ಕರ್ನಾಟಕ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಏ.27ರ ಮಂಗಳೂರು ರೋಡ್‌ ಶೋ ಕಾರ್ಯಕ್ರಮ ಮಂದೂಡಿಕೆಯಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಏ.30ರಂದು ಪುತ್ತೂರು ಹಾಗೂ ಬೈಂದೂರಿಗೆ ಆಗಮಿಸುವುದು ಬಹುತೇಕ ಖಚಿತವಾಗಿದೆ.

ಮಂಗಳೂರು (ಏ.25) : ಕರ್ನಾಟಕ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಏ.27ರ ಮಂಗಳೂರು ರೋಡ್‌ ಶೋ ಕಾರ್ಯಕ್ರಮ ಮಂದೂಡಿಕೆಯಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಏ.30ರಂದು ಪುತ್ತೂರು ಹಾಗೂ ಬೈಂದೂರಿಗೆ ಆಗಮಿಸುವುದು ಬಹುತೇಕ ಖಚಿತವಾಗಿದೆ.

ಅಮಿತ್‌ ಶಾ(Amit shah) ಅವರು ಏ.27ರಂದು ಮಂಗಳೂರು ದಕ್ಷಿಣ ಕ್ಷೇತ್ರ(Mangaluru south constituency)ದಲ್ಲಿ ರೋಡ್‌ಶೋ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಅಂದೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul gandhi) ಅವರ ರೋಡ್‌ಶೋ ನಿಗದಿಯಾಗಿರುವುದರಿಂದ ಭದ್ರತೆ ಸಲುವಾಗಿ ಒಂದೇ ದಿನ ಎರಡು ರೋಡ್‌ಶೋ ಏರ್ಪಡಿಸುವುದು ಬೇಡ ಎಂಬ ನಿರ್ಧಾರಕ್ಕೆ ಬಿಜೆಪಿಗರು ಬಂದಿದ್ದಾರೆ. ಹೀಗಾಗಿ ಅಮಿತ್‌ ಶಾ ಮಂಗಳೂರು ಭೇಟಿ ಕಾರ್ಯಕ್ರಮವನ್ನೇ ಸದ್ಯಕ್ಕೆ ಮುಂದೂಡಿದ್ದಾರೆ.

ಬೀದರ್‌ನಲ್ಲಿ ಕಮಲ ಅರಳಿಸಲು ರಣತಂತ್ರ: 6 ಕ್ಷೇತ್ರಗಳ ಮೇಲೆ ಕಣ್ಣಿಟ್ಟ ಶಾ

ಅಮಿತ್‌ ಶಾ ರೋಡ್‌ ಶೋ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ನಡೆಯಬೇಕಿದ್ದ ರಾಹುಲ್‌ ಗಾಂಧಿ ಅವರ ರೋಡ್‌ಶೋ ರದ್ದುಗೊಳಿಸಿ ಅದರ ಬದಲು ಸಹ್ಯಾದ್ರಿ ಮೈದಾನದಲ್ಲಿ ಸಮಾವೇಶಕ್ಕೆ ಕಾಂಗ್ರೆಸ್‌ ನಿರ್ಧರಿಸಿತ್ತು. ಈಗ ಅಮಿತ್‌ ಶಾ ರೋಡ್‌ಶೋ ಮುಂದೂಡಿರುವುದರಿಂದ ರಾಹುಲ್‌ ಗಾಂಧಿ ಅವರ ರೋಡ್‌ಶೋ ಮತ್ತೆ ನಿಗದಿಯಾಗುವ ಸಂಭವ ಇದೆ ಎನ್ನಲಾಗಿದೆ.

ಲಭ್ಯ ಮಾಹಿತಿ ಪ್ರಕಾರ ಅಮಿತ್‌ ಶಾ ಅವರು ಏ.29 ಅಥವಾ ಮೇ 5ಕ್ಕೆ ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಮಂಗಳೂರು ದಕ್ಷಿಣ, ಕಾಪು ಹಾಗೂ ವಿರಾಜಪೇಟೆಗಳಲ್ಲಿ ಅಮಿತ್‌ ಶಾ ರೋಡ್‌ಶೋ ಆಯೋಜನೆಯಾಗಲಿದೆ. ಅಮಿತ್‌ ಶಾ ಅವರಿಂದ ಮಂಗಳೂರಿನಲ್ಲಿ ಕೊಟ್ಟಾರದಿಂದ ನಾರಾಯಣಗುರು ವೃತ್ತ ವರೆಗೆ ರೋಡ್‌ಶೋ ನಡೆಸಲು ತೀರ್ಮಾನಿಸಲಾಗಿದೆ.

30ರಂದು ಯೋಗಿ ರೋಡ್‌ಶೋ:

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌(CM Yogi adityanath) ಅವರು ಏ.30ರಂದು ಆಗಮಿಸುವುದು ಬಹುತೇಕ ಅಂತಿಮವಾಗಿದೆ. ಅಂದು ಬೆಳಗ್ಗೆ 11 ಗಂಟೆಗೆ ಪುತ್ತೂರಿನಲ್ಲಿ ಹಾಗೂ ಸಂಜೆ 4 ಗಂಟೆಗೆ ಬೈಂದೂರಿನಲ್ಲಿ ರೋಡ್‌ಶೋ ಆಯೋಜಿಸಲು ತೀರ್ಮಾನಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಇದು ಅಂತಿಮಗೊಳ್ಳಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

50:50 ಕ್ಷೇತ್ರಗಳು ಅಮಿತ್‌ ಶಾ ಟಾರ್ಗೆಟ್‌: ಪರಿಣಾಮಕಾರಿ ಪ್ರಚಾರಕ್ಕೆ ಕೇಂದ್ರ ಗೃಹ ಸಚಿವ ಸೂಚನೆ

ಪುತ್ತೂರಿನಲ್ಲಿ ಬಿಜೆಪಿಗೆ ಬಂಡಾಯ ಬಿಸಿ ತಟ್ಟಿದ್ದು, ಬಿಜೆಪಿ ವಿರುದ್ಧ ಹಿಂದೂ ಸಂಘಟಕರಾಗಿರುವ ಪಕ್ಷೇತರ ಅಭ್ಯರ್ಥಿಯನ್ನು ಎದುರಿಸಲು ಯೋಗಿ ಆದಿತ್ಯನಾಥ್‌ರನ್ನು ಕರೆಸಿ ರೋಡ್‌ಶೋ ಆಯೋಜಿಸುವ ತಂತ್ರಗಾರಿಕೆ ಮೊರೆ ಹೋಗಲಾಗಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.