ವಿಪಕ್ಷ ನಾಯಕ ಆರ್. ಅಶೋಕ ಅವರು, ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ಸರ್ಕಾರ ಕದ್ದುಮುಚ್ಚಿ ನೀರು ಬಿಡುತ್ತಿದೆ ಎಂದು ಆರೋಪಿಸಿದ್ದಾರೆ. ಇದರಿಂದ ಬೆಂಗಳೂರು, ಮೈಸೂರು, ಮಂಡ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ ಎಂದು ಎಚ್ಚರಿಸಿದ್ದು, ಬಿಜೆಪಿ ಕೆಆರ್‌ಎಸ್‌ ಡ್ಯಾಂ ಬಳಿ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ದಾವಣಗೆರೆ (ಜು.30): ಕೊಡಗಿನ ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ಕಳೆದ ಒಂದು ತಿಂಗಳಿನಿಂದಲೂ ಕದ್ದು ಮುಚ್ಚಿ ನೀರು ಬಿಡುಗಡೆ ಮಾಡುತ್ತಿದ್ದು, ಬೆಂಗಳೂರಷ್ಟೇ ಅಲ್ಲ, ಮಂಡ್ಯ, ಮೈಸೂರಿಗೂ ಕುಡಿಯುವ ನೀರಿನ ಸಮಸ್ಯೆ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಮೈಸೂರು, ಮಂಡ್ಯ ಜನಕ್ಕೆ ಕುಡಿಯೋಕೂ ನೀರು ಇರೋಲ್ಲ

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕದ್ದು ಮುಚ್ಚಿ ತಮಿಳುನಾಡಿಗೆ ಹಾರಂಗಿ ಜಲಾಶಯದಿಂದ ನೀರು ಬಿಡುತ್ತಿದ್ದು, ಇದು ಹೀಗೆಯೇ ಮುಂದುವರಿದರೆ ಬೆಂಗಳೂರಷ್ಟೇ ಅಲ್ಲ, ಮಂಡ್ಯ, ಮೈಸೂರಿಗೂ ಕುಡಿಯುವ ನೀರಿಗೆ ಹಾಹಾಕಾರವಾಗಲಿದೆ ಎಂದು ಎಚ್ಚರಿಸಿದರು.

ಬಿಜೆಪಿ ಹೋರಾಟಕ್ಕೆ ಸಜ್ಜು

ಬೆಂಗಳೂರಿನಲ್ಲಿ 1.5 ಕೋಟಿ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ. ಸರ್ಕಾರ ತಕ್ಷಣವೇ ಮೇಲ್ಮನವಿ ಸಲ್ಲಿಸಬೇಕು. ನ್ಯಾಯ ಸಿಗುವವರೆಗೂ ಹೋರಾಟ ನಡೆಸಬೇಕು. ನಾವೂ ಮಂಡ್ಯದಲ್ಲಿ ಹೋರಾಟ ಶುರು ಮಾಡುತ್ತೇವೆ. ಇನ್ನೆರಡು ದಿನಗಳಲ್ಲೇ ಕೆಆರ್‌ಎಸ್ ಡ್ಯಾಂ ಬಳಿ ಬಿಜೆಪಿಯಿಂದ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ನಿಮ್ಮ ವೈಫಲ್ಯದಿಂದಲೇ ಕಾವೇರಿ ನೀರು ಬಿಡುಗಡೆಗೆ ಆದೇಶವಾಗಿದ್ದು, ನಿಮ್ಮ ಲೀಗಲ್ ಟೀಂ ಏನು ಮಾಡುತ್ತಿದೆ?. ಕಾವೇರಿ ನೀರಿಗಾಗಿ ಕಾನೂನು ತಜ್ಞರ ಜೊತೆಗೆ ಸಭೆ ಮಾಡಿ, ಚರ್ಚಿಸಬೇಕಾಗಿತ್ತು ಎಂದು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ‍ಆದವರಿಗೆ ನಮ್ಮ ಜಲಾಶಯ ಮುಖ್ಯವೋ ಅಥವಾ ಕಾಕ್ರೋಚ್ ಪಾರ್ಟಿ ಸಭೆ ಮುಖ್ಯವೋ?. ಇಲ್ಲಿ ರೈತರು ಸಂಕಷ್ಟದಲ್ಲಿದ್ದರೆ ಮುಖ್ಯಮಂತ್ರಿಯವರು ದೆಹಲಿಯಲ್ಲಿನ ಕಾಕ್ರೋಚ್ ಪಾರ್ಟಿ ಪ್ರತಿಭಟನೆಗೆ ಹೋಗಿದ್ದರು ಎಂದು ಟೀಕಿಸಿದರು.

ವಿಜಯ್‌ ಬರುವುದು ಫೋಟೋಶೂಟ್‌ಗೆ:

ತಮಿಳುನಾಡಿನಲ್ಲೂ ಇಂಡಿ ಒಕ್ಕೂಟದ ಸರ್ಕಾರವೇ ಇದೆ. ಯಾವ ಪುರುಷಾರ್ಥಕ್ಕೆ ತಮಿಳುನಾಡು ಮುಖ್ಯಮಂತ್ರಿಯನ್ನು ವಿಧಾನಸೌಧಕ್ಕೆ ಕರೆಸುತ್ತೀದ್ದೀರಿ. ತಮಿಳುನಾಡು ಮುಖ್ಯಮಂತ್ರಿ ಇಲ್ಲಿಗೆ ಬಂದು ಮೇಕೆದಾಟು ಯೋಜನೆಗೆ ವಿರೋಧ ಇದೆ ಎನ್ನುತ್ತಾರೆ. ಇದು ಫೋಟೋಶೂಟ್‌ಗೆ ಮಾಡುವ ಕಾರ್ಯಕ್ರಮ. ಸುಮ್ಮನೇ ₹10 ಕೋಟಿ ವ್ಯರ್ಥವಾಗುತ್ತದೆ. ಆ ಹಣವನ್ನು ತಕ್ಷಣ‍ವೇ ಬರ ಪರಿಹಾರಕ್ಕೆ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.