ಟಿಕೆಟ್‌ ನೀಡಬೇಕೆಂಬುದನ್ನು ನಾನೂ ನಿರ್ಧರಿಸಲಾಗಲ್ಲ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರೂ ನಿರ್ಧರಿಸಲಾಗುವುದಿಲ್ಲ. ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ ಎಂದು ಸಚಿವ ಜಮೀರ್‌ ಅಹಮದ್‌ ತಿರುಗೇಟು ನೀಡಿದ್ದಾರೆ.

ಬೆಂಗಳೂರು (ಮಾ.10): ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಯಾರಿಗೆ ಟಿಕೆಟ್‌ ನೀಡಬೇಕೆಂಬುದನ್ನು ನಾನೂ ನಿರ್ಧರಿಸಲಾಗಲ್ಲ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರೂ ನಿರ್ಧರಿಸಲಾಗುವುದಿಲ್ಲ. ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಅವರು ನಮ್ಮ ಪಕ್ಷದ ಹಿರಿಯ ಮುತ್ಸದ್ದಿ ನಾಯಕರು. ಅವರು ಇದ್ದಾಗಲೇ ಇದು ನನ್ನ ಕೊನೆಯ ಚುನಾವಣೆ, ಮುಂದೆ ಅಲ್ಪಸಂಖ್ಯಾತರಿಗೆ ಕ್ಷೇತ್ರದ ಟಿಕೆಟ್‌ ಕೊಡಿಸಿ ನಾನೇ ಮುಂದೆ ನಿಂತು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಮಾತು ಕೊಟ್ಟಿದ್ದರು. ಕ್ಷೇತ್ರದಲ್ಲಿ 80 ಸಾವಿರ ಅಲ್ಪಸಂಖ್ಯಾತ ಮತಗಳಿವೆ. ಹಾಗಾಗಿ ಉಪ ಚುನಾವಣೆ ಟಿಕೆಟ್‌ ಅನ್ನು ಅಲ್ಪಸಂಖ್ಯಾತರಿಗೆ ಕೊಡಬೇಕೆಂದು ಸಮುದಾಯದ ಮುಖಂಡರ ಒತ್ತಾಯವಾಗಿದೆ. ನನ್ನನ್ನು ಭೇಟಿ ಮಾಡಿ ಅವರು ಈ ಸಂಬಂಧ ಮನವಿ ಮಾಡಿದ್ದಾರೆ. ಇದನ್ನು ನಾನು ಹೈಕಮಾಂಡ್‌ ಗಮನಕ್ಕೆ ತರುತ್ತೇನೆ. ಟಿಕೆಟ್‌ ಕೇಳುವ ಹಕ್ಕು ಎಲ್ಲರಿಗೂ ಇದೆ. ನಮ್ಮ ಹಕ್ಕು ನಾವು ಕೇಳಲೇಬಾರದಾ? ಹೈಕಮಾಂಡ್‌ನವರು ಸಭೆ ಕರೆದಾಗ ಮಾತನಾಡಲಿ ಎಂದರು.

ಮಾತನಾಡಲು ತಾವ್ಯಾರು

ನಮ್ಮ ಕ್ಷೇತ್ರದಲ್ಲಿ ಬಂದು ಮಾತನಾಡಲು ತಾವ್ಯಾರು ಎಂದು ಸಚಿವ ಮಲ್ಲಿಕಾರ್ಜುನ್‌ ಪ್ರಶ್ನಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ, ಇಲ್ಲಿ ನಮ್ಮದು, ಅವರು ಅಂತ ಯಾವುದೂ ಇಲ್ಲ. ಚಾಮರಾಜಪೇಟೆ ಕ್ಷೇತ್ರ ನನ್ನದು ಅಂತ ಹೇಳೋಕಾಗುತ್ತಾ? 224 ಕ್ಷೇತ್ರಗಳೂ ಕಾಂಗ್ರೆಸ್‌ ಕ್ಷೇತ್ರ, ಅವುಗಳಲ್ಲಿ ಯಾರಿಗೆ ಟಿಕೆಟ್‌ ಕೊಡಬೇಕೆಂದು ನಾನೂ ತೀರ್ಮಾನ ಮಾಡಲ್ಲ, ಮಲ್ಲಿಕಾರ್ಜುನ್‌ ಅವರು ತೀರ್ಮಾನ ಮಾಡಲ್ಲ. ಹೈಕಮಾಂಡ್‌ ತೀರ್ಮಾನ ಮಾಡುತ್ತದೆ ಎಂದರು.

ಇದೇ ವೇಳೆ ತಮ್ಮ ಇಲಾಖೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಲೋಕಾಯುಕ್ತ ನೋಟಿಸ್‌ ಕುರಿತ ಪ್ರಶ್ನೆಗೆ, ಹಣಕಾಸು ಇಲಾಖೆಯ ಅನುಮತಿ ಇಲ್ಲದೆ 650 ಕೋಟಿ ರು. ಅನುದಾನ ಬಳಸಲಾಗಿದೆ ಎಂದು ಬಂದಿರುವ ದೂರಿನ ಮೇಲೆ ಲೋಕಾಯುಕ್ತದವರು ನೋಟಿಸ್‌ ನೀಡಿದ್ದಾರೆ. ಹಣಕಾಸು ಇಲಾಖೆಯ ಅನುಮತಿ ಇಲ್ಲದೆ ನನ್ನ ಇಲಾಖೆ ಮಾತ್ರವಲ್ಲ ಯಾವ ಇಲಾಖೆಯಲ್ಲೂ ಹಣ ಬಳಸಲು ಆಗುವುದಿಲ್ಲ. 650 ಕೋಟಿ ರು. ಅನ್ನು ಯಾರೋ ಒಬ್ಬರಿಗೆ ಕೊಟ್ಟಿಲ್ಲ, ಕ್ಷೇತ್ರವಾರು ಅನುದಾನ ಹಂಚಿಕೆಯಾಗಿದೆ. ಸಮರ್ಪಕ ಉತ್ತರವನ್ನು ಲೋಕಾಯುಕ್ತ ನೋಟಿಸ್‌ಗೆ ನೀಡುತ್ತೇನೆ ಎಂದು ಸಚಿವ ಜಮೀರ್‌ ಹೇಳಿದರು.