವ ಶಿವಾನಂದ ಪಾಟೀಲ ಮತ್ತು ಶಾಸಕ ಸಿ.ಎಸ್.ನಾಡಗೌಡ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಬಸವರಾಜ ಬಾಗೇವಾಡಿ ಸ್ವಾಗತಿಸಿದರು. ಎ.ಬಿ.ಇರಾಜ ನಿರೂಪಿಸಿದರು.

೨೦೧೮ರಲ್ಲಿ ಬಿಜೆಪಿಗೆ ಬಹುಮತ ಇರಲಿಲ್ಲ. ಆದರೆ ಸಮಿಶ್ರ ಸರ್ಕಾರ ಬಂದು ಸಮಾಜದಲ್ಲಿ ಬದುಕುವ ಅವಕಾಶ ಜನ ಕೊಟ್ಟಿದ್ದರೂ ವಾಮಮಾರ್ಗದಿಂದ ಸರ್ಕಾರ ತೆಗೆಯುವ ಕೆಲಸ ಬೇರೆಯವರು ಮಾಡಿದರು. ಆದರೆ ಅದಕ್ಕೆ ಉತ್ತರ ೨೦೨೩ರಲ್ಲಿ ಕರ್ನಾಟಕದ ಜನತೆ ಕೊಟ್ಟಿದ್ದಾರೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ. 

Follow Us:
Download App:
  • android
  • ios