ಸಿದ್ದರಾಮಯ್ಯ ಗೋಮಾಂಸ ತಿಂದರೆ ಜೈಲಿಗೆ ಹಾಕಿಸುತ್ತೇನೆ: ಸಚಿವ ಚವ್ಹಾಣ್
‘ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ, ತಾಕತ್ತಿದ್ದರೆ ನನ್ನ ಎದುರು ಹಸು ಮಾಂಸ ತಿನ್ನಿ. ನಿಮ್ಮನ್ನು ಜೈಲಿಗೆ ಹಾಕಿಸುತ್ತೇನೆ’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.
ಬೆಂಗಳೂರು (ಡಿ.04): ‘ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ, ತಾಕತ್ತಿದ್ದರೆ ನನ್ನ ಎದುರು ಹಸು ಮಾಂಸ ತಿನ್ನಿ. ನಿಮ್ಮನ್ನು ಜೈಲಿಗೆ ಹಾಕಿಸುತ್ತೇನೆ’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ. ವಿಧಾನಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯಿದೆ ಹಿಂಪಡೆಯುವುದಾಗಿ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡ ಅವರು, ‘ನೀ ಯಾರಪ್ಪ ಗೋಹತ್ಯೆ ನಿಷೇಧ ಕಾಯಿದೆ ತೆಗೆಯುವುದಾಗಿ ಹೇಳೋಕೆ?
ತಾಕತ್ ಇದ್ದರೆ ಹಸುವನ್ನು ಕೊಲ್ಲಿ ನೋಡೋಣ. ನಾನು ಹಂದಿ ತಿಂತೇನೆ, ಹಸು ತಿಂತೇನೆ ಎಂದೆಲ್ಲಾ ಮಾತನಾಡುವ ನಿಮಗೆ ತಾಕತ್ತಿದ್ದರೆ ನನ್ನ ಎದುರುಗಡೆ ಹಸು ಮಾಂಸ ತಿನ್ನಿ. ನಿಮ್ಮನ್ನು ಒಳಗೆ (ಜೈಲಿಗೆ) ಹಾಕಿಸುತ್ತೇನೆ’ ಎಂದು ಹೇಳಿದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದಾಗಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಇದರಿಂದ ಕಾಂಗ್ರೆಸ್ ನಾಯಕರು ವಿಚಲಿತರಾಗಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ ವಾಪಸು ಪಡೆಯುವುದಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ತಿದ್ದುಪಡಿ ವಾಪಸು ಪಡೆಯಲು ಇವರು ಯಾರು ಎಂದು ಖಾರವಾಗಿ ಪ್ರಶ್ನಿಸಿದರು.
ಗೋ ರಕ್ಷಣೆಗಾಗಿ ಗೋಶಾಲೆ ಸ್ಥಾಪನೆ: ಸಚಿವ ಪ್ರಭು ಚವ್ಹಾಣ್
ಗೋಹತ್ಯೆ ನಿಷೇಧ ತಂದಿದ್ದೇ ಕಾಂಗ್ರೆಸ್: ಗೋಹತ್ಯೆ ನಿಷೇಧ ಕಾಯಿದೆಯನ್ನು 1964ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ‘ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ ಅಧಿನಿಯಮ-1964’ ಹೆಸರಲ್ಲಿ ಜಾರಿಗೆ ತಂದಿದ್ದರು. ಇದರಡಿ ಪ್ರಸ್ತುತ 1 ಸಾವಿರ ರು. ದಂಡ ಹಾಗೂ 6 ತಿಂಗಳು ಶಿಕ್ಷೆ ಮಾತ್ರ ಇತ್ತು. ಜತೆಗೆ ಪರಿಣಾಮಕಾರಿ ಅನುಷ್ಠಾನ ಆಗುತ್ತಿರಲಿಲ್ಲ. ಜಾನುವಾರು ಸಂಖ್ಯೆ ಕ್ಷೀಣಿಸುತ್ತಿದ್ದರಿಂದ ನಾವು 2020ರಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ ಜಾರಿ ಮಾಡಿದೆವು. ಈ ಮೂಲಕ ಗೋಹತ್ಯೆ ಮಾಡಿದರೆ 3 ರಿಂದ 7 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರು.ಗಳಿಂದ 1 ಲಕ್ಷ ರು.ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಈ ಕಾಯಿದೆಯಿಂದ ಸರ್ಕಾರಕ್ಕೆ ಯಾವುದೇ ಹೊರೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
Kolar: ಜಿಲ್ಲೆಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಮಿಂಚಿನ ಸಂಚಾರ
ಮೇವು ಪೂರೈಕೆ ಬಿಲ್: ವಿವಾದ ಸಂಬಂಧವಿಲ್ಲ: ಹರ್ಷ ಅಸೋಸಿಯೇಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಚವ್ಹಾಣ್ ಅವರು, ಮೇವು ಪೂರೈಸಿದ್ದ ಬಿಲ್ ಬಿಡುಗಡೆಗೆ ಅವರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ ಎಂಬ ಮಾಹಿತಿ ಇದೆ. 2018-19ರಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಬರಗಾಲದಲ್ಲಿ ಗೋಶಾಲೆ ಆರಂಭಿಸಲಾಗಿತ್ತು. ಆಗ ಸಂಸ್ಥೆಯವರು ಮೇವು ಪೂರೈಸಿದ್ದರು. ಗೋಶಾಲೆಗಳಿಗೆ ಜಿಲ್ಲಾಧಿಕಾರಿಗಳು ಮುಖ್ಯಸ್ಥರಾಗಿರುವುದರಿಂದ ಅವು ಕಂದಾಯ ಇಲಾಖೆಯಿಂದ ತೆರೆದ ಗೋಶಾಲೆಗಳು. ಅದಕ್ಕೂ ನಮ್ಮ ಇಲಾಖೆಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದರು.