ಮಹಿಳೆಯರ ಕೊಡುಗೆ ದೊಡ್ಡದು. ತಾಯಿ, ಸೋದರಿ, ಪತ್ನಿಯಾಗಿ ಆಕೆಯ ಪಾತ್ರ ಬಹುಮುಖಿ. ಮಹಿಳೆಯರಲ್ಲಿ ಆತ್ಮವಿಶ್ವಾಸ ಬೆಳೆಸಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್ ಹೇಳಿದ್ದಾರೆ.

ಮಂಗಳೂರು (ಮಾ.10): ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆ ದೊಡ್ಡದು. ತಾಯಿ, ಸೋದರಿ, ಪತ್ನಿಯಾಗಿ ಆಕೆಯ ಪಾತ್ರ ಬಹುಮುಖಿ. ಮಹಿಳೆಯರಲ್ಲಿ ಆತ್ಮವಿಶ್ವಾಸ ಬೆಳೆಸಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್ ಹೇಳಿದ್ದಾರೆ.

ಶಕ್ತಿನಗರದ ಕಲಾಂಗಣದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ‘ಸುರ್ ಸಂಭ್ರಮ- 2026’ ಕಾರ್ಯಕ್ರಮವನ್ನು ಗುಮಟೆ ಬಾರಿಸುವ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ

ಮಹಿಳೆಯರು ಮುಖ್ಯವಾಹಿನಿಗೆ ಬಂದರೆ ಮಾತ್ರ ದೇಶ ಬಲಿಷ್ಠವಾಗುತ್ತದೆ. ರಾಜಕಾರಣಕ್ಕೆ ಹೆಚ್ಚೆಚ್ಚು ಬಂದರೆ ಮಾನವೀಯ ಮೌಲ್ಯಗಳಿಂದ ಕೂಡಿದ ರಾಜಕಾರಣ ನಡೆಸಬಹುದು ಎಂದು ಹೇಳಿದರು. ಕೊಂಕಣಿಯಿಂದ ಕನ್ನಡಕ್ಕೆ ಅನುವಾದ ಮಾಡಿದ ಕಥಾ ಪಲ್ಲವಿ ಮತ್ತು ಕಾವ್ಯ ಪಲ್ಲವಿ ಸಂಕಲನಗಳನ್ನು ಬಿಡುಗಡೆ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ಭಾರತದಲ್ಲಿ ಶೇ.72 ಮಹಿಳೆಯರು ಕೃಷಿಯಲ್ಲಿ ತೊಡಗಿದ್ದರೂ ಶೇ.54ರಷ್ಟು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 70 ವರ್ಷಗಳಾದರೂ ನಾವು ಮಹಿಳಾ ಮುಖ್ಯಮಂತ್ರಿಯನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೊ, ಬೆಥನಿ ಸಂಸ್ಥೆಯ ಮುಖ್ಯಸ್ಥೆ ಸಿ. ರೊಸ್ ಸೆಲಿನ್ ಬಿ.ಎಸ್. ಶುಭ ಹಾರೈಸಿದರು. ಅಕಾಡೆಮಿ ಅಧ್ಯಕ್ಷ ಜೊಕಿಂ ಸ್ಟ್ಯಾನಿ ಆಲ್ವಾರಿಸ್ ಪ್ರಸ್ತಾವನೆಗೈದರು. ಅಕಾಡೆಮಿ ರಿಜಿಸ್ಟ್ರಾರ್ ರಾಜೇಶ್ ಜಿ., ಸದಸ್ಯರಾದ ನವೀನ್ ಲೋಬೊ, ರೊನಾಲ್ಡ್ ಕ್ರಾಸ್ತಾ, ಅಕ್ಷತಾ ನಾಯಕ್, ಸಪ್ನಾ ಕ್ರಾಸ್ತಾ, ದಯಾನಂದ್ ಮಡ್ಕೇಕರ್ ಇದ್ದರು. ಸ್ಟೀವನ್ ಕ್ವಾಡ್ರಸ್ ವಂದಿಸಿದರು.

ನಂತರ ವಿವಿಧ ಪ್ರದೇಶಗಳ 7ರಿಂದ 70 ವಯೋಮಾನದ ಸ್ತ್ರೀಯರ ತಂಡಗಳಿಂದ ಕೊಂಕಣಿ ಗಾಯನ ನಡೆಯಿತು. ರೋಶನ್ ಡಿಸೋಜ ಆಂಜೆಲೋರ್ ನೇತೃತ್ವದಲ್ಲಿ ಸಂಗೀತಗಾರರು ಸಂಗೀತ ನೀಡಿದರು. ಐರಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.