ತೀವ್ರ ಬೇಸರಗೊಂಡಿರುವ ಸಚಿವ ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನನಗೆ ಕೊಡ್ತೇನೆ ಎಂದು ಕಿತ್ತುಕೊಂಡಿದ್ದಾರೆ. ಇದು ನನಗೆ ತೀವ್ರ ಬೇಸರ ತರಿಸಿದೆ. ಯಾವುದೇ ಮಾತುಕತೆಗೆ ನಾನು ಮಣಿಯುವುದಿಲ್ಲ ಎಂದಿದ್ದಾರೆ. 

ಬೆಂಗಳೂರು (ಜೂ.05) ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ಸಾಧ್ಯವಾಗಲ್ಲ. ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತು ಕೊಟ್ಟಿದ್ದರು. ಖಾತೆ ವಿಚಾರವಾಗಿ ಅಲ್ಲ, ನನಗೆ ತೀವ್ರ ಬೇಸರವಾಗಿದೆ. ಎಷ್ಟು ಎಂದು ನಾನು ಸಹಿಸಿಕೊಳ್ಳಲಿ. ಹೀಗಾಗಿ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಮಲಿಂಗಾ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಪುಟದಲ್ಲಿ ಖಾತೆ ಹಂಚಿಕೆಯಾದ ಮರುದಿನವೇ ವಿಕೆಟ್ ಪತನಗೊಂಡಿದೆ. ನಾನು ಖಾತೆಗಾಗಿ ರಾಜೀನಾಮೆ ಕೊಡ್ತಾಯಿಲ್ಲ ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಯಾಕೆ ರಾಜೀನಾಮೆ ಕೊಡ್ತಾಯಿದ್ದೇನೆ ಅಂತಾ ಮಾಧ್ಯಮದ ಮುಂದೆ ಬಂದು ಹೇಳ್ತಾಯಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಯಾರ ಬಳಿಯೂ ಮಾತನಾಡಿಲ್ಲ. ನನ್ನ ಮನೆಯಲ್ಲೂ ಯಾರಿಗೂ ಗೊತ್ತಿಲ್ಲ. ಈ ವಿಚಾರದಲ್ಲಿ ಚರ್ಚೆಯ ಅವಶ್ಯಕತೆ ಇಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಶಾಸಕನಾಗಿ ಮುಂದುವರೆಯುತ್ತೇನೆ

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ. ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಮೊನ್ನೆ ಕೂಡ ಪ್ರಮಾಣ ವಚನಕ್ಕೂ ಮುನ್ನ ಡಿಕೆಶಿ ಅವರನ್ನ ಭೇಟಿಯಾಗಿದ್ದೆ. ಆಗಲೂ ಕೂಡಾ ಬೆಂಗಳೂರು ನಗರಾಭಿವೃದ್ಧಿ ನಿನ್ನಗೆ ಕೊಡ್ತೇನೆ ಎಂದಿದ್ದರು. ಆದರೀಗ ಜಲಸಂಪನ್ಮೂಲ ಕೊಟ್ಟಿದ್ದಾರೆ ನಮ್ಮ ಆತ್ಮಸಾಕ್ಷಿಯಾಗಿ ಕೆಲಸ ಮಾಡಲು ಆಗಲ್ಲ. ಹೀಗಾಗಿ ರಾಜೀನಾಮೆ ನೀಡ್ತಾಯಿದ್ದೇನೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಕೈಯಲ್ಲಿ ಹೋಗಿ ರಾಜೀನಾಮೆ ಕೊಟ್ಟಬರಲು ನನ್ನಗೆ ಇಷ್ಟ ಇಲ್ಲ. ಸಿಎಂ ಕಾರ್ಯದರ್ಶಿ ತುಷಾರ್ ಗಿರಿನಾಥ್ ಗೆ ನಮ್ಮ ಆಫೀಸ್ ನವರು ಕೊಟ್ಟು ಬರ್ತಾರೆ ಎಂದಿದ್ದಾರೆ.

ಕರ್ನಾಟಕ ಸರ್ಕಾರದಲ್ಲಿ ಎಲ್ಲಾ ಖಾತೆಗಳಲ್ಲಿ ಕೆಲಸ ಮಾಡಿದ್ದೇನೆ. ಎಸ್.ಎಂ ಕೃಷ್ಣ ಅವರು ತಮ್ಮ ಸಂಪುಟದಲ್ಲಿ ಒಂದೇ ವರ್ಷ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಿದ್ದರು. ಎಲ್ಲಾ ಖಾತೆಗಳಲ್ಲಿ ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ. ಆದರೆ ಕಳೆದ ಎರಡು ಬಾರಿ ನನಗೆ ನೀಡಿದ್ದ ಮಾತು ತಪ್ಪಿದ್ದಾರೆ. ಪ್ರತಿ ಬಾರಿ ಈ ರೀತಿ ಆದಾಗ ಬೇಸರ ಆಗುತ್ತದೆ. ನಾನು ಇದೇ ಖಾತೆ ಬೇಕು ಎಂದು ಕೇಳಿಲ್ಲ. ಮೊದಲು ಹೇಳಿ ಬಳಿಕ ಬದಲಾಯಿಸಿದ್ದಾರೆ. ಇದು ಬೇಸರ ತಂದಿದೆ ಎಂದಿದ್ದಾರೆ.