ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ. ಅವರ ಹತ್ಯೆಗೆ ನ್ಯಾಯ ಸಿಗುವವರೆಗೆ ವಿರಮಿಸುವುದಿಲ್ಲ. ಪ್ರವೀಣ್ ಕುಟುಂಬದೊಂದಿಗೆ ಬಿಜೆಪಿ ಸದಾ ಇರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಸುಳ್ಯ (ಮೇ.01): ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ. ಅವರ ಹತ್ಯೆಗೆ ನ್ಯಾಯ ಸಿಗುವವರೆಗೆ ವಿರಮಿಸುವುದಿಲ್ಲ. ಪ್ರವೀಣ್ ಕುಟುಂಬದೊಂದಿಗೆ ಬಿಜೆಪಿ ಸದಾ ಇರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಬಿಜೆಪಿ ರಾಷ್ಟಾ್ರಧ್ಯಕ್ಷ ಜೆ.ಪಿ.ನಡ್ಡಾ, ಕಳೆದ ವರ್ಷ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದಿ. ಪ್ರವೀಣ್ ನೆಟ್ಟಾರು ಅವರ ನೂತನ ಮನೆಗೆ ಭಾನುವಾರ ಸಂಜೆ ಭೇಟಿ ನೀಡಿದ ಅವರು ಮನೆಯವರಿಗೆ ಸಾಂತ್ವನ ಹೇಳಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಹತ್ಯೆಗೆ ಕಾರಣವಾದ ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದು, ಹತ್ಯೆಯ ಕುರಿತು ಎನ್ಐಎ ತನಿಖೆ ನಡೆಸುತ್ತಿದೆ ಎಂದರು. ಕೋಡ್ಗಿ, ಮುರುಳ್ಯ ಪರ ಪ್ರಚಾರ: ಕುಂದಾಪುರ ಬಳಿಯ ಸಾಲಿಗ್ರಾಮದಲ್ಲಿ ನಡೆದ ರೋಡ್ ಶೋನಲ್ಲಿ ನಡ್ಡಾ ಭಾಗಿಯಾಗಿ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೋಡ್ಗಿ ಅವರ ಪರ ಮತಯಾಚನೆ ಮಾಡಿದರು. ಬಳಿಕ, ಸುಳ್ಯದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಪರ ನಡ್ಡಾ ಪ್ರಚಾರ ನಡೆಸಿದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸಾಥ್ ನೀಡಿದರು.
ಪ್ರಧಾನಿ ಮೋದಿ ಮಾತಿಗೆ ಮರುಳಾಗಬೇಡಿ: ಎಚ್.ಡಿ.ಕುಮಾರಸ್ವಾಮಿ
ನಡ್ಡಾ ರೋಡ್ ಶೋನಲ್ಲಿ ನಡೆದುಕೊಂಡೇ ಬಂದ ಹಾಲಾಡಿ: ಇಲಿನ ಸಾಲಿಗ್ರಾಮದಲ್ಲಿ ಭಾನುವಾರ ರೋಡ್ ಶೋ ನಡೆಸಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಾದರೂ, ರೋಡ್ ಶೋ ಆಕರ್ಷಣೆಯ ಕೇಂದ್ರವಾಗಿದ್ದದ್ದು ಮಾತ್ರ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು. ಕರೆಯದಿದ್ದರೂ ವೇದಿಕೆ ಹತ್ತುವವರ ಮಧ್ಯೆ, ವೇದಿಕೆಯಿಂದ ದೂರವೇ ನಿಲ್ಲುವ ಶೆಟ್ಟರು ಎಂದಿನಂತೆ ಇಲ್ಲಿಯೂ ವೇದಿಕೆ ಹತ್ತಲಿಲ್ಲ. ಸ್ವತಃ ನಡ್ಡಾ ಅವರೇ ತಾವಿದ್ದ ತೆರೆದ ಅಲಂಕೃತ ವಾಹವನನ್ನು ಏರುವಂತೆ ಕರೆದರೂ, ನಯವಾಗಿ ನಿರಾಕರಿಸಿದರು.
ಅಭ್ಯರ್ಥಿ ಕಿರಣ್ ಕೊಡ್ಗಿ ಅವರನ್ನು ತೋರಿಸಿ, ಬೆಂಬಲಿಸಿ ಎಂದು ಜನರಿಗೆ ಕೈ ಮುಗಿಯುತ್ತಾ, ವಾಹನದ ಹಿಂದೆ ಕಾರ್ಯಕರ್ತರ ನಡುವೆ ನಡೆದುಕೊಂಡೇ ಬಂದರು. ಕಾರ್ಯಕರ್ತರು ಅವರಿಗೆ ಮುಗಿಲು ಮುಟ್ಟುವಂತೆ ಜೈಕಾರ ಹಾಕಿದರು. ನಡ್ಡಾ ಭಾಷಣ ಮುಗಿಸಿ ವಾಹನ ಇಳಿಯುತ್ತಿದ್ದಂತೆ ಓಡೋಡಿ ಬಂದ ಹಾಲಾಡಿ ಅವರ ಕೈಹಿಡಿದು ನಡ್ಡಾ ಕೆಲಕಾಲ ಮಾತನಾಡಿದರು. ಕುಂದಾಪುರ ಕ್ಷೇತ್ರದ ಪ್ರಸಕ್ತ ವಾತಾವರಣವನ್ನು ಹಾಲಾಡಿ ನಡ್ಡಾ ಅವರಿಗೆ ವಿವರಿಸಿ ಹೇಳಿದರು.
ಬ್ರಿಟಿಷರಂತೆ ಕಾಂಗ್ರೆಸ್ನಿಂದ ಒಡೆದು ಆಳುವ ನೀತಿ: ಸಚಿವ ಸುಧಾಕರ್
ಇದಕ್ಕೆ ಮೊದಲು ನಡ್ಡಾ ಅವರು ವಾಹನದಿಂದ ಭಾಷಣ ಮಾಡುವಾಗ, ಹಿರಿಯರು ಕಿರಿಯರಿಗೆ ಚುಕ್ಕಾಣಿಯನ್ನು ಹಸ್ತಾಂತರಿಸುತ್ತಾರೆ, ವಾಹನ ನಿಲ್ಲದೇ ಮುಂದಕ್ಕೆ ಓಡುತ್ತದೆ, ಅಭಿವೃದ್ಧಿ ಮುಂದುವರಿಯುತ್ತದೆ. ಹಾಲಾಡಿ ಶ್ರೀನಿವಾಸ ಶೆಟ್ಟರು ಕಿರಣ್ ಕೊಡ್ಗಿ ಅವರಿಗೆ ಅವಕಾಶ ನೀಡಿದ್ದಾರೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ಶ್ಲಾಘಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
