ಬಿಜೆಪಿಯವರಿಗೆ ದೇಶ ಮತ್ತು ರಾಜ್ಯವನ್ನು ಆರ್ಥಿಕವಾಗಿ ಹೇಗೆ ನಡೆಸಬೇಕೆಂದು ಗೊತ್ತಿಲ್ಲ. ಕೇಂದ್ರ ಸರ್ಕಾರದ ಅನ್ಯಾಯದಿಂದಾಗಿ ನಮಗೆ ಇಷ್ಟೊಂದು ಸಾಲದ ಹೊರೆಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೀದರ್‌/ ಕಲಬುರಗಿ (ಮಾ.08): ಬಿಜೆಪಿಯವರಿಗೆ ದೇಶ ಮತ್ತು ರಾಜ್ಯವನ್ನು ಆರ್ಥಿಕವಾಗಿ ಹೇಗೆ ನಡೆಸಬೇಕೆಂದು ಗೊತ್ತಿಲ್ಲ. ಕೇಂದ್ರ ಸರ್ಕಾರದ ಅನ್ಯಾಯದಿಂದಾಗಿ ನಮಗೆ ಇಷ್ಟೊಂದು ಸಾಲದ ಹೊರೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಸಾಲ ಮಾಡಿಯೇ ದೇಶವನ್ನು ನಡೆಸುತ್ತಿದ್ದು, ಈವರೆಗೆ ₹200 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸಾಲರಾಮಯ್ಯ ಎಂಬ ಬಿಜೆಪಿ ವ್ಯಂಗ್ಯಕ್ಕೆ ಬೀದರ್‌ ನಗರದಲ್ಲಿ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ನಮ್ಮ ₹80 ಸಾವಿರ ಕೋಟಿ ಪಾಲನ್ನು ನೀಡಿಲ್ಲ. ಅದರಿಂದಾಗಿ ನಮ್ಮ ಸರ್ಕಾರ ಸಾಲ ಮಾಡುವಂತಾಗಿದೆ. ಜೆಜೆಎಂ ಯೋಜನೆಯ ಕೇಂದ್ರದ ಪಾಲಾದ ₹15 ಸಾವಿರ ಕೋಟಿಯನ್ನು ನಾವು ಕೊಟ್ಟಿದ್ದೀವಿ. ಆದರೆ, ಪಂಚಾಯಿತಿಗೆ ಕೊಡಬೇಕಾದ 15ನೇ ಹಣಕಾಸಿನ ಪಾಲನ್ನು ಕೇಂದ್ರ ನೀಡಿಲ್ಲ ಎಂದು ಆರೋಪಿಸಿದರು.

ಅನುಮತಿ ನೀಡಲು ಅವರು ಯಾರು?

ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಅವರ ವಿದೇಶ ನೀತಿಯಿಂದಾಗಿ ಅಮೆರಿಕದ ವಿದೇಶಾಂಗ ಸಚಿವರು ಸೇರಿದಂತೆ ಪ್ರತಿಯೊಬ್ಬರು ಭಾರತದ ಬಗ್ಗೆ ಹಗುರವಾಗಿ ಮಾತನಾಡುವಂತಾಗಿದೆ. ಅಮೆರಿಕಾದ ವಿದೇಶಾಂಗ ಅಧಿಕಾರಿಯೊಬ್ಬರು, ‘ಭಾರತವು ರಷ್ಯಾದಿಂದ 30 ದಿನಗಳವರೆಗೆ ತೈಲ ಖರೀದಿಸಲು ಅನುಮತಿ ನೀಡಿದ್ದೇವೆ’ ಎಂದಿದ್ದಾರೆ‌. ಭಾರತಕ್ಕೆ ಅನುಮತಿ ನೀಡಲು ಅವರು ಯಾರು? ಮೋದಿ, ಜೈಶಂಕರ್ ಸೇರಿದಂತೆ ಬಿಜೆಪಿ ನಾಯಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಅವಮಾನ ಅನುಭವಿಸುವಂತಾಗಿದೆ ಎಂದು ಖರ್ಗೆ ಟೀಕಿಸಿದರು.

ಈ ಹಿಂದೆ ಮಧ್ಯಪ್ರಾಚ್ಯಗಳ ವಿಚಾರದಲ್ಲಿ ಅಮೆರಿಕ ಮಧ್ಯೆ ಪ್ರವೇಶಿಸಿದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಆ ಬಗ್ಗೆ ಆಕ್ಷೇಪ ಎತ್ತಿದ್ದರು. ಅಂತಹ ಎದೆಗಾರಿಕೆ ಮೋದಿಗೆ ಯಾಕೆ ಇಲ್ಲ? ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಬಿಜೆಪಿವರು ನೆಹರೂ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಬಗ್ಗೆ ಮಾತನಾಡುತ್ತಾರೆ. ಆದರೆ, ವಿದೇಶಾಂಗ ನೀತಿಗಳ ಬಗ್ಗೆ ಮಾತನಾಡಲ್ಲ ಎಂದು ಕುಟುಕಿದರು.