Asianet Suvarna News Asianet Suvarna News

ಹೃದಯ ಗೆದ್ದ ಸರ್ಕಾರದ ವಿರುದ್ಧ ಕುತಂತ್ರ, ಜನಾದೇಶ ಧಿಕ್ಕರಿಸಲು ದೋಸ್ತಿ ಪಕ್ಷಗಳ ಯತ್ನ: ಚಲುವರಾಯಸ್ವಾಮಿ

ಕಾಂಗ್ರೆಸ್‌ನ ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದ ಜನಪ್ರಿಯತೆ ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗತೊಡಗಿದೆ. ಕಾಂಗ್ರೆಸ್ ಪಕ್ಷದ ಯೋಜನೆಗಳು ಮನೆ ಮಾತಾಗುತ್ತಿದ್ದು ಪಕ್ಷದ ಪ್ರಖರತೆ ಹೆಚ್ಚಾಗುತ್ತಿರುವುದನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು ಹೇಗಾದರೂ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರಕ್ಕೆ ಯತ್ನಿಸಲಾರಂಭಿಸಿವೆ. 

minister n chaluvarayaswamy slams karnataka bjp leaders grg
Author
First Published Aug 22, 2024, 12:31 PM IST | Last Updated Aug 22, 2024, 12:31 PM IST

ಬೆಂಗಳೂರು(ಆ.22):  ಬಿಜೆಪಿಯ ದುರಾಡಳಿತ, ಸ್ವಜನ ಪಕ್ಷಪಾತದಿಂದ ಬೇಸತ್ತ ಕರ್ನಾಟಕ ರಾಜ್ಯದ ಜನತೆ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿ ಉತ್ತಮ ಆಡಳಿತ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ.

ಸಂವಿಧಾನದ ಉಳಿವು ಹಾಗೂ ಬಡವರು, ದೀನದಲಿತರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಪಂಚಗ್ಯಾರಂಟಿಗಳನ್ನು ನೀಡಿತ್ತು. ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಚುನಾವಣೆಯಲ್ಲಿ ಜನರಿಗೆ ನೀಡಿದ್ದ ವಾಗ್ದಾನದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಗೆದ್ದಿದೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿದ ಬಿಜೆಪಿ ತನ್ನ ಪ್ರಣಾಳಿಕೆಯಲ್ಲೂ ಕಾಂಗ್ರೆಸ್‌ನ ಗ್ಯಾರಂಟಿ ನೀಡಿದ್ದು ಮಾತ್ರವಲ್ಲದೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕಾಂಗ್ರೆಸ್‌ನ ಕೆಲವು ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಕಾಂಗ್ರೆಸ್ ಹಾದಿಯನ್ನು ಅನುಕರಿಸಲಾರಂಭಿಸಿದೆ.

ಜೆಡಿಎಸ್‌ ಯಾರನ್ನೂ ನೆಮ್ಮದಿಯಿಂದ ಇರಲು ಬಿಡಲ್ಲ: ಚಲುವರಾಯಸ್ವಾಮಿ

ಕಾಂಗ್ರೆಸ್‌ನ ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದ ಜನಪ್ರಿಯತೆ ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗತೊಡಗಿದೆ. ಕಾಂಗ್ರೆಸ್ ಪಕ್ಷದ ಯೋಜನೆಗಳು ಮನೆ ಮಾತಾಗುತ್ತಿದ್ದು ಪಕ್ಷದ ಪ್ರಖರತೆ ಹೆಚ್ಚಾಗುತ್ತಿರುವುದನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು ಹೇಗಾದರೂ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರಕ್ಕೆ ಯತ್ನಿಸಲಾರಂಭಿಸಿವೆ. ಬಡವರ ಕಾರ್ಯಕ್ರಮಗಳಿಗೆ ಎಳ್ಳುನೀರು ಬಿಡುವುದರ ಜೊತೆಗೆ ಜನಾದೇಶವನ್ನು ಧಿಕ್ಕರಿಸುವ ಕಾರ್ಯಕ್ಕೆ ಮೈತ್ರಿ ಪಕ್ಷಗಳು ಮುಂದಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ. ಸಂವಿಧಾನವನ್ನು ಉಳಿಸಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕೆಲಸವನ್ನು ಕನ್ನಡಿಗರು ಮಾಡಬೇಕಾಗಿದೆ.

ಮತದಾರರಿಗೆ ಗೌರ್ನರ್‌ ಅವಮಾನ

ಪ್ರಾಮಾಣಿಕ ಮತ್ತು ಜನಪರ ಸರ್ಕಾರವನ್ನು ಮುನ್ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನೀಡಿರುವ ಸುಳ್ಳು ದೂರನ್ನು ಆಧರಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು 136 ಜನ ಶಾಸಕರನ್ನು ಆಯ್ಕೆ ಮಾಡಿದ 1,67,89,305 ಮತದಾರರಿಗೆ ಮಾಡುತ್ತಿರುವ ಅವಮಾನ ಮಾತ್ರವಲ್ಲದೆ ಸಂವಿಧಾನಬಾಹಿರ ಕೃತ್ಯವಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಶೇ.42.88 ಮತಗಳ ಬೆಂಬಲದೊಂದಿಗೆ ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರವನ್ನು ವಿಧಾನಸೌಧದಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಹಾಗೆಯೇ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಶೇ.45.43 ಮತಗಳನ್ನು ನೀಡುವ ಮೂಲಕ 9 ಸ್ಥಾನ ನೀಡಿ 1,75,54,381 ಮತಗಳನ್ನು ನೀಡುವ ಮೂಲಕ ವಿಧಾನಸಭೆ ಚುನಾವಣೆಗಿಂತ ಶೇ.3 ಅಧಿಕ ಬೆಂಬಲವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದಾರೆ. ಇದು ಕಾಂಗ್ರೆಸ್ ಯೋಜನೆಗಳಿಗೆ ಸಿಕ್ಕಿರುವ ಜನಮನ್ನಣೆಗೆ ಸಾಕ್ಷಿಯಾಗಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ನೀಡಿದ್ದ ವಾಗ್ದಾನದಂತೆ ಭರವಸೆಗಳನ್ನು ಜಾರಿಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ

5 ಗ್ಯಾರಂಟಿಗಳಿಂದ ಒಟ್ಟಾರೆ 4.40 ಕೋಟಿ ಫಲಾನುಭವಿಗಳಿದ್ದು ಬಿಜೆಪಿ ಮತ್ತು ಜೆಡಿಎಸ್‌ನ ಕಾರ್ಯಕರ್ತರು ಸೇರಿ ಅದರ ವಿವರಗಳು ಇಂತಿವೆ.

1. ಗೃಹಜ್ಯೋತಿ ಯೋಜನೆಯಿಂದ ರಾಜ್ಯದ 1.67 ಕೋಟಿ ಕುಟುಂಬಗಳು 200 ಯುನಿಟ್‌ವರೆಗಿನ ಉಚಿತ ವಿದ್ಯುತ್‌ನ ಪ್ರಯೋಜನ ಪಡೆಯುತ್ತಿವೆ.
2. ಗೃಹಲಕ್ಷ್ಮಿ ಯೋಜನೆಯಿಂದ 1.21 ಕೋಟಿ ಕುಟುಂಬದ ಯಜಮಾನಿಯರಿಗೆ ಪ್ರತಿ ತಿಂಗಳು 2 ಸಾವಿರ ರು. ನೀಡಲಾಗುತ್ತಿದೆ.
3. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣದ ಸೌಕರ್ಯ ಕಲ್ಪಿಸುವ ಮೂಲಕ 272 ಕೋಟಿಗೂ ಅಧಿಕ ಟ್ರಿಪ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ.
4. ಅನ್ನಭಾಗ್ಯ ಯೋಜನೆಯಲ್ಲಿ 1.20 ಕೋಟಿ ಕಾರ್ಡ್‌ಗಳ ಮೂಲಕ 4 ಕೋಟಿಗೂ ಅಧಿಕ ಜನರು ಪ್ರಯೋಜನ ಪಡೆಯುತ್ತಿದ್ದಾರೆ.
5. ಯುವ ನಿಧಿ ಯೋಜನೆ ಮೂಲಕ ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಪದವೀಧರರಿಗೆ ತಲಾ 3000/1500 ರು.ನಂತೆ 1.20 ಲಕ್ಷ ಜನರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.
ಇಂತಹ ಜನಪರ, ಬಡವರಪರ ಇರುವ ಸರ್ಕಾರದ ಜನಪ್ರಿಯತೆಯನ್ನು ಸಹಿಸದಿರುವ ಮೈತ್ರಿ ಪಕ್ಷಗಳು ಕುತಂತ್ರದಿಂದ ರಾಜ್ಯಪಾಲರ ಮೂಲಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಕಿರುಕುಳ ನೀಡುತ್ತಿವೆ.

ವಿಪಕ್ಷಗಳು ಬರ ಪರಿಹಾರ ಕೇಳಲಿಲ್ಲ

ಕಳೆದ ವರ್ಷ ರಾಜ್ಯದಲ್ಲಿ 223 ತಾಲೂಕುಗಳಲ್ಲಿ ಭೀಕರ ಬರ ಆವರಿಸಿತ್ತು. ಕೇಂದ್ರ ತಂಡ ಬಂದು ಪರಿಶೀಲಿಸಿ ಹೋಯಿತೇ ಹೊರತು ಸೂಕ್ತ ಸಮಯದಲ್ಲಿ ರಾಜ್ಯಕ್ಕೆ ನೀಡಬೇಕಿದ್ದ ಬರ ಪರಿಹಾರದ ಹಣವನ್ನು ಕೇಂದ್ರ ನೀಡಲಿಲ್ಲ. 18,500 ಕೋಟಿ ರು. ಪರಿಹಾರ ಹಣವನ್ನು ಸುಮಾರು 35 ಲಕ್ಷ ರೈತರಿಗೆ ನೀಡಬೇಕೆಂದು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಕಂದಾಯ, ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ನಾನು ಮೂರು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೂ ಒಂದು ನಯಾಪೈಸೆ ಬಿಡುಗಡೆ ಮಾಡಲಿಲ್ಲ. ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಅಲ್ಪ ಪರಿಹಾರ ನೀಡಲಾಯಿತು. ಈ ಬಗ್ಗೆ ಮೈತ್ರಿ ಪಕ್ಷದವರು ಒಮ್ಮೆಯೂ ಪ್ರಧಾನಿಯವರನ್ನು ಕೇಳಲಿಲ್ಲ, ಸಂಸತ್ತಿನಲ್ಲಿ ಕೂಡ ದನಿ ಎತ್ತಲಿಲ್ಲ.

ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಸ್ಪಂದನೆ ಇಲ್ಲ. ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಕರ್ನಾಟಕ ರಾಜ್ಯಕ್ಕೆ ನ್ಯಾಯಯುತವಾಗಿ ದೊರಕಬೇಕಾದ ಅನುದಾನ ದೊರೆಯಲಿಲ್ಲ. ಈ ಬಗ್ಗೆಯೂ ಮೈತ್ರಿ ನಾಯಕರು ಸೊಲ್ಲೆತ್ತೆಲಿಲ್ಲ. ಆದರೂ ಸಹ ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ 58 ಸಾವಿರ ಕೋಟಿ ರು. ಅನುದಾನವನ್ನು ಮೀಸಲಿಟ್ಟಿದೆ. ಅಭಿವೃದ್ಧಿಗಾಗಿ 1.20 ಲಕ್ಷ ಕೋಟಿ ರು. ಅನುದಾನವನ್ನು ಆಯವ್ಯಯದಲ್ಲಿ ತೆಗೆದಿರಿಸಿದೆ. ಇಷ್ಟಾದರೂ ಸುಖಾಸುಮ್ಮನೆ ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ಅಪಪ್ರಚಾರ ನಡೆಸುತ್ತಾ ಮೈತ್ರಿ ಪಕ್ಷಗಳು ಬೊಬ್ಬೆ ಹೊಡೆಯುತ್ತಿವೆ.

ಸರ್ಕಾರ ಕೆಡವಲು ವಿಪಕ್ಷ ಯತ್ನ

ರಾಜ್ಯ ಸರ್ಕಾರ ಜನರ ಹೃದಯ ಗೆದ್ದಿರುವುದನ್ನು ವಿರೋಧ ಪಕ್ಷಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜನರ ಮನಗೆದ್ದು ಜನಾಶೀರ್ವಾದದೊಂದಿಗೆ ಸರ್ಕಾರ ರಚಿಸಲು ಸಾಧ್ಯವಾಗದ ಮೈತ್ರಿ ನಾಯಕರು ಜನರ ತೀರ್ಪಿಗೆ ವಿರುದ್ಧವಾಗಿ ಸರ್ಕಾರ ಕೆಡವಲು ಯತ್ನಿಸುತ್ತಿದ್ದಾರೆ.

ರಾಜ್ಯಪಾಲರನ್ನು ಮೈತ್ರಿ ನಾಯಕರು ತಮ್ಮ ದಾಳಕ್ಕೆ ತಕ್ಕಹಾಗೆ ಕುಣಿಯುವ ಹಾಗೆ ಮಾಡುತ್ತಿದ್ದಾರೆ. ರಾಜ್ಯಪಾಲರ ಹುದ್ದೆ ಸಾಂವಿಧಾನಿಕವಾದುದು. ಅದರ ಗೌರವ ಉಳಿಸುವ ಹಾಗೆ ಕಾರ್ಯನಿರ್ವಹಿಸಬೇಕು. ಆದರೆ ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಐಟಿ, ಇ.ಡಿ, ಸಿಬಿಐ, ರಾಜ್ಯಪಾಲರನ್ನು ಬಳಸಿಕೊಂಡು ಬಿಜೆಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ.
ಕೇರಳ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ದೆಹಲಿ, ಅರುಣಾಚಲ ಪ್ರದೇಶ… ಈಗ ಕರ್ನಾಟಕ ರಾಜ್ಯದಲ್ಲಿ ರಾಜ್ಯಪಾಲರನ್ನು ದಾಳವಾಗಿಸಿಕೊಂಡು ಕಾನೂನುಬಾಹಿರವಾಗಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರವಾಗಿದೆ.

ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರಿಗೆ ಮರ್ಯಾದೆಯೇ ಇಲ್ಲ: ಸಚಿವ ಚಲುವರಾಯಸ್ವಾಮಿ

ಪ್ರಾಸಿಕ್ಯೂಷನ್‌ ರಾಜಕೀಯ ಪ್ರೇರಿತ

ಬಿಜೆಪಿ ಮತ್ತು ಜೆಡಿಎಸ್ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ರಾಜ್ಯದ ಪ್ರಜ್ಞಾವಂತ ಜನರು ಗಮನಿಸುತ್ತಿದ್ದು ಮುಂದಿನ ದಿನಗಳಲ್ಲಿ ಮೈತ್ರಿ ಪಕ್ಷಗಳಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ. ಮೈತ್ರಿ ನಾಯಕರು ಹಾಗೂ ರಾಜ್ಯಪಾಲರ ಪ್ರಯತ್ನ ಕರ್ನಾಟಕದಲ್ಲಿ ಯಶಸ್ವಿಯಾಗುವುದಿಲ್ಲ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಯಾವುದೇ ಸ್ಪಷ್ಟ ವಿವರಣೆ ನೀಡದೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ರಾಜಕೀಯ ಪ್ರೇರಿತವೇ ಹೊರತು ಇದರಲ್ಲಿ ಯಾವುದೇ ಸತ್ಯಾಸತ್ಯತೆ ಇಲ್ಲ.

ಸಂವಿಧಾನ ಹಾಗೂ ನ್ಯಾಯಾಂಗದ ಮೇಲೆ ಕಾಂಗ್ರೆಸ್‌ಗೆ ಸಂಪೂರ್ಣ ನಂಬಿಕೆಯಿದ್ದು ನಮಗೆ ನ್ಯಾಯಾಲಯದಲ್ಲಿ ಜಯ ಸಿಗಲಿದೆ ಎಂಬ ಅಚಲ ವಿಶ್ವಾಸವಿದೆ. ಕಾನೂನು ಹೋರಾಟದಲ್ಲಿ ಗೆಲುವ ಸಿಗುವ ನಂಬಿಕೆಯಿದ್ದು ಮೈತ್ರಿ ನಾಯಕರಿಗೆ ನ್ಯಾಯಾಲಯದಲ್ಲಿ ಮತ್ತೊಮ್ಮೆ ಹಿನ್ನಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Latest Videos
Follow Us:
Download App:
  • android
  • ios