ಶಾಮನೂರು ನಿವೃತ್ತಿ ಪಡೆದು ಮನೆಯಲ್ಲಿರಲಿ: ಕಾಂಗ್ರೆಸ್ ಶಾಸಕ ರಿಜ್ವಾನ್
ವಯಸ್ಸಾದ ಮೇಲೆ ಬಹಳಷ್ಟು ವಿಷಯಗಳು ಅರ್ಥ ಆಗುವುದಿಲ್ಲ. ರಾಜಕೀಯ ವಿದ್ಯಮಾನಗಳು ಸಹ ಅರ್ಥ ಆಗಲ್ಲ. ಆ ವಯಸ್ಸಿನವರಿಗೆ ನಾವು ಕೂಡ ಜೋರಾಗಿ ಹೇಳಲು ಆಗೋದಿಲ್ಲ. ಆ ವಯಸ್ಸಿನಲ್ಲಿ ಸಾರ್ವಜನಿಕ ಜೀವನದಲ್ಲಿದ್ದರೆ ಇಂತಹ ಸಮಸ್ಯೆ ಬರುತ್ತಿರುತ್ತದೆ ಎಂದು ಪರೋಕ್ಷವಾಗಿ ರಾಜಕೀಯ ನಿವೃತ್ತಿ ಸಲಹೆ ನೀಡಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಬೆಂಗಳೂರು(ಫೆ.15): 'ಶಾಮನೂರು ಶಿವಶಂಕರಪ್ಪ ಅವರು ವಯಸ್ಸಿನಲ್ಲಿ ತುಂಬಾ ಹಿರಿಯರು. 94 ವರ್ಷ ವಯಸ್ಸಿನಲ್ಲಿ ಅವರಿಗೆ ಏನು ಅರ್ಥವಾಗುತ್ತದೆಯೋ? ಏನು ಬರೆಯುತ್ತಾರೋ ಗೊತ್ತಿಲ್ಲ. ವಯಸ್ಸು ಆದ್ರೆ ರಾಜಕೀಯ ನಿವೃತ್ತಿ ತೆಗೆದುಕೊಂಡು ಕುಟುಂಬದ ಜತೆ ಕಾಲ ಕಳೆಯಬೇಕು' ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತರಿಗೆ ಆದ್ಯತೆ ನೀಡಿ ಎಂದು ಶಾಮನೂರು ಶಿವಶಂಕರಪ್ಪ ಪತ್ರ ಬರೆದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಶಾಮನೂರು ಶಿವಶಂಕರಪ್ಪ ಅವರು ವಯಸ್ಸಿನಲ್ಲಿ ಹಿರಿಯರು. 94 ವರ್ಷದ ವಯಸ್ಸಿನಲ್ಲಿ ಅವರಿಗೆ ಏನು ಅರ್ಥ ಆಗುತ್ತದೆಯೋ ಅಥವಾ ಏನು ಬರೆಯುತ್ತಾರೋ ಗೊತ್ತಿಲ್ಲ. ವಯಸ್ಸು ಜಾಸ್ತಿ ಆಗಿರುವುದರಿಂದ ಏನೇನೋ ಹೇಳುತ್ತಿರುತ್ತಾರೆ. ಲಿಂಗಾಯತ ಮಹಾಸಭಾದಿಂದ ಯಾರೂ ಪತ್ರ ಬರೆಯುತ್ತಿಲ್ಲ. ಕೇವಲ ಶಾಮನೂರು ಅವರು ಮಾತ್ರ ಪತ್ರ ಬರೆದಿದ್ದಾರೆ. ಅವರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತಗಳಿಂದ ಆಯ್ಕೆಯಾಗುವುದು ದಾವಣಗೆರೆಯಲ್ಲಿ ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ರಾಘವೇಂದ್ರ ಪರ ಶಾಮನೂರು ಹೇಳಿಕೆಗೆ ಕಾಂಗ್ರೆಸ್ಸಿಗರು ಗರಂ
ಬಿ.ವೈ.ರಾಘವೇಂದ್ರ ಅವರು ಗೆಲ್ಲಬೇಕು ಎಂದು ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆಗೆ, ವಯಸ್ಸಾದ ಮೇಲೆ ಬಹಳಷ್ಟು ವಿಷಯಗಳು ಅರ್ಥ ಆಗುವುದಿಲ್ಲ. ರಾಜಕೀಯ ವಿದ್ಯಮಾನಗಳು ಸಹ ಅರ್ಥ ಆಗಲ್ಲ. ಆ ವಯಸ್ಸಿನವರಿಗೆ ನಾವು ಕೂಡ ಜೋರಾಗಿ ಹೇಳಲು ಆಗೋದಿಲ್ಲ. ಆ ವಯಸ್ಸಿನಲ್ಲಿ ಸಾರ್ವಜನಿಕ ಜೀವನದಲ್ಲಿದ್ದರೆ ಇಂತಹ ಸಮಸ್ಯೆ ಬರುತ್ತಿರುತ್ತದೆ ಎಂದು ಪರೋಕ್ಷವಾಗಿ ರಾಜಕೀಯ ನಿವೃತ್ತಿ ಸಲಹೆ ನೀಡಿದರು.