ಕಾನೂನು ವ್ಯಾಪ್ತಿಯಲ್ಲಿ ಸಾಕಷ್ಟು ತೊಂದರೆಗಳಿರುವುದರಿಂದ ಪ್ರತಿಭಟನಾಕಾರರು ಹೋರಾಟ ಕೈ ಬಿಟ್ಟು ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.

ಮದ್ದೂರು (ಮಾ.08): ಗೆಜ್ಜಲಗೆರೆ ಗ್ರಾಮ ಪಂಚಾಯ್ತಿಯನ್ನು ಮದ್ದೂರು ನಗರಸಭೆಗೆ ಸೇರ್ಪಡೆಯಿಂದ ಹೊರಗಿಡಲು ಕಾನೂನು ವ್ಯಾಪ್ತಿಯಲ್ಲಿ ಸಾಕಷ್ಟು ತೊಂದರೆಗಳಿರುವುದರಿಂದ ಪ್ರತಿಭಟನಾಕಾರರು ಹೋರಾಟ ಕೈ ಬಿಟ್ಟು ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು. ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಕಳೆದ ಹಲವು ತಿಂಗಳಿಂದ ನಡೆಯುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಮತ್ತೆ ಗ್ರಾಪಂಅನ್ನು ನಗರಸಭೆಯಿಂದ ಕೈ ಬಿಡುವ ಬಗ್ಗೆ ಅಧಿಕಾರಿಗಳು, ಮಂತ್ರಿಗಳ ಜೊತೆ ಚರ್ಚೆ ಮಾಡಿದಾಗ ಸಾಕಷ್ಟು ತಾಂತ್ರಿಕ ತೊಂದರೆಗಳು ಇರುವುದರಿಂದ ಗ್ರಾಪಂ ಆಗಿ ಉಳಿಸಲು ಕಷ್ಟದ ಕೆಲಸ ಎಂದು ಹೇಳಿದ್ದಾರೆ ಎಂದರು.

Add Asianetnews Kannada as a Preferred SourcegooglePreferred

ಈಗಾಗಲೇ ನಗರಸಭೆಗೆ ಗ್ರಾಪಂಅನ್ನು ಸೇರಿಸಿ ಪ್ರಕ್ರಿಯೆ ಪೂರ್ಣಗೊಂಡಿದೆ. ಅಲ್ಲದೆ ಚುನಾವಣೆಗೆ ಪ್ರಕ್ರಿಯೆಗಳು ಆರಂಭವಾಗಿವೆ. ಈ ಬಗ್ಗೆ ತೀರ್ಮಾನ ಕೈಗೊಳ್ಳುವುದು ಕಷ್ಟ. ಮತ್ತೆ ತಿದ್ದುಪಡಿ ಮಾಡಿ ಗ್ರಾಪಂ ಉಳಿಸಲು ಕಾನೂನು ವ್ಯಾಪ್ತಿ ಮೀರಿ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದರು. ಈ ಹಿಂದೆ ಮದ್ದೂರಿನಲ್ಲಿ ಹೋರಾಟಗಾರರಿಗೆ ಮಾತು ಕೊಟ್ಟಿದ್ದೆ. ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರ ಜೊತೆನೂ ಚರ್ಚೆ ಮಾಡಿದ್ದೆ. ಆದರೆ, ಕಾನೂನು ವ್ಯಾಪ್ತಿ ಆಡಚಣೆ ಇರುವುದರಿಂದ ಪರಿಸ್ಥಿತಿ ಕೈ ಮೀರಿ ಹೋಗಿದೆ. ಗೆಜ್ಜಲಗೆರೆ ಗ್ರಾಪಂ ಅನ್ನು ನಗರಸಭೆಗೆ ಸೇರ್ಪಡೆ ವಿಚಾರ ಆರಂಭದಲ್ಲಿ ನನ್ನ ಗಮನಕ್ಕೆ ತಂದಿದ್ದರೆ ಸಮಸ್ಯೆ ಇಷ್ಟೊಂದು ಗಂಭೀರವಾಗುತ್ತಿರಲಿಲ್ಲ. ಆದರೆ, ಯಾರೂ ನನ್ನ ಗಮನಕ್ಕೆ ತಂದಿಲ್ಲ ಎಂದು ಹೇಳಿದರು.

ಬೆಂಬಲ ನೀಡಬೇಕು

ಗ್ರಾಪಂ ಅನ್ನು ನಗರಸಭೆಗೆ ಸೇರಿಸಿ ಈಗಾಗಲೇ ಕಾನೂನು ರೀತಿಯ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ. ಪುರಸಭೆಯಿಂದ ನಗರಸಭೆಗೆ ಪ್ರಕ್ರಿಯೆಗಳು ನಡೆದಿವೆ. ಇದರಿಂದ ಮತ್ತೆ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಹೇಳಿದರು. ವಾಪಸ್ ಗ್ರಾಪಂ ಆಗಿ ಉಳಿಸಲು ತೀರ್ಮಾನ ಕ್ರಮ ಕೈಗೊಂಡರೆ ಚುನಾವಣಾ ಇಲಾಖೆಯ ಇಡೀ ಎಲ್ಲಾ ವ್ಯವಸ್ಥೆಗಳು ವಿಳಂಬವಾಗುತ್ತವೆ. ಚುನಾವಣೆಗಳು ತಡವಾಗುತ್ತವೆ. ಈ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನಂಬಿಕೆ ಇಟ್ಟು ಅಲ್ಲಿ ಪರ ಮತ್ತು ವಿರುದ್ಧ ಯಾವುದೇ ತೀರ್ಪು ಬಂದರೂ ಯಾರು ಆತಂಕಕ್ಕೆ ಒಳಗಾಗದೆ ಬೆಂಬಲ ನೀಡಬೇಕು ಎಂದು ಕೋರಿದರು.

ನ್ಯಾಯಾಲಯದ ತೀರ್ಪು ಏನೇ ಬಂದರೂ ಹೋರಾಟ ಬಿಟ್ಟು ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕು, ಎಲ್ಲರೂ ಕೈ ಜೋಡಿಸಬೇಕು. ಗೆಜ್ಜಲಗೆರೆ ಗ್ರಾಮದ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ. ಶಾಸಕರು ಎಲ್ಲಾ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಇಡೀ ಜಿಲ್ಲೆಯಲ್ಲಿಯೇ ಗೆಜ್ಜಲಗೆರೆಯನ್ನು ವಿಶೇಷವಾಗಿ ಅಭಿವೃದ್ಧಿಗೆ ಒತ್ತು ನೀಡಿ ಕೆಲಸಗಳನ್ನು ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಸಭೆಯಲ್ಲಿ ಪೌರಾಡಳಿತ ನಿರ್ದೇಶಕ ರವೀಂದ್ರ ಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಒ ಕೆ.ಆರ್. ನಂದಿನಿ, ಜಿಲ್ಲಾ ಎಸ್ಪಿಶೋಭಾರಾಣಿ , ಮದ್ದೂರು ನಗರಸಭೆ ಆಯುಕ್ತೆ ರಾಧಿಕಾ ಭಾಗವಹಿಸಿದ್ದರು.