ಎಲ್ಲಾ ಕೊಳೆಗಳನ್ನು ಒರೆಸಿ ಬಿಸಾಕಿದ ಯಾವುದೇ ಉಪಯೋಗಕ್ಕೆ ಬಾರದ ವೆಸ್ಟ್ ಅನ್ನು ಒಟ್ಟಿಗೆ ಸೇರಿ ಕೌದಿ ರೂಪದಲ್ಲಿ ಹೊಲೆದ ಹಾಗೆ ಆಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.

ಶಿವಮೊಗ್ಗ (ಮಾ.10): ರಾಜ್ಯ ಸರ್ಕಾರದ ಬಜೆಟ್ ಚಿಂದಿ ಬಟ್ಟೆ ಬಿಸಾಕಿದ ಹಾಗಿದೆ. ಎಲ್ಲಾ ಕೊಳೆಗಳನ್ನು ಒರೆಸಿ ಬಿಸಾಕಿದ ಯಾವುದೇ ಉಪಯೋಗಕ್ಕೆ ಬಾರದ ವೆಸ್ಟ್ ಅನ್ನು ಒಟ್ಟಿಗೆ ಸೇರಿ ಕೌದಿ ರೂಪದಲ್ಲಿ ಹೊಲೆದ ಹಾಗೆ ಆಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಸಿ, ಎಸ್‌ಟಿಗಳಿಗೆ ಮೀಸಲಿಟ್ಟ ಹಣ, ದೇವಾಲಯಗಳ ಹುಂಡಿಯಿಂದ ಬರುವ ಹಣ ಎಲ್ಲವನ್ನು ಬಳಸಿಕೊಂಡು ಮಾಡಿದ ಭಯದ ಬಜೆಟ್ ಇದಾಗಿದೆ. ಈಗಾಗಲೇ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಈ ಸರ್ಕಾರದಿಂದ ಯಾವುದೇ ಅಭಿವೃದ್ಧಿ ನಿರೀಕ್ಷೆ ಮಾಡಲಾಗುವುದಿಲ್ಲ ಎಂದು ಟೀಕಿಸಿದರು.

ಶಿವಮೊಗ್ಗದ ಆಶ್ರಯ ಮನೆಗಳಿಗೆ ಅನೇಕ ಬಡವರು ತಮ್ಮ ತಾಳಿಯನ್ನು ಮಾರಿ 80 ಸಾವಿರ ಹಣವನ್ನು ಕಟ್ಟಿದ್ದಾರೆ. 600 ಮನೆಗಳು ಸಿದ್ದವಾಗಿದ್ದರೂ, ಅವರಿಗೆ ಯಾವುದೇ ಮೂಲಭೂತ ಸೌಲಭ್ಯ ಇಲ್ಲದ ಕಾರಣ ಅವರಿಗೆ ಕೀ ಹಸ್ತಾಂತರ ಮಾಡಲಾಗುತ್ತಿಲ್ಲ. ಅದಕ್ಕೆ ಅಗತ್ಯವಾದ 12 ಕೋಟಿ ರು. ಬಿಡುಗಡೆ ಆಗಿಲ್ಲ. ವಸತಿ ಸಚಿವರು ಭರವಸೆ ನೀಡಿ ಹೋಗಿದ್ದರೂ ಹಣ ಬಂದಿಲ್ಲ. ನಾವು ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ರಾಷ್ಟ್ರ ಭಕ್ತರ ಬಳಗದಿಂದ ಹೋರಾಟ ಮಾಡಿದ್ದೇವು. ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ.

ಸರ್ಕಾರದಿಂದ ಹಣ ಪಾವತಿಸಿಲ್ಲ

ಅವರು ಎರಡು ತಿಂಗಳ ಅವಧಿ ಕೇಳಿದ್ದರು. ಈಗಾಗಲೇ ಒಂದು ತಿಂಗಳು ಮುಗಿದಿದೆ. ಆಯುಕ್ತರನ್ನು ಭೇಟಿಯಾಗಿ ಪಾಲಿಕೆಯಿಂದಲೇ ಹಣ ಹೊಂದಿಸಿ ಬಡವರಿಗೆ ಕೀ ಹಸ್ತಾಂತರ ಮಾಡಲು ಹೇಳಿದ್ದೇವೆ. ಅವರು, ಈಗಾಗಲೇ ಕಂಟ್ರ್ಯಾಕ್ಟರ್ ಸರ್ಕಾರದಿಂದ ಹಣ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ಓಡಿ ಹೋಗಿದ್ದಾರೆ. ನಾನು ಉಸ್ತುವಾರಿ ಸಚಿವರ ಜೊತೆಗೆ ಮಾತನಾಡುತ್ತೇನೆ. ಸರ್ಕಾರ ಸ್ಪಂದಿಸದಿದ್ದರೆ ಮತ್ತೆ ಹೋರಾಟ ಅನಿವಾರ್ಯ ಎಂದು ಹರಿಹಾಯ್ದರು.

ಈ ಸರ್ಕಾರಕ್ಕೆ ಚುನಾವಣೆ ಮಾಡುವ ಯೋಚನೆಯೇ ಇಲ್ಲ, ಪ್ರಜಾಪ್ರಭುತ್ವಕ್ಕೆ ಮಾರಕವಾದ ಸರ್ಕಾರ ಇದು. ಚುನಾವಣಾ ಆಯುಕ್ತರು ದುಬೈ ನಲ್ಲಿದ್ದಾರೆಂದು ತಿಳಿದು ಬಂದಿದೆ. ಅವರ ಮಾತಿಗೂ ಬೆಲೆ ಇಲ್ಲದಂತಾಗಿದೆ. ಅವರು ನಾನು ನಿಸ್ಸಾಹಾಯಕ, ಸರ್ಕಾರ ನನ್ನ ಮಾತನ್ನು ಕೇಳುತ್ತಿಲ್ಲ ಎಂದು ಬಹಿರಂಗ ಹೇಳಿಕೆ ನೀಡಲಿ, ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ರಾಷ್ಟ್ರಭಕ್ತರ ಬಳಗ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಮಾ.21ರಂದು ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಸರ್ಕಾರ ಕೂಡಲೇ ಪಾಲಿಕೆ ಚುನಾವಣೆಗೆ ಕ್ರಮ ಕೈಗೊಳ್ಳಬೇಕು ಎಂದು ವಿವರಿಸಿದರು.