ಬಿಜೆಪಿ ಹೈಜಾಕ್‌ ಸಂಸ್ಕೃತಿ ಅಳವಡಿಸಿಕೊಂಡಿದ್ದು, ಚುನಾವಣಾ ಆಯೋಗ ಮತ್ತು ಪೊಲೀಸ್‌ ಇಲಾಖೆಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ ಎಂದು ನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.

ತುಮಕೂರು (ಮೇ.9) : ಬಿಜೆಪಿ ಹೈಜಾಕ್‌ ಸಂಸ್ಕೃತಿ ಅಳವಡಿಸಿಕೊಂಡಿದ್ದು, ಚುನಾವಣಾ ಆಯೋಗ ಮತ್ತು ಪೊಲೀಸ್‌ ಇಲಾಖೆಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ ಎಂದು ನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೇನಾಮಿ ಹೆಸರಿನಲ್ಲಿ 3 ರಿಂದ 4 ರೂಮುಗಳನ್ನು ಬುಕ್‌ ಮಾಡಿ ಅಲ್ಲಿ ವಾಸ್ತವ್ಯ ಮಾಡಿದ್ದ ಕೆಲ ಮುಖಂಡರು ಮತದಾರರಿಗೆ ಹಣ ಹಂಚಲು ವ್ಯವಸ್ಥೆ ಮಾಡಿಕೊಂಡಿದ್ದು, ಇದನ್ನು ಪತ್ತೆಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ ಕೆಲವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ದೇಶದಲ್ಲೇ ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟ: ಪ್ರಿಯಾಂಕಾ ಗಾಂಧಿ

ಚುನಾವಣಾ ಸಮಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕಾದ ಚುನಾವಣಾ ಆಯೋಗ ಮತ್ತು ಪೊಲೀಸ್‌ ಇಲಾಖೆ ಸ್ಥಳೀಯ ಸಂಸದರು ಮತ್ತು ಶಾಸಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್‌, ಅಭಿವೃದ್ಧಿ ರೆವೂಲ್ಯೂಷನ್‌ ಫೋರಂನ ಕುಂದರನಹಳ್ಳಿ ರಮೇಶ್‌ ಮುಂತಾದವರು ವಸತಿಗೃಹದ ರೂಮುಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಇವರಿಗೆ ನಗರದಲ್ಲಿ ಸ್ವಂತ ಮನೆಗಳಿದ್ದರೂ ಬಾಡಿಗೆ ರೂಮುಗಳನ್ನು ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಅವರು, ಮತದಾರರಿಗೆ ಆಸೆ, ಆಮಿಷವೊಡ್ಡಿ ಬಿಜೆಪಿ ಅಭ್ಯರ್ಥಿ ಪರ ಮತದಾನ ಮಾಡಲು ಪ್ರೇರೇಪಿಸುತ್ತಿದ್ದು, ಈ ಬಗ್ಗೆ ಚುನಾವಣಾ ಆಯೋಗ ಮತ್ತು ಪೊಲೀಸ್‌ ಇಲಾಖೆ ಕಾನೂನು ಕ್ರಮಕೈಗೊಳ್ಳಬೇಕಿತ್ತು. ಅದನ್ನು ಬಿಟ್ಟು ಈ ಬಗ್ಗೆ ಮಾಹಿತಿ ನೀಡಿದ ನಿಖಿಲ್‌, ಸಾಧಿಕ್‌, ರಫೀಕ್‌, ಹೇಮಂತ್‌ ಎಂಬುವರ ವಿರುದ್ಧ ದರೋಡೆ ಪ್ರಕರಣ ದಾಖಲಿಸಿ, ಹಣ ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ ಎಂದರು.

ವೀರಶೈವ ಸಮಾಜದ ಮುಖಂಡರು, ಪಕ್ಷೇತರ ಅಭ್ಯರ್ಥಿಯಾಗಿರುವ ನನಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಂತೆ ಅವರ ಹಿಂಬಾಲಕರನ್ನು ಸೇರಿಸಿಕೊಂಡು ಇನ್ನೊಂದು ಸುದ್ದಿಗೋಷ್ಠಿ ನಡೆಸಿ, ನನ್ನ ವಿರುದ್ಧ ಅಪ್ಪ, ಮಕ್ಕಳು ಎತ್ತಿಕಟ್ಟಿದ್ದಾರೆ ಎಂದು ದೂರಿದರು.

ಚುನಾವಣೆಗೂ ಮುನ್ನವೇ ಆಪರೇಷನ್ ಕಮಲ ಆರಂಭಿಸ್ತಾ ಬಿಜೆಪಿ..?

ಮುಖಂಡರಾದ ಜೈಸಿಂಹರಾವ್‌, ಧನಿಯಾಕುಮಾರ್‌, ಎ.ಮಹಲಿಂಗಯ್ಯ, ಡಾ. ಸಂಜಯನಾಯಕ್‌, ರಾಮಲಿಂಗೇಗೌಡ, ಎಸ್‌.ಆರ್‌. ಶ್ರೀಧರಮೂರ್ತಿ, ಗೋವಿಂದರಾಜು, ಜೆ.ಕೆ.ಅನಿಲ್‌, ಚಿಕ್ಕರಾಮಯ್ಯ, ಜಿ.ಕೆ.ಬಸವರಾಜು, ಊರುಕೆರೆ ನಂಜುಂಡಪ್ಪ, ಗೋಕುಲ ಮಂಜುನಾಥ್‌ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.