ಬಿಜೆಪಿ ಅಧಿಕಾರಕ್ಕೆ ತರಲು ಬಿಎಸ್‌ವೈ ಶಪಥ: ಬಿ.ವೈ.ವಿಜಯೇಂದ್ರ

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದರೆ, ಕಿಂಗ್‌ಮೇಕರ್‌ ಆಗುವ ಭ್ರಮೆಯಲ್ಲಿ ಜೆಡಿಎಸ್‌ ಇದೆ. ಈ ಎರಡೂ ಪಕ್ಷ ಎಂದಿಗೂ ಅಧಿಕಾರಕ್ಕೆ ಬರುವುದಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು. 

Karnataka Election 2023 BS Yediyurappa vows to bring BJP to power Says BY Vijayendra gvd

ಕೆ.ಆರ್‌.ಪೇಟೆ (ಏ.15): ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದರೆ, ಕಿಂಗ್‌ಮೇಕರ್‌ ಆಗುವ ಭ್ರಮೆಯಲ್ಲಿ ಜೆಡಿಎಸ್‌ ಇದೆ. ಈ ಎರಡೂ ಪಕ್ಷ ಎಂದಿಗೂ ಅಧಿಕಾರಕ್ಕೆ ಬರುವುದಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು. ಪಟ್ಟಣದಲ್ಲಿ ಜಯಮ್ಮ-ರಾಮಸ್ವಾಮಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಈ ಬಾರಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈಗಾಗಲೇ ಯಡಿಯೂರಪ್ಪ ಮತ್ತೆ ಬಿಜೆಪಿಯನ್ನ ಅಧಿಕಾರಕ್ಕೆ ತರಲು ಶಪಥ ಮಾಡಿದ್ದಾರೆ ಎಂದು ಹೇಳಿದರು.

ಮನೆಯಲ್ಲಿ ಕೂರಲಿಲ್ಲ: ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಾಗ ವಿಪಕ್ಷಗಳು ಮನೆಯಲ್ಲಿ ಕೂರುತ್ತಾರೆ ಎಂದು ಭಾವಿಸಿದ್ದರು. ಆದರೆ, ಯಡಿಯೂರಪ್ಪನವರು ಮನೆಯಲ್ಲಿ ಕೂರಲಿಲ್ಲ. ಬದಲಿಗೆ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ರಾಜ್ಯ ಪ್ರವಾಸ ಮಾಡಿದರು. ಅದೇ ರೀತಿ ಈಗಲೂ ಯಡಿಯೂರಪ್ಪನವರು ನೀಡಿರುವ ಭರವಸೆಯಂತೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರ ಸ್ಥಾಪಿಸುವುದು ನಿಶ್ಚಿತ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎಂದಿಗೂ ಅಧಿಕಾರಕ್ಕೆ ಬರುವುದಿಲ್ಲ ಎಂದು ನುಡಿದರು. ಶಾಸಕನಾಗಿ ಗೆದ್ದು ಬಂದ ಒಬ್ಬ ಜನಪ್ರತಿನಿಧಿ ರಾಜೀನಾಮೆ ಕೊಡೋಕೆ ನೂರು ಸಲ ಯೋಚನೆ ಮಾಡುತ್ತಾನೆ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಎಂಬ ಉದ್ದೇಶದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಧೀಮಂತ ವ್ಯಕ್ತಿ ನಾರಾಯಣಗೌಡ. ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ಯಾರೂ ನಿರೀಕ್ಷಿಸಿರಲಿಲ್ಲ. ಅಚ್ಚರಿಯ ರೀತಿಯಲ್ಲಿ ನಾರಾಯಣಗೌಡರು ಗೆಲುವು ಸಾಧಿಸಿದರು ಎಂದರು.

ರಾಮನಗರದ 4 ಕ್ಷೇತ್ರಗಳಲ್ಲೂ ಬಿಜೆಪಿಯದ್ದೇ ಗೆಲುವು: ಸಚಿವ ಅಶ್ವತ್ಥ ನಾರಾ​ಯಣ

ಉಪ ಚುನಾವಣೆ ಗೆಲುವು ದಾಖಲೆ: ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಹುಲ್ಲು ಬೆಳೆಯೋಲ್ಲ ಎಂದುಕೊಂಡಿದ್ದವರಿಗೆ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ನಾರಾಯಣಗೌಡರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಮತದಾರರು ಗೆಲ್ಲಿಸಿದರು. ಒಕ್ಕಲಿಗರು, ವೀರಶೈವರು, ದಲಿತರು, ಹಾಲುಮತ ಸಮಾಜ, ಅಲ್ಪಸಂಖ್ಯಾತರು ಎಲ್ಲರೂ ಮತ ಕೊಟ್ಟರು. ಜನರ ಋುಣ ತೀರಿಸಲು ನಾರಾಯಣಗೌಡರು ಕೆ.ಆರ್‌.ಪೇಟೆ ಕ್ಷೇತ್ರಕ್ಕೆ 1,800 ಕೋಟಿ ರು.ಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಉಪ ಚುನಾವಣೆಯಲ್ಲಿ ಮತದಾರರು ಕೈಹಿಡಿದಂತೆ ಈ ಚುನಾವಣೆಯಲ್ಲೂ ಕೈ ಹಿಡಿಯಬೇಕು ಎಂದು ಮನವಿ ಮಾಡಿದರು.

ಕೆ.ಆರ್‌.ಪೇಟೆಯೇ ಮೊದಲ ಫಲಿತಾಂಶ: ಪಕ್ಷ ಶಿಕಾರಿಪುರಕ್ಕೆ ನನ್ನನ್ನು ಅಭ್ಯರ್ಥಿ ಮಾಡಿರುವುದು, ಕೆ.ಆರ್‌.ಪೇಟೆಗೆ ನಾರಾಯಣಗೌಡರನ್ನು ಅಭ್ಯರ್ಥಿ ಮಾಡಿರುವುದು ಸಂತೋಷದ ವಿಷಯ. ನನ್ನ ಜೀವನದಲ್ಲಿ ಮೊದಲ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ನಾರಾಯಣಗೌಡರ ಪರವಾಗಿ ನನ್ನ ಮೊದಲ ಚುನಾವಣಾ ಪ್ರಚಾರ ನಡೆಸುತ್ತಿದ್ದೇನೆ. ಮೊದಲ ಫಲಿತಾಂಶ ಬಿಜೆಪಿಯದ್ದೇ ಇರುತ್ತದೆ. ಅದರಲ್ಲೂ ಕೆ.ಆರ್‌.ಪೇಟೆ ಕ್ಷೇತ್ರದ ಮೂಲಕವೇ ಮೊದಲ ಸ್ಥಾನ ಗೆಲ್ಲಲಿದ್ದೇವೆ ಎಂದರು. ನನ್ನದು ಶಿಕಾರಿಪುರಕ್ಕಷ್ಟೇ ಸೀಮಿತವಾದ ವ್ಯಾಪ್ತಿಯಲ್ಲ. ರಾಜ್ಯದ ಜನರ ನಿರೀಕ್ಷೆಯಂತೆ ಎಲ್ಲಾ ಕಡೆ ಪ್ರವಾಸ ಮಾಡುತ್ತೇನೆ. ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಸ್ವಾರ್ಥಕ್ಕಾಗಿ ಯಾರೂ ಯೋಚನೆ ಮಾಡಬೇಡಿ. ಸಣ್ಣಪುಟ್ಟತಪ್ಪುಗಳನ್ನ ಮರೆತು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ. ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದು ದಾಖಲೆ ಮಾಡುತ್ತೇವೆ ಎಂದು ವಿಶ್ವಾಸದಿಂದ ನುಡಿದರು.

ಜನ ಗೆಲ್ಲಿಸುತ್ತಾರೆ ಹೆದರಬೇಡಿ: ವಿಪಕ್ಷಗಳು ಏನು ಬೇಕಾದರೂ ಬಂದು ಭಾಷಣ ಮಾಡಲಿ. ನಾರಾಯಣಗೌಡರು ಕಾಂಗ್ರೆಸ್‌ಗೆ ಸೇರುವರು ಎಂದು ಅಪಪ್ರಚಾರ ಮಾಡಿದರು. ಯಡಿಯೂರಪ್ಪ ಅವರ ಆಶೀರ್ವಾದ ಪಡೆದು ಒಂದು ನಿರ್ಧಾರ ಮಾಡಿದ್ದು ನಾರಾಯಣಗೌಡ. ನಿಮ್ಮನ್ನ ನಂಬಿ ಬಂದಿದ್ದೇನೆ. ಯಾವ ಕಾರಣಕ್ಕೂ ಪಕ್ಷಕ್ಕೆ ನಾನು ದ್ರೋಹ ಮಾಡಲ್ಲ. ಸೋಲು-ಗೆಲುವು ಏನೇ ಆಗಲಿ. ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದರು. ಕೆ.ಆರ್‌.ಪೇಟೆ ಜನ ಅತಿ ಹೆಚ್ಚಿನ ಮತಗಳಿಂದ ನಿಮ್ಮನ್ನು ಗೆಲ್ಲಿಸುತ್ತಾರೆ. ಭಯಪಡಬೇಡಿ, ವಿಶ್ವಾಸವಿಡಿ ಎಂದು ನಾರಾಯಣಗೌಡಗೆ ಅಭಯ ನೀಡಿದರು. ಸಚಿವ ಕೆ.ಸಿ.ನಾರಾಯಣಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಪಿ.ಉಮೇಶ್‌, ತಾಲೂಕು ಘಟಕದ ಅಧ್ಯಕ್ಷ ಅರವಿಂದ್‌ ಪರಮೇಶ್‌, ಮುಖಂಡರಾದ ಕಿಕ್ಕೇರಿ ಪ್ರಭಾಕರ್‌, ಶೀಳನೆರೆ ಅಂಬರೀಶ್‌, ಮೂಡಾ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್‌, ಬ್ಯಾಲದಕೆರೆ ಪಾಪೇಗೌಡ, ಬೂಕನಕೆರೆ ಜವರಾಯಿಗೌಡ, ಮೇಲುಕೋಟೆ ಕ್ಷೇತ್ರದ ಅಭ್ಯಥಿ ಡಾ.ಇಂದ್ರೇಶ್‌ ಇತರರಿದ್ದರು.

ಸಿದ್ದರಾಮಯ್ಯ ಸೋಲಿಸುವ ಉದ್ದೇಶದಿಂದ ನನ್ನನ್ನು ಕಣಕ್ಕಿಳಿಸಿದ್ದಾರೆ: ಸಚಿವ ವಿ.ಸೋಮಣ್ಣ

ಕೆಲವರಿಂದ ಸಮ್ಮಿಶ್ರ ಸರ್ಕಾರದ ಕನಸು: ಕೆಲವರು ಸಮ್ಮಿಶ್ರ ಸರ್ಕಾರ ಬರಲಿ, ತಮ್ಮ ಬೇಳೆ ಬೇಯಿಸಿಕೊಳ್ಳಬಹುದು ಎಂದು ಕಾಯ್ತಿದ್ದಾರೆ. ಮತ್ತೊಂದು ಪಕ್ಷ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹಗಲುಕನಸು ಕಾಡುತ್ತಿದೆ. ಈ ಇಬ್ಬರ ಆಸೆ ಈಡೇರೋದಿಲ್ಲ ಎಂದು ಕಾಂಗ್ರೆಸ್‌-ಜೆಡಿಎಸ್‌ ಕುರಿತು ವ್ಯಂಗ್ಯವಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೆಲಸಗಳನ್ನ ಜನ ಮೆಚ್ಚಿದ್ದಾರೆ. ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಬರೋದು ಸೂರ್ಯ-ಚಂದ್ರರಷ್ಟೇ ಸತ್ಯ ಎಂದು ನುಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios