Asianet Suvarna News Asianet Suvarna News

ರೆಡ್ಡಿ ಸ್ನೇಹ, ಪಕ್ಷ ಸರಿದೂಗಿಸಿಕೊಂಡು ಹೋಗುತ್ತೇನೆ: ಸಚಿವ ಶ್ರೀರಾಮುಲು

ಜನಾರ್ದನ ರೆಡ್ಡಿ ಅವರು ನನ್ನ ಆತ್ಮೀಯ ಸ್ನೇಹಿತರು, ಬಿಜೆಪಿ ನನ್ನ ತಾಯಿ ಸಮಾನ. ಸ್ನೇಹ ಮತ್ತು ಪಕ್ಷ ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತೇನೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.

Minister B Sriramulu Talks Over Janardhan Reddy gvd
Author
First Published Dec 8, 2022, 10:19 AM IST

ಕಂಪ್ಲಿ (ಡಿ.08): ಜನಾರ್ದನ ರೆಡ್ಡಿ ಅವರು ನನ್ನ ಆತ್ಮೀಯ ಸ್ನೇಹಿತರು, ಬಿಜೆಪಿ ನನ್ನ ತಾಯಿ ಸಮಾನ. ಸ್ನೇಹ ಮತ್ತು ಪಕ್ಷ ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತೇನೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ನೇಹ ಅಂದ್ರೆ ಜನಾರ್ದನ ರೆಡ್ಡಿ ಹಾಗೂ ರಾಮುಲು ಎನ್ನುವಂತೆ ಎಲ್ಲರು ಮಾತನಾಡುತ್ತಾರೆ. ಸ್ನೇಹಕ್ಕೆ ಪ್ರಾಣ ಕೊಡುವಂತಹ ವ್ಯಕ್ತಿ ನಾನು. ಸ್ನೇಹ ಹಾಗೂ ರಾಜಕೀಯ ಎರಡೂ ಮುಖ್ಯ. ಸ್ನೇಹ ಹಾಗೂ ಪಾರ್ಟಿ ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತೇನೆ. ರಾಜಕಾರಣ ಬಂದಾಗ ಜನಾರ್ದನ ರೆಡ್ಡಿ ಅವರ ಬಗ್ಗೆ ಅಲ್ಲಿ ಇಲ್ಲಿ ಸುದ್ದಿಗಳು ಕೇಳುತ್ತಿವೆ. 

ಜನಾರ್ದನ ರೆಡ್ಡಿ ರಾಜಕೀಯದ ಬಗ್ಗೆ ಸದ್ಯ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಇನ್ನೂ ಅವರನ್ನು ಭೇಟಿಯಾಗಿಲ್ಲ. ಅವರು ಸಿಕ್ಕ ಬಳಿಕ ಅವರನ್ನು ಕೂರಿಸಿಕೊಂಡು ಮಾತನಾಡಿ ಮನವೊಲಿಸುವ ಕೆಲಸ ಮಾಡುವೆ. ಅಲ್ಲದೇ ಪಕ್ಷಕ್ಕೆ ಮುಜುಗರವಾಗದಂತೆ ಎಲ್ಲವನ್ನು ಸಮಾನಾಗಿ ತೆಗೆದುಕೊಂಡು ಹೋಗುವೆ ಎಂದರು. ಇನ್ನು ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಜತೆ ಬಿಜೆಪಿ ನಾಯಕರು ಕಾಣಿಸಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರೆಲ್ಲರೂ ಹನುಮ ಜಯಂತಿಗೆ ತೆರಳಿದ್ದರು. ಸಾರ್ವಜನಿಕ ಕಾರ್ಯಕ್ರಮ ಆಗಿರುವುದರಿಂದ ಎಲ್ಲರೂ ಪಕ್ಷಾತೀತವಾಗಿ ಪಾಲ್ಗೊಳ್ಳುವುದು ಸಹಜ. ಈ ಬಗ್ಗೆ ಯಾರು ಅಪಾರ್ಥ ಕಲ್ಪಿಸುವುದು ಬೇಡ ಎಂದರು.

‘ಮೊಳಕಾಲ್ಮೂರಲ್ಲಿ ಶ್ರೀರಾಮಲು ಎದುರು ನಾನೇ ನಿಲ್ತೇನೆ’: ವಿ.ಎಸ್‌.ಉಗ್ರಪ್ಪ

ಜನಾರ್ದನ ರೆಡ್ಡಿ ಎಲ್ಲೇ ಇದ್ರೂ ಒಳ್ಳೆಯದಾಗಲಿ: ‘ನನ್ನ ಗೆಳೆಯ ಜನಾರ್ದನ ರೆಡ್ಡಿ ಎಲ್ಲೇ ಇದ್ರೂ ಅವರಿಗೆ ಒಳ್ಳೆಯದಾಗಲಿ’ಎಂದು ಹಾರೈಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ರೆಡ್ಡಿಯ ಹೊಸ ಪಕ್ಷದ ಸ್ಥಾಪನೆ ಗುಮಾನಿಗೆ ಪುಷ್ಟಿನೀಡಿದ್ದಾರೆ. ಸಚಿವ ಶ್ರೀರಾಮುಲು ಅವರ ಈ ರೀತಿಯ ಹೇಳಿಕೆ ರೆಡ್ಡಿ ನಡುವೆ ಬಿರುಕು ಕಾಣಿಸಿಕೊಂಡಿದೆ ಎಂಬ ಅನುಮಾನ ಸಹ ಮೂಡಿಸಿದ್ದು ಜನಾರ್ದನ ರೆಡ್ಡಿ ಹೊಸ ಪಕ್ಷದ ಸ್ಥಾಪಿಸಲಿದ್ದಾರೆ ಎಂದು ಆಗಾಗ್ಗೆ ಕೇಳಿ ಬರುತ್ತಿದ್ದ ಮಾತುಗಳು ಸಹ ಮುನ್ನೆಲೆಗೆ ಬಂದಂತಾಗಿದೆ. ಸುದ್ದಿಗಾರರ ಜತೆ ಮಾತನಾಡಿದ ಸಚಿವ ಶ್ರೀರಾಮುಲು, ತನ್ನ ಗೆಳೆಯ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಕುರಿತು ಪ್ರತಿಕ್ರಿಯಿಸಿದರಲ್ಲದೆ,‘ಹೊಸ ಪಕ್ಷ ಸ್ಥಾಪಿಸೋದು ಅವರ ವಿವೇಚನೆಗೆ ಬಿಟ್ಟದ್ದು’ ಎಂದು ತಿಳಿಸಿದರು.

ಚುನಾವಣೆ ಹತ್ತಿರವಾಗುತ್ತಿದ್ದರೂ ಬಿಜೆಪಿ ಜನಾರ್ದನ ರೆಡ್ಡಿಯನ್ನು ಪರಿಗಣಿಸುತ್ತಿಲ್ಲ. ಇದರಿಂದ ರೆಡ್ಡಿ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಆಗಾಗ್ಗೆ ಕೇಳಿ ಬರುತ್ತಿದ್ದವು. ಇದಕ್ಕೆ ಪೂರಕವಾಗಿ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ ಸಚಿವ ಬಿ.ಶ್ರೀರಾಮುಲು, ಕೆಲವು ವಿಚಾರದಲ್ಲಿ ಬಿಜೆಪಿ ಮೇಲೆ ಜನಾರ್ದನ ರೆಡ್ಡಿ ಅವರಿಗೆ ಬೇಸರವಿದೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಬರುವುದಿಲ್ಲ. ರೆಡ್ಡಿಯ ಬೇಸರಗೊಂಡಿರುವ ಕುರಿತು ಪಕ್ಷದ ಗಮನಕ್ಕೂ ತಂದಿರುವೆ ಎಂದರು. ಜನಾರ್ದನ ರೆಡ್ಡಿಯ ಹೊಸ ಪಕ್ಷ ನೋಂದಣಿಯಾಗಿರುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಈ ಕುರಿತು ರೆಡ್ಡಿ ಎಂದೂ ಚರ್ಚಿಸಿಲ್ಲ. ಆದರೆ, ಜನಾರ್ದನ ರೆಡ್ಡಿ ಅವರು ಈ ಭಾಗದ ಪ್ರಭಾವಿ ನಾಯಕರಾಗಿದ್ದಾರೆ. 

ತಾಕತ್ತಿದ್ದರೆ ಬನ್ನಿ ನೋಡೋಣ, ನಾವೇನ್‌ ಬಳೆ ತೊಡ್ಕೊಂಡಿದ್ದೀವಾ: ಸಚಿವ ಶ್ರೀರಾಮುಲು

ಅವರು ತಮ್ಮದೇ ಆದ ನಿಲುವು ತೆಗೆದುಕೊಳ್ಳಲು ಸಮರ್ಥರಿದ್ದಾರೆ ಎಂದು ತಿಳಿಸಿದರಲ್ಲದೆ, ನನ್ನ ಜನಾರ್ದನ ರೆಡ್ಡಿ ನಡುವೆ ಸ್ನೇಹ-ಬಾಂಧವ್ಯಕ್ಕೆ ಯಾವುದೇ ಧಕ್ಕೆಯಾಗಿಲ್ಲ. ರಾಜಕೀಯ ಹೊರತುಪಡಿಸಿ ನಾವಿಬ್ಬರೂ ಈಗಲೂ ಆಪ್ತ ಸ್ನೇಹಿತರು. ರೆಡ್ಡಿ ಮೊಮ್ಮಗಳ ನಾಮಕರಣ ಕಾರ್ಯಕ್ರಮಕ್ಕೆ ಹೋಗಿಲ್ಲ ಎಂಬ ಕಾರಣಕ್ಕಾಗಿಯೇ ನನ್ನ ರೆಡ್ಡಿ ನಡುವೆ ಬಿರುಕು ಮೂಡಿದೆ ಎಂದು ಹೇಳುವುದು ಸರಿಯಲ್ಲ. ನಾನು ಪೂರ್ವ ನಿಯೋಜಿತ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜೈಪುರಕ್ಕೆ ಹೋಗಿದ್ದೆ. ನನಗೆ ಗೊತ್ತಿರುವ ಸ್ವಾಮೀಜಿಯೊಬ್ಬರ ತಂಗಿಯ ವಿವಾಹವಿತ್ತು. ಇದು ಮೊದಲೇ ನಿಗದಿಯಾಗಿತ್ತು. ಹೀಗಾಗಿ ರೆಡ್ಡಿ ಮೊಮ್ಮಗಳ ನಾಮಕರಣ ಕಾರ್ಯಕ್ರಮಕ್ಕೆ ಗೈರಾದೆ. ಇದನ್ನೇ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು.

Follow Us:
Download App:
  • android
  • ios