ಪಶುಸಂಗೋಪನಾ ಸಚಿವರಾದ ಪ್ರಭು ಬಿ ಚವ್ಹಾಣ್ ಅವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಗಂಗಾಪುರ, ಇರಬನಹಳ್ಳಿ,ಅರಳೇರಿ ಗ್ರಾಮಗಳಲ್ಲಿ ಇಂದು ಮಿಂಚಿನ ಸಂಚಾರ ಮಾಡಿ ಚರ್ಮಗಂಟು ರೋಗ ಪೀಡಿತ ರಾಸುಗಳನ್ನು ಪರಿಶೀಲನೆ ನಡೆಸಿ, ಮಾಲೂರು ಪಟ್ಚಣದ ಪಶು ವೈದ್ಯ ಆಸ್ಪತ್ರೆಗೆ ಧಿಡೀರ್ ಭೇಟಿ ನೀಡಿದರು. 

ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ

Add Asianetnews Kannada as a Preferred SourcegooglePreferred

ಕೋಲಾರ (ನ.28): ಪಶುಸಂಗೋಪನಾ ಸಚಿವರಾದ ಪ್ರಭು ಬಿ ಚವ್ಹಾಣ್ ಅವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಗಂಗಾಪುರ, ಇರಬನಹಳ್ಳಿ,ಅರಳೇರಿ ಗ್ರಾಮಗಳಲ್ಲಿ ಇಂದು ಮಿಂಚಿನ ಸಂಚಾರ ಮಾಡಿ ಚರ್ಮಗಂಟು ರೋಗ ಪೀಡಿತ ರಾಸುಗಳನ್ನು ಪರಿಶೀಲನೆ ನಡೆಸಿ, ಮಾಲೂರು ಪಟ್ಚಣದ ಪಶು ವೈದ್ಯ ಆಸ್ಪತ್ರೆಗೆ ಧಿಡೀರ್ ಭೇಟಿ ನೀಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ಮಾಲೂರು ತಾಲ್ಲೂಕಿನಲ್ಲಿ 957 ಜಾನುವಾರುಗಳಲ್ಲಿ ಚರ್ಮಗಂಟುರೋಗ ಕಂಡುಬಂದಿದೆ.

63 ರಾಸುಗಳು ಮೃತಪಟ್ಟಿವೆ. ಸೋಂಕು ಕಂಡು ಬಂದ ತಕ್ಷಣ ಲಸಿಕೆ, ಚಿಕಿತ್ಸೆ ಮತ್ತು ಮುಂಜಾಗ್ರತೆ ವಹಿಸಿ ಚರ್ಮಗಂಟು ರೋಗವನ್ನು ತಡೆಗಟ್ಟಲಾಗಿದೆ. ಕಾಲುಬಾಯಿ ರೋಗ, ಚರ್ಮಗಂಟು ರೋಗಕ್ಕೆ ಲಸಿಕೆ ನೀಡಲಾಗಿದೆ ಎಂದರು. ಚರ್ಮಗಂಟು ರೋಗವನ್ನು ಹತೋಟಿ ತರಲಾಗುತ್ತಿದೆ. ಯಾವುದೇ ಭಯ ಬೇಡ ಎಂದು ರೈತರಿಗೆ ಅಭಯ ನೀಡಿದರು.ಅಧಿಕಾರಿಗಳು ಚರ್ಮಗಂಟು ರೋಗ ಪತ್ತೆಯಾಗಿರುವ ಪ್ರದೇಶಗಳಿಗೆ ತೆರಳಿ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು. 

Kolar: ಹೃದಯ ಫೌಂಡೇಶನ್ ಸಂಸ್ಥೆಯಿಂದ ವಿದ್ಯಾರ್ಥಿನಿಯರಿಗಾಗಿ ಪಿಂಕ್ ರೂಂ ಸ್ಥಾಪನೆ

ಸಚಿವರಿಂದ ಅಧಿಕಾರಿಗಳಿಗೆ ತರಾಟೆ: ಪಶುವೈದ್ಯ ಆಸ್ಪತ್ರೆಯಲ್ಲಿ ಗೋದಾಮು ಪರಿಶೀಲಿಸಿದ ಸಚಿವರು, ಕೊಠಡಿಯಲ್ಲಿ ವಿದ್ಯುತ್ ವ್ಯವಸ್ಥೆ, ಸ್ವಚ್ಛತೆ ಕಾಪಾಡದಿರುವುದನ್ನು ಕಂಡು ಮಾಲೂರು ತಾಲ್ಲೂಕು ಸಹಾಯಕ ನಿರ್ದೇಶಕ ಡಾ.ನಾರಾಯಣಸ್ವಾಮಿ ಅವರ ಕಾರ್ಯವೈಖರಿ ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಗೋದಾಮಿನಲ್ಲಿ ವಿದ್ಯುತ್ ಅಳವಡಿಸಿ, ಗೋದಾಮಿನಲ್ಲಿ ಸ್ವಚ್ಛತೆ ಕಾಪಾಡಿ ಎಂದು ಸೂಚನೆ ನೀಡಿ, ಸರ್ಕಾರ ನೀಡುವ ಸಂಬಳಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಿ, ಇಲ್ಲದಿದ್ದರೇ ಜಾಗ ಖಾಲಿ ಮಾಡಿ ಎಂದು ತರಾಟೆ ತೆಗೆದುಕೊಂಡರು. ಪಶು ಆಸ್ಪತ್ರೆಗೆ ಕರೆತಂದಿದ್ದ ನಾಯಿಯೊಂದಕ್ಕೆ ಕೂಡಲೇ ತಪಾಸಣೆ ನಡೆಸಿ, ಚಿಕಿತ್ಸೆ ಕೊಡಿಸಿದರು. ಆ್ಯಂಬುಲೆನ್ಸ್ ಅಲ್ಲಿ ನಂಬರ್ ಪ್ಲೇಟ್ ಅಳವಡಿಸದಿರುವುದನ್ನು ಕಂಡು ಕೆಂಡಾಮಂಡಲರಾದರು.

ಗೋಶಾಲೆಗೆ ಭೇಟಿ: ಗಂಗಾಪುರದ ರಾಮಚಂದ್ರಪುರ ಮಠದ ಗೋಶಾಲೆಗೆ ಭೇಟಿ ನೀಡಿ, ಗೋವುಗಳ ಸಗಣಿ ಮತ್ತು ಗಂಜಲದಿಂದ ಉತ್ಪಾದನೆ ಮಾಡಲಾಗುತ್ತಿರುವ ಉತ್ಪನ್ನಗಳನ್ನು ಪರಿಶೀಲಿಸಿ, ಮುಂದಿನ ದಿನಗಳಲ್ಲಿ ರಾಜ್ಯದ ನೂರು ಗೋಶಾಲೆಗಳಲ್ಲಿ ಗೋವಿನ ಉಪ ಉತ್ಪನ್ನಗಳನ್ನು ಉತ್ಪಾದಿಸುವ ಆತ್ಮ ನಿರ್ಭರ ಗೋಶಾಲೆಗಳನ್ನಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ನಂತರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಸರ್ಕಾರಿ ಗೋಶಾಲೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ರಾಜ್ಯದಲ್ಲಿ ಅಶಾಂತಿಗೆ ಸಿದ್ದರಾಮಯ್ಯ ಕಾರಣ: ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ

ಸರ್ಕಾರಿ ಗೋಶಾಲೆಗೆ ಅಗತ್ಯವಿರುವ ಸೌಲಭ್ಯ ಒದಗಿಸಲಾಗುವುದು. ಗೋಶಾಲೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು ತಾಕೀತು ಮಾಡಿದರು. ಈ ಸಂದರ್ಭದಲ್ಲಿ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಜಿ.ಟಿ.ರಾಮಯ್ಯ, ಮಾಲೂರು ಪಶುವೈದ್ಯಾಧಿಕಾರಿ, ಕೆಜಿಎಫ್ ಪಶುಪಾಲನಾ ಸಹಾಯಕ ನಿರ್ದೇಶಕರಾದ ಡಾ.ರವಿಕುಮಾರ್, ಕೆಜಿಎಫ್ ತಹಸೀಲ್ದಾರ್ ಸುಜಾತಾ, ಡಾ. ಪ್ರವೀಣ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.