ಯಾರೋ ಕೂಗಿದ ಕೂಡಲೇ ರಾಜಕಾರಣದಲ್ಲಿ ಬದಲಾವಣೆ ಆಗಿಬಿಡುತ್ತಾ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರಶ್ನಿಸಿದರು. ಮುಂದಿನ ಸಿಎಂ ಡಿಕೆಶಿ ಎಂದು ಸಿದ್ದರಾಮಯ್ಯ ಎದುರು ಕೂಗಿದ್ದು ಸಿದ್ದರಾಮಯ್ಯಗೆ ಅವಮಾನ ಆಗಿದೆ.
ವಿಜಯಪುರ (ಜ.23): ಯಾರೋ ಕೂಗಿದ ಕೂಡಲೇ ರಾಜಕಾರಣದಲ್ಲಿ ಬದಲಾವಣೆ ಆಗಿಬಿಡುತ್ತಾ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರಶ್ನಿಸಿದರು. ಮುಂದಿನ ಸಿಎಂ ಡಿಕೆಶಿ ಎಂದು ಸಿದ್ದರಾಮಯ್ಯ ಎದುರು ಕೂಗಿದ್ದು ಸಿದ್ದರಾಮಯ್ಯಗೆ ಅವಮಾನ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿಕೆಗೆ ಸಂಬಂಧಿಸಿದಂತೆ ನಗರದಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿ ತಿರುಗೇಟು ನೀಡಿದರು. ಅಲ್ಲಿ ಒಂದೂವರೆ ಲಕ್ಷಾಂತರ ಜನ ಸೇರಿದ್ದರು. ಯಾರೋ ಕೂಗಿಬಿಡುತ್ತಾರೆ. ಅದರಿಂದ ಬದಲಾಗುತ್ತಾ? ಸಿದ್ದರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ ಇದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಒಂದು ರೀತಿ ನೀತಿ ಇದೆ. ಸಿಎಂ, ಡಿಸಿಎಂ, ಸಚಿವರಾಗಿ ಯಾರನ್ನು ಮಾಡಬೇಕು, ಯಾರನ್ನು ಬದಲಾವಣೆ ಮಾಡಬೇಕು ಅಂತ ತೀರ್ಮಾನಿಸೋದು ಹೈಕಮಾಂಡ್. ಯಾರೋ ನಾಲ್ಕು ಜನ ಕೂಗಿದ್ರೆ, ಅವರು ಅವರವರ ಅಭಿಮಾನಕ್ಕೆ ಕೂಗುತ್ತಾರೆ ಎಂದು ಸ್ಪಷ್ಟೀಕರಣ ನೀಡಿದರು. ರಾಜ್ಯದಲ್ಲಿ ಪವರ್ ಶೇರಿಂಗ್ ಇದ್ಯಾ ಎನ್ನುವ ವಿಚಾರಕ್ಕೆ ಉತ್ತರಿಸಿದ ಅವರು, ಅದರ ಬಗ್ಗೆ ನನಗೆ ಗೊತ್ತಿಲ್ಲ, ಹೈಕಮಾಂಡ್ ಕೇಳಿ. ಹೈಕಮಾಂಡ್ ಏನಾದರೂ ಪವರ್ ಶೇರಿಂಗ್ ಬಗ್ಗೆ ಹೇಳಿದ್ಯಾ? ಇದು ಆಗಾಗ ಬರುತ್ತಿರುತ್ತೆ. ಸುರ್ಜೇವಾಲಾ, ವೇಣುಗೋಪಾಲ, ಖರ್ಗೆ ಅವರು ನಿನ್ನೆ ಬಂದಿದ್ದರು. ಅವರನ್ನೇ ಕೇಳಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಈ ಬಾರಿ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇರಲ್ಲ: ಸಚಿವ ಕೆ.ಜೆ.ಜಾರ್ಜ್
ಮಲ್ಲಿಕಾರ್ಜುನ ಖರ್ಗೆ ಅವರ ತ್ಯಾಗದ ಮಾತು ಕುರಿತಾಗಿ ಪ್ರತಿಕ್ರಿಯಿಸಿ, ತ್ಯಾಗದ ಮನೋಭಾವ ಕಾಂಗ್ರೆಸ್ನಲ್ಲಿ ಮೊದಲಿನಿಂದಲೂ ಇದೆ. ಸ್ವಾತಂತ್ರ್ಯ ಹೋರಾಟದಲ್ಲಿ ಅಧಿಕಾರ ಬರುತ್ತೆ ಅಂತ ಕಾಂಗ್ರೆಸ್ನವರು ಹೋರಾಟ ಮಾಡಲಿಲ್ಲ. ತ್ಯಾಗ ಬಲಿದಾನ ಮಾಡಿದ್ದಾರೆ. ಇಂದಿರಾಗಾಂಧಿ ತ್ಯಾಗ ಮಾಡಲಿಲ್ವಾ? ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಪ್ರಧಾನಿ ಮಂತ್ರಿ ಹುದ್ದೆ ಬಿಟ್ಟು ಕೊಡಲಿಲ್ವಾ ಎಂದು ಪ್ರಶ್ನಿಸಿದರು. ನಾನು ಎಷ್ಟೇ ಮಾತನಾಡಿದರೂ ನಿಮಗೆ ಕಾಂಟ್ರವರ್ಸಿ (ವಿವಾದ) ಬೇಕು. ನಾಳೆ, ಈಗಿನಿಂದಲೇ ಬ್ರೇಕಿಂಗ್ ನ್ಯೂಸ್ ಬೇಕು. ಮಾಧ್ಯಮಗಳದ್ದು ತಪ್ಪಲ್ಲ, ನ್ಯೂಸ್ ಬೇಕಲ್ವಾ ಎಂದು ಸಚಿವ ಜಾರ್ಜ್ ನಕ್ಕರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಾರು ಅಪಘಾತ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಕಾರು ಬಳಸಿ ಕೋಟ್ಯಂತರ ಹಣ ಸಾಗಿಸುತ್ತಿದ್ದರು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಅವರು, ಮೊದಲು ಚಲವಾದಿ ನಾರಾಯಣಸ್ವಾಮಿ ಯಾವ ಪಕ್ಷದಲ್ಲಿದ್ರು? ನಾರಾಯಣಸ್ವಾಮಿ ನನಗೆ ಬಹಳ ಚೆನ್ನಾಗಿ ಗೊತ್ತು. ಕಾಂಗ್ರೆಸ್ನಲ್ಲಿದ್ದವರು ಈಗ ಬಿಜೆಪಿಗೆ ಹೋಗಿದ್ದಾರೆ. ಅವರು (ಬಿಜೆಪಿಯವರು) ಏನೆಲ್ಲಾ ಪ್ರಶ್ನೆ ಕೇಳಬೇಕು ಅಂತ ಬರೆದುಕೊಡ್ತಾರೆ. ಅದನ್ನು ಇವರು ಕೇಳ್ತಾರೆ. ಅವರು ಕಾಂಗ್ರೆಸ್ ಪಕ್ಷದಲ್ಲಿದ್ದವರು ತಾನೆ? ಲಕ್ಷ್ಮೀ ಹೆಬ್ಬಾಳ್ಕರ ಸಚಿವರು, ಲೀಡರ್. ಕಾರಿನಲ್ಲಿ ಕುಳಿತುಕೊಂಡು ದುಡ್ಡು ಸಾಗಿಸಬೇಕಾ?. ಓರ್ವ ಮಿನಿಸ್ಟರ್ ಅಪಘಾತವಾಗಿದ್ದಾಗ ಸಹಾನುಭೂತಿ ತೋರಿಸೋದು ಬಿಟ್ಟು ಇದೆಲ್ಲಾ ಯಾವ ರಾಜಕಾರಣ ಅಂತ ನನಗೆ ಗೊತ್ತಾಗ್ತಿಲ್ಲ ಎಂದರು.
ಹೆಚ್ಚುವರಿ ಎರಡು ಗಂಟೆ ವಿದ್ಯುತ್ ಪೂರೈಕೆಗೆ ಪ್ರಸ್ತಾವನೆ ಸಲ್ಲಿಸಿ: ಸಚಿವ ಕೆ.ಜೆ.ಜಾರ್ಜ್
ಗೃಹಜೋತಿ ಯೋಜನೆ ಎಲ್ಲರಿಗೂ ಕೊಡಲಿಕ್ಕೆ ಸಾಧ್ಯವಿಲ್ಲ!: ರಾಜ್ಯದಲ್ಲಿ 2 ಕೋಟಿ 62 ಲಕ್ಷ ಗೃಹಜ್ಯೋತಿ ಗ್ರಾಹಕರಿದ್ದಾರೆ. ರಿವೈಸ್ ಬಗ್ಗೆ ಬೇಡಿಕೆ ಬಂದರೆ ಕ್ಯಾಬಿನೆಟ್ನಲ್ಲಿಟ್ಟು ಚರ್ಚೆ ಮಾಡುತ್ತೇವೆ. ಪ್ರತಿಯೊಂದು ಕುಟುಂಬಕ್ಕೆ 58 ಯುನಿಟ್ ಜಾಸ್ತಿ ಆಯ್ತು. ನಮ್ಮ ಸರಾಸರಿ ಐವತ್ತು ಯುನಿಟ್ ಮಾತ್ರ. ಗೃಹಜೋತಿ ಯೋಜನೆ ಎಲ್ಲರಿಗೂ ಕೊಡಲಿಕ್ಕೆ ಸಾಧ್ಯವಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಯಾರು ಆರ್ಥಿಕವಾಗಿ ಕಷ್ಟದಲ್ಲಿದ್ದಾರೋ ಅವರಿಗೆ ಮಾತ್ರ. ಪ್ರತಿಯೊಬ್ಬರಿಗೂ ಫ್ರೀ ಕೊಡುತ್ತೇವೆ ಅಂತ ಹೇಳಲಿಕ್ಕಾಗುವುದಿಲ್ಲ. ಪ್ರಾರಂಭದಲ್ಲಿ ಎಷ್ಟು ಯುನಿಟ್ ಉಚಿತ ಕೊಟ್ಟಿರುತ್ತಾರೋ ಅಷ್ಟು ಮಾತ್ರ ಕೊಡಲು ಸಾಧ್ಯ. ಗೃಹಜ್ಯೋತಿ ಯೋಜನೆ ಅಡಿ ಹೊಸ ಕಟ್ಟಡಗಳಿಗೆ 58 ಯುನಿಟ್ ಉಚಿತವಾಗಿ ಕೊಡಲಾಗಿದೆ. ಅದನ್ನು ನವೀಕರಿಸಲು ಸಾಧ್ಯವಿಲ್ಲ. ಗೃಹಜ್ಯೋತಿ ಯೋಜನೆಗಾಗಿ ಈಗಾಗಲೇ 2 ಕೋಟಿ ಅರವತ್ತೆರಡು ಲಕ್ಷ ಕುಟುಂಬಗಳಿಗೆ 10 ರಿಂದ 12 ಸಾವಿರ ಕೋಟಿ ರೂಪಾಯಿ ಪ್ರತಿ ವರ್ಷಕ್ಕೆ ನೀಡುತ್ತಿದ್ದೇವೆ ಎಂದರು.
