Asianet Suvarna News Asianet Suvarna News

ವರ್ಗಾವಣೆಗೆ 1 ಕೋಟಿ ರೂ. ಲಂಚ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಸಚಿವ

ಅಬಕಾರಿ ಸಚಿವ ಎಚ್.ನಾಗೇಶ್ ಲಂಚಕ್ಕಾಗಿ ವರ್ಗಾವಣೆ ದಂಧೆಯಲ್ಲಿ ತೊಡಗಿರುವ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸ್ವತಃ ಸಚಿವರೇ ಸ್ಪಷ್ಟನೆ ಕೊಟ್ಟಿದ್ದಾರೆ.

Minister Nagesh Clarification about excise officer daughter Files Bribe complaint rbj
Author
Bengaluru, First Published Dec 22, 2020, 10:32 PM IST

ಕೋಲಾರ, (ಡಿ. 22):  ಅಬಕಾರಿ ಇಲಾಖೆ ಅಧಿಕಾರಿಯನ್ನು ವರ್ಗಾವಣೆ ಮಾಡಲು ಸಚಿವ ನಾಗೇಶ್ ಅವರು 1 ಕೋಟಿ ರೂ ಲಂಚ ಕೇಳಿದ್ದಾರೆಂಬ ಆರೋಪ ಕೇಳಿಬಂದಿದೆ. ಈ  ಬಗ್ಗೆ ಅಧಿಕಾರಿಯ ಪುತ್ರಿಯೇ ಪ್ರಧಾನಿಮಂತ್ರಿ ಕಚೇರಿಗೆ ದೂರು ನೀಡಿದ್ದಾರೆ.

ಇನ್ನು ಈ ಬಗ್ಗೆ ಅಬಕಾರಿ ಸಚಿವ ನಾಗೇಶ್ ಪ್ರತಿಕ್ರಿಯಿಸಿದ್ದು,ನಾನು ಪ್ರಾಮಾಣಿಕ ಸಚಿವ. ಇಲಾಖೆಯಲ್ಲಿ ನಾನು ಭ್ರಷ್ಟಾಚಾರ ಮಾಡಿಲ್ಲ.  ನಾನು ಲಂಚ ತಗೆದುಕೊಂಡಿಲ್ಲ ಎಂದು ಎಲ್ಲಿ ಬೇಕಾದರು ಪ್ರಮಾಣ ಮಾಡುತ್ತೇನೆ. ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಸಚಿವರೊಬ್ಬರ ವಿರುದ್ಧ ಲಂಚ ಆರೋಪ: ಪ್ರಧಾನಿ ಕಚೇರಿಗೆ ದೂರು

ಯಾವೊಬ್ಬ ಅಧಿಕಾರಿಯೂ ವರ್ಗಾವಣೆಗಾಗಿ ನನ್ನನ್ನು ಸಂರ್ಪಸಿಲ್ಲ. ವರ್ಗಾವಣೆಗಾಗಿ ಯಾರಿಂದಲೂ ಲಂಚ ಪಡೆದಿಲ್ಲ. ಸುಳ್ಳು ಸುದ್ದಿ ಹಬ್ಬಿಸಿರುವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದರು.

ಪ್ರಕರಣದ ಹಿನ್ನೆಲೆ
ಹೊಸಪೇಟೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಬಕಾರಿ ಅಧಿಕಾರಿಯೊಬ್ಬರು ಅನಾರೋಗ್ಯ ಹಿನ್ನೆಲೆಯಿಂದ ಬೆಂಗಳೂರಲ್ಲಿ ಖಾಲಿ ಇರುವ ಜಂಟಿ ಆಯುಕ್ತರ ಹುದ್ದೆಗೆ ನಿಯೋಜಿಸಲು ಸಚಿವರ ಬಳಿ ಮನವಿ ಮಾಡಿದ್ದಾರೆ. ಇದಕ್ಕೆ ಅಬಕಾರಿ ಸಚಿವ ನಾಗೇಶ್ ವರ್ಗಾವಣೆ ಮಾಡಲು ಒಂದು ಕೋಟಿ ರೂಪಾಯಿ ಲಂಚ ಕೇಳಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೆ ಅಬಕಾರಿ ಇಲಾಖೆಯಲ್ಲಿ ದಲ್ಲಾಳಿಗಳನ್ನು ಇರಿಸಿ ವರ್ಗಾವಣೆಯಲ್ಲಿ ಲಂಚ ವಸೂಲಿ ಮಾಡುತ್ತಿದ್ದಾರೆ ಎಂದು ಅಧಿಕಾರಿಯ ಪುತ್ರಿ ದೂರಿನಲ್ಲಿ ಆರೋಪ ಮಾಡಿದ್ದಾಳೆ. ಈ ಬಗ್ಗೆ ಪ್ರಧಾನಿ ಕಚೇರಿಯಲ್ಲಿ POWPU/E/2020/0655623 ಸಂಖ್ಯೆಯಲ್ಲಿ ದೂರು ದಾಖಲಾಗಿದೆ.

ರಾಜ್ಯ ಸರ್ಕಾರದ ಇ-ಜನ ಸ್ಪಂದನ ಮನವಿಯು 51868298 ಈ ಸಂಖ್ಯೆಯಲ್ಲಿ ದಾಖಲಾಗಿದೆ. ಅಧಿಕಾರಿಯ ಪುತ್ರಿಯ ಈ ಕಾರ್ಯದಿಂದಾಗಿ ಭ್ರಷ್ಟಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದು ಮುಂದಿನ ದಿನಗಳಲ್ಲಿ ಯಾವ ಹಂತ ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

Follow Us:
Download App:
  • android
  • ios