ದೇವೆಗೌಡರಿಂದ ಬಿ ಫಾರಂ ಪಡೆಯುವ ವೇಳೆ ಕಣ್ಣೀರಿಟ್ಟ ನಿಖಿಲ್ ಕುಮಾರಸ್ವಾಮಿ
ರಾಮನಗರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ನಿಖಿಲ್ ಕುಮಾರಸ್ವಾಮಿ ಬೆಳಗ್ಗೆ ಮಾಜಿ ಪ್ರಧಾನಿಗಳು ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರವರ ಆಶೀರ್ವಾದ ಪಡೆದು, ಬಿ-ಫಾರಂ ಪಡೆದುಕೊಂಡರು.
ರಾಮನಗರ (ಏ.18): ರಾಮನಗರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ನಿಖಿಲ್ ಕುಮಾರಸ್ವಾಮಿ ಬೆಳಗ್ಗೆ ಮಾಜಿ ಪ್ರಧಾನಿಗಳು ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರವರ ಆಶೀರ್ವಾದ ಪಡೆದು, ಬಿ-ಫಾರಂ ಪಡೆದುಕೊಂಡರು. ಕುಟುಂಬ ಸಮೇತ ದೇವೇಗೌಡ ಅವರಿಂದ ಆಶೀರ್ವಾದ ಪಡೆದ ನಿಖಿಲ್ ಕುಮಾರಸ್ವಾಮಿ ಬಿ-ಪಾರಂ ಪಡೆಯುವ ವೇಳೆ ಕೆಲ ಕ್ಷಣ ಭಾವುಕರಾಗಿ ಕಣ್ಣೀರಿಟ್ಟರು. ಈ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ, ಪತ್ನಿ ರೇವತಿ ಹಾಜರಿದ್ದರು.
ನಿಖಿಲ್ ಕುಮಾರಸ್ವಾಮಿ 74.81 ಕೋಟಿ ಒಡೆಯ: ರಾಮನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ನಿಖಿಲ್ ಕುಮಾರಸ್ವಾಮಿ 74.81 ಕೋಟಿ ರು. ಆಸ್ತಿ ಘೋಷಿಸಿಕೊಂಡಿದ್ದಾರೆ. ನಿಖಿಲ್ರವರು 46.81 ಕೋಟಿ ಮೌಲ್ಯದ ಚರಾಸ್ತಿ ಹಾಗೂ 28 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 74.81 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದಾರೆ. 2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ವೇಳೆ ಒಟ್ಟು 75 ಕೋಟಿ ರು. ಮೌಲ್ಯದ ಚರಾಸ್ತಿ - ಸ್ಥಿರಾಸ್ತಿ ಹೊಂದಿರುವುದಾಗಿ ಹೇಳಿಕೊಂಡಿದ್ದರು.
ಬಿಜೆಪಿ ಬಿಟ್ಟು ಬರುವವರಲ್ಲಿ ಯಡಿಯೂರಪ್ಪ ಒಬ್ರು ಬಾಕಿ: ಪ್ರಿಯಾಂಕ್ ಖರ್ಗೆ
ನಿಖಿಲ್ ಪತ್ನಿ ರೇವತಿ ಬಳಿ 1.79 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 28.36 ಲಕ್ಷ ರು. ಮೌಲ್ಯದ ಸ್ಥಿರಾಸ್ತಿ ಇದೆ. ನಿಖಿಲ್ ಕುಟುಂಬದ ಒಟ್ಟಾರೆ ಆಸ್ತಿ ಮೌಲ್ಯ 104.96 ಕೋಟಿ ರುಪಾಯಿ ಆಗಿದೆ. 2021-22ರಲ್ಲಿ ನಿಖಿಲ್ ವಾರ್ಷಿಕ 4,27,75,000 ರು. ಆದಾಯ ಘೋಷಿಸಿದ್ದಾರೆ. ನಿಖಿಲ್ ಬಳಿ ಸದ್ಯ ನಗದು 1 ಲಕ್ಷ 1 ಸಾವಿರದ 980 ರು., ಪತ್ನಿಯ ಬಳಿ 3,53,525 ರು., ನಿಖಿಲ್ ಅವರ ಮಾಲೀಕತ್ವದ ಚನ್ನಾಂಬಿಕ ಫಿಲ್ಮ್ನಲ್ಲಿ 108594 ರು. ಇದೆ. ವಿವಿಧ ಬ್ಯಾಂಕುಗಳಲ್ಲಿ ವೈಯಕ್ತಿಕ 10.60 ಕೋಟಿ ರು. ಇದೆ. ಎನ್.ಕೆ.ಎಂಟರ್ಟೈನ್ಮೆಂಟ್ಸ್ ಹೆಸರಿನ ಖಾತೆಯಲ್ಲಿ 7.60 ಲಕ್ಷ, ಚನ್ನಾಂಬಿಕ ಫಿಲಿಮ್ಸ್ ಹೆಸರಿನ ಖಾತೆಗಳಲ್ಲಿ 5 ಲಕ್ಷ 86 ಸಾವಿರ ರು.ಗಳಿದೆ. ಕಸ್ತೂರಿ ಮೀಡಿಯಾ ಪ್ರೈ.ಲಿ ನಲ್ಲಿ 76 ಲಕ್ಷ , ಹಾರಿಜಾನ್ ರಿಯಾಲಿಟಿ ಸಂಸ್ಥೆಯಲ್ಲಿ 60 ಲಕ್ಷ ರುಪಾಯಿ ಹೂಡಿಕೆ ಮಾಡಿದ್ದಾರೆ.
ನಿಖಿಲ್ ಅವರ ಹೆಸರಿನಲ್ಲಿ ಕೃಷಿ ಭೂಮಿ ಇಲ್ಲ. ಬೆಂಗಳೂರಿನ ರಿಚಮಂಡ್ ಟೌನ್ ನಲ್ಲಿ 21500 ಚದರಡಿಯ ವಾಣಿಜ್ಯ ಕಟ್ಟಡವಿದೆ. 2014ರಲ್ಲಿ ಇವರು ಈ ಆಸ್ತಿಯನ್ನು 5.47 ಕೋಟಿ ರು.ಗೆ ಖರೀದಿಸಿದ್ದರು. ಇದರ ಪ್ರಸಕ್ತ ಮಾರುಕಟ್ಟೆ ಮೌಲ್ಯ 28 ಕೋಟಿ ರುಪಾಯಿ ಇದೆ. ರೇವತಿ ಅವರಿಗೆ ಕೊಡುಗೆಯಾಗಿ ಬಂದಿರುವ ಬೆಂಗಳೂರು ಅತ್ತಿಗುಪ್ಪೆಯಲ್ಲಿರುವ ತಿರುಮಲ ಲಕ್ಷೂರಿಯಾ ಅಪಾಟರ್ಮೆಂಟ್ ನಲ್ಲಿ ಒಂದು ಫ್ಲಾಟ್ ಇದ್ದು, ಇದರ ಪ್ರಸಕ್ತ ಮಾರುಕಟ್ಟೆಮೌಲ್ಯ 28.36 ಲಕ್ಷ ರು.ಗಳಾಗಿದೆ. ನಿಖಿಲ್ ತನ್ನ ಮಾಲೀಕತ್ವದ ಎನ್.ಕೆ.ಎಂಟರ್ಟೈನ್ಮೆಂಟ್ ಸಂಸ್ಥೆಯ ಮೂಲಕ ಖರೀದಿಸಿರುವ ರೇಂಜ್ ರೋವರ್ ಕಾರು, ವ್ಯಾನಿಟಿ ವ್ಯಾನ್ (ಜಿಮ್), ಇನ್ನೋವ ಕ್ರಿಸ್ಟಕಾರು, ಲ್ಯಾಂಬೊಗ್ರ್ನಿ ಅವೆಂಟೋರ್ ಕಾರು, ವ್ಯಾನಿಟಿ ವ್ಯಾನ್ (ಕ್ಯಾರವಾನ್) ವಾಹನಗಳಿವೆ. 80 ಲಕ್ಷ ರು.ಮೌಲ್ಯದ ಜಿಮ್ ಉಪಕರಣಗಳಿವೆ.
ನಿಖಿಲ್ ತಮ್ಮ ತಾಯಿ ಅನಿತಾ ಕುಮಾರಸ್ವಾಮಿ ಅವರಿಗೆ 4.91 ಕೋಟಿ ಮತ್ತು ತಂದೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ 9.18 ಲಕ್ಷ ರು. ಸಾಲ ನೀಡಬೇಕಿದೆ. ನಿಖಿಲ್ ಬಳಿ 64.45 ಲಕ್ಷ ರು. ಮೌಲ್ಯದ 1151 ಗ್ರಾಂ ಚಿನ್ನ, 11 ಲಕ್ಷ ರೂ ಮೌಲ್ಯದ 16 ಕೆಜಿ ಬೆಳ್ಳಿ ಇದೆ. ರೇವತಿ ಬಳಿ 36.35 ಲಕ್ಷ ರೂ ಬೆಲೆ ಬಾಳುವ 641 ಗ್ರಾಂ ಚಿನ್ನ, 11.33 ಲಕ್ಷ ರು. ಮೌಲ್ಯದ 12.50 ಕ್ಯಾರೆಟ್ ವಜ್ರ ಮತ್ತು 23.20 ಲಕ್ಷ ರುಪಾಯಿ ಬೆಲೆ ಉಳ್ಳ 33.5 ಕೇಜಿ ಬೆಳ್ಳಿ ಇದೆ. ನಿಖಿಲ್ ಅವರು ಬ್ಯಾಂಕುಗಳಿಗೆ 38.94 ಕೋಟಿ ರು. ಸಾಲ ಬಾಕಿ ಉಳಿಸಿಕೊಂಡಿದ್ದಾರೆ.
ನನ್ನ, ಶೆಟ್ಟರ್ ಬಗ್ಗೆ ಮಾತಾಡುವ ನೈತಿಕತೆ ಬಿಎಸ್ವೈಗಿಲ್ಲ: ಲಕ್ಷ್ಮಣ ಸವದಿ
ಬೆಂ-ಮೈ ಹೆದ್ದಾರಿ ಜಾಮ್: ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಗರದ ಮಿನಿ ವಿಧಾನಸೌಧದ ಎದುರು ಭಾರೀ ಜನಸ್ತೋಮದೊಂದಿಗೆ ಎರಡೂ ಪಕ್ಷಗಳ ಸಹಸ್ರಾರು ಕಾರ್ಯಕರ್ತರು ಜಮಾಯಿಸಿದ್ದರು. ಇದರಿಂದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ವಾಹನ ಸಂಚಾರ ಅಸ್ತವ್ಯಸ್ಥಗೊಂಡು ಪ್ರಯಾಣಿಕರು ಕಿರಿಕಿರಿ ಅನುಭವಿಸಿದರು. ಪೊಲೀಸರು ವಾಹನ ಸಂಚಾರ ಸುಗಮಗೊಳಿಸಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂದಿತು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.