ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿಕೊಂಡ ಸಚಿವರು, ರಾತ್ರೋರಾತ್ರಿ ಬದಲಾವಣೆ ಅಸಾಧ್ಯವೆಂದರೂ, ಕಠಿಣ ಕ್ರಮಗಳ ಮೂಲಕ ಸುಧಾರಣೆ ತರುವ ಭರವಸೆ ನೀಡಿದ್ದಾರೆ. ಇದೇ ವೇಳೆ, ಸಚಿವ ರಾಮಲಿಂಗಾ ರೆಡ್ಡಿ ಅವರ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿ, ಸಹಕಾರ ಕೋರುವುದಾಗಿ ತಿಳಿಸಿದ್ದಾರೆ.
ಬೆಂಗಳೂರು (ಜೂ.5): ಬೆಂಗಳೂರನ್ನು ರಾತ್ರೋರಾತ್ರಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಈ ಮಾತನ್ನು ನಾನು ಆರಂಭದಲ್ಲೇ ಹೇಳುತ್ತಿದ್ದೇನೆ ಈಗಲೂ ಹೇಳುತ್ತೇನೆ ಓವರ್ ನೈಟ್ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಹೇಳಿದರು.
ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿಕೊಂಡ ಹಿನ್ನೆಲೆ ಬೆಂಗಳೂರು ನಗರಾಭಿವೃದ್ಧಿಗೆ ಸಂಬಂಧಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪಕ್ಷ ಯೋಚನೆ ಮಾಡಿಯೇ ನನಗೆ ಈ ಜವಾಬ್ದಾರಿ ನೀಡಿದೆ. ಪಕ್ಷದ ಯೋಚನೆ ಜೊತೆಗೆ ಜನರ ನಿರೀಕ್ಷೆಯೂ ಬಹಳ ಇದೆ. ಬೆಂಗಳೂರಿಗೆ ಲಾಂಗ್ ಪೀರಿಯಡ್ಗೆ ಬೇಕಾದ ಭದ್ರ ಬುನಾದಿಯನ್ನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಕಿದ್ದಾರೆ ಎಂದರು.
ರಾಮಲಿಂಗಾ ರೆಡ್ಡಿ ರಾಜೀನಾಮೆ?
ಇನ್ನು ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಕೈತಪ್ಪಿದ್ದು ಇಂದು ಅಧಿಕೃತವಾಗಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈ ಹಿನ್ನೆಲೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಮಲಿಂಗ ರೆಡ್ಡಿ ಅವರು ನಮ್ಮ ಲೀಡರ್, ನನಗೆ ಈ ಖಾತೆ ಸಿಎಂ ಮತ್ತು ಪಕ್ಷ ನೀಡಿದೆ. ನಾನು ರಾಮಲಿಂಗಾ ರೆಡ್ಡಿ ಅವರ ಸಹಕಾರ ಕೇಳುತ್ತೇನೆ. ಪಕ್ಷದ ಹೈಕಮಾಂಡ್ ರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡುತ್ತಾರೆ. ಅವರ ಬಗ್ಗೆ ನಮಗೆ ಗೌರವ ಇದೆ. ಜನರ ಹಿತದೃಷ್ಟಿಯಿಂದ ನಾವು ಕುಳಿತು ಮಾತಾಡಿ ಸರಿ ಮಾಡಿಕೊಂಡು ಹೋಗಬೇಕು ಎಂದರು.
ಬೆಂಗಳೂರು ನಗರಾಭಿವೃದ್ಧಿಗೆ ನಾನು ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ. ಸುಧಾರಣೆ ಆಗಬೇಕು. ಸುಧಾರಣೆ ಆಗಬೇಕು ಎಂದರೆ ಆರಂಭದಲ್ಲಿ ಕಷ್ಟ ಆಗಬಹುದು. ಹೊಸ ಕಾನೂನಗಳೇನು ತರೋಲ್ಲ. ಇರುವ ಕಾನೂನನ್ನೇ ಬಿಗಿ ಮಾಡಬೇಕು. ಹಾಗೇ ಮಾಡದೆ ಇದ್ದರೆ, ಕಠಿಣ ನಿರ್ಣಯ ತೆಗೆದುಕೊಳ್ಳದಿದ್ದರೆ ತಪ್ಪಿನಲ್ಲೇ ಜೀವನ ಮಾಡಬೇಕಾಗುತ್ತೆ ಎಂದರು.


